
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಇನ್ನೂ ಗೊಂದಲಗಳು ಮುಂದುರಿದುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಕಾನೂನು ಸಲಹೆಗಾರ, ಎ.ಎಸ್. ಪೊನ್ನಣ್ಣ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸಚಿವರು, ಶಾಸಕರು ವಾರಗಳ ಕಾಲ ಮನೆಬಿಟ್ಟು ಅಲ್ಲಿಗೆ ಬಂದಿದ್ದರು. ಆ ಭಾಗದವರು ಕೆಲವರನ್ನು ಊಟಕ್ಕೆ ಕರೆದಿರಬಹುದು. ಹೀಗಾಗಿ ಕೆಲವರು ಊಟಕ್ಕೆ ಹೋಗಿರುತ್ತಾರೆ, ಇನ್ನು ಕೆಲವರು ಊಟಕ್ಕೆ ಹೋಗಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ನಡುವೆ ಗುಂಪುಗಳಿಗೆ, ಗೊಂದಲಗಳಿವೆ ಎಂದಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೋಯಿನಾಡಿನಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಗಳ ಉದ್ಘಾಟಿಸಿ ಬಳಿಕ ಅವರು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದರು. ಸಿಎಂ ಡಿಸಿಎಂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಚನ್ನಾಗಿ ನಡೆಯುತ್ತಿದೆ ಅದು ಮುಖ್ಯ. ಎಲ್ಲಾ ಸಮಸ್ಯೆಗಳ ಬಗೆಹರಿಸಲು ಹೈಕಮಾಂಡ್ ನತ್ತ ಬೊಟ್ಟು ಮಾಡಬೇಡಿ, ನೀವೆ ಬಗೆಹರಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊನ್ನಣ್ಣ ಕೆಲವು ನಾಯಕರು, ಶಾಸಕರು ಕೆಲವು ವಿಷಯಗಳನ್ನು ಮಾತನಾಡಿದ್ದಾರೆ. ಬಹಳ ಅಲ್ಪ ಸಂಖ್ಯೆಯಲ್ಲಿ ಇರುವವರು ಮಾತನಾಡಿದ್ದಾರೆ. ಅದಕ್ಕಾಗಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳುವ ಮೂಲಕ ಅರ್ಥಾತ್ ಸಿಎಂ ಬದಲಾವಣೆ ಮಾತಿಗೆ ಬೆಂಬಲವಿಲ್ಲ ಎಂದಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೆ ಹೇಳಿರಬಹುದು ಎಂದಿದ್ದಾರೆ.
ಡಿಕೆಶಿಯವರನ್ನು ಮಾಜಿ ಸಚಿವ ಕೆ ಎನ್ ರಾಜಣ್ಣ ಭೇಟಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಡಿಕೆ ಶಿವಕುಮಾರ್ ಅವರು ಎಲ್ಲರ ನಾಯಕರು. ಅಹಿಂದ ನಾಯಕರು, ದಲಿತ ನಾಯಕರು ಮುಸಲ್ಮಾನ ನಾಯಕರು ಎಂದಲ್ಲ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಅವರನ್ನು ಕೆ.ಎನ್. ರಾಜಣ್ಣ ಅವರು ಭೇಟಿಯಾಗುವುದರಲ್ಲಿ ತಪ್ಪಿಲ್ಲ. ರಾಜಣ್ಣ ಅವರು ಸ್ವಲ್ಪ ನಿಷ್ಠೂರ ವಾದಿಗಳು, ಮನಸ್ಸಿಗೆ ಬಂದಿದ್ದನ್ನು ಮಾತನಾಡಿರುತ್ತಾರೆ. ಅದು ಈಗ ಸರಿಯಲ್ಲ ಎನಿಸಿ ಡಿಕೆಶಿ ಅವರನ್ನು ಭೇಟಿಯಾಗಿರಬಹುದೇನೋ ಗೊತ್ತಿಲ್ಲ. ಆದ್ದರಿಂದ ಭೇಟಿಯಾಗಿರುವುದು ತಪ್ಪಿಲ್ಲ ಎಂದು ಪೊನ್ನಣ್ಣ ಹೇಳಿದ್ದಾರೆ. ಆದರೆ ಹಿಂದಿನ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ರಾಜಣ್ಣ ಹೇಳಿದ್ದಾರೆಂದು ಸಚಿವ ಪರಮೇಶ್ವರ್ ಯಾಕೆ ಹೇಳಿದ್ದಾರೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಅಹಿಂದವರು ಒಟ್ಟಿಗೆ ಇರಲಿ ಬಿಡಿ ಅದಕ್ಕೇನೀಗ, ಒಳ್ಳೆಯದೇ ಅಲ್ವಾ ಎಂದು ಪೊನ್ನಣ್ಣ ಹೇಳಿದ್ದಾರೆ.
ಆದರೆ ಡಿಕೆಶಿ ಅವರನ್ನು ಭೇಟಿಯಾಗುವುದಕ್ಕೆ ಬಣ್ಣ ಕೊಡುವುದು ಬೇಡ ಎಂದು ಪೊನ್ನಣ್ಣ ಹೇಳಿದ್ದಾರೆ. ಸಿಎಂ ಬದಲಾವಣೆ ವಿಷಯದಲ್ಲಿ ಯಾವುದೇ ಚರ್ಚೆಯೂ ಇಲ್ಲ ಹಾಗೆಯೇ ಸಿಎಂ ಅಧಿಕಾರದ ವಿಷಯದಲ್ಲಿ ಗೊಂದಲವೂ ಇಲ್ಲ. ಕೆಲವರು ಮಾತನಾಡುತ್ತಿರುವುದನ್ನು ಬಿಟ್ಟರೆ ಸಿಎಂ, ಡಿಸಿಎಂ ಅವರಿಬ್ಬರು ಅಧಿಕಾರದ ವಿಚಾರದಲ್ಲಿ ಯಾವುದೇ ಮಾತನಾಡಿಲ್ಲ. ಅವರ ಬಂಟರು ಅಂತ ಇರುತ್ತಾರಲ್ಲ ಅವರು ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಕೊಡಗಿನ ಕೊಯನಾಡಿನಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಯಾರು ರಾಜಕಾರಣವನ್ನು ಅರ್ಥ ಮಾಡಿಕೊಂಡಿದ್ದಾರೋ, ಯಾರು ಪಕ್ಷಕ್ಕೆ ಶಿಸ್ತು ಬದ್ಧರಾಗಿದ್ದಾರೋ ಅವರು ಯಾರು ಇದರ ಬಗ್ಗೆ ಮಾತನಾಡುತ್ತಿಲ್ಲ. ಅದರಿಂದ ಸಿಎಂ ಅಧಿಕಾರದ ವಿಷಯದಲ್ಲಿ ಯಾವುದೇ ಗೊಂದಲವೂ ಇಲ್ಲ. ಮುಂದೆ ಬಜೆಟ್ ಇರುವುದರಿಂದ ಅದರ ಬಗ್ಗೆ ಗಮನಹರಿಸುತ್ತೇವೆ. ಬದಲಾವಣೆಯ ಪ್ರಕ್ರಿಯೆಗಳೇ ಯಾವುದೂ ನಡೆದಿಲ್ಲ, ಆದ್ದರಿಂದ ಬದಲಾವಣೆ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಹುಡುಕಿದರೆ ಸಿಗುವುದಿಲ್ಲ ಎಂದಿದ್ದಾರೆ. ಹೈಕಮಾಂಡ್ ಕರೆದರೆ ಸೂಕ್ತ ಸಮಯದಲ್ಲಿ ಹೋಗುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದು ಸರಿಯಾಗಿಯೇ ಇದೆ. ಹೈಕಮಾಂಡ್ ಈಗ ಕರೆದರು ಅವರಿಬ್ಬರು ಹೋಗಬೇಕು. ಆದರೆ ಹೈಕಮಾಂಡ್ ಇದುವರೆಗೆ ಕರೆದಿಲ್ಲ. ಬದಲಾಗಿ ಸಮಸ್ಯೆಗಳಿದ್ದರೆ ಅಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಹೇಳಿರುವುದರಿಂದ ಹೈಕಮಾಂಡ್ ಕರೆಯುವುದೂ ಇಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.