ಬಿಜೆಪಿ ಅಧಿಕಾರಕ್ಕೆ ತಂದರೆ ಕರ್ನಾಟಕ ಉಳಿಯಲ್ಲ: ಸಿದ್ದರಾಮಯ್ಯ

By Kannadaprabha NewsFirst Published Nov 8, 2022, 8:00 PM IST
Highlights

ಬಿಜೆಪಿಯವರು ತಮ್ಮ ರಾಜಕೀಯ ಎದುರಾಳಿಗಳನ್ನು ಕ್ರಿಮಿನಲ್‌ ಕೇಸ್‌, ಜೈಲಿಗೆ ಕಳುಹಿಸುವ ಷಡ್ಯಂತ್ರ ಮಾಡುತ್ತಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ  

ಚನ್ನಮ್ಮನ ಕಿತ್ತೂರು(ನ.08): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಡಿ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ತಂದರೆ ಕರ್ನಾಟಕ ಉಳಿಯಲ್ಲ, ನೀವು ಉಳಿಯಲ್ಲ. ಪ್ರಭಾಪ್ರಭುತ್ವ, ಸಂವಿಧಾನ ಉಳಿಯಲ್ಲ. ಅದಕ್ಕಾಗಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಎದುರಾಳಿಯನ್ನು ಎದುರಿಸಬೇಕು. ಜನರ ಆಶೀರ್ವಾದದ ಮೂಲಕ ರಾಜಕೀಯ ಎದುರಾಳಿ ಸೋಲಿಸಬೇಕು. ಆದರೆ, ಬಿಜೆಪಿಯವರು ತಮ್ಮ ರಾಜಕೀಯ ಎದುರಾಳಿಗಳನ್ನು ಕ್ರಿಮಿನಲ್‌ ಕೇಸ್‌, ಜೈಲಿಗೆ ಕಳುಹಿಸುವ ಷಡ್ಯಂತ್ರ ಮಾಡುತ್ತಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜನರ ಆಶೀರ್ವಾದ ಪಡೆದು ರಾಜಕಾರಣದಲ್ಲಿ ಇರಬೇಕೆಂಬ ನಂಬಿಕೆಯೂ ಇಲ್ಲ. ವಾಮಮಾರ್ಗ, ಕುತಂತ್ರ, ಷಡ್ಯಂತ್ರಗಳಿಂದ ಆಡಳಿತ ಮಾಡುವಲ್ಲಿ ಬಿಜೆಪಿಯವರು ನಿಸ್ಸಿಮ್ಮರು. ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರ ನಡೆಸಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಳಸಿದ ಬೊಮ್ಮಾಯಿ, ಯಡಿಯೂರಪ್ಪ ಸಂಬಂಧ: ಸಿದ್ದರಾಮಯ್ಯ

ಹಿಂಬಾಗಿಲಿನಿಂದ ಅಧಿಕಾರ:

2008, 2009, 2018ರ ಚುನಾವಣೆಯಲ್ಲಿ ಬಿಜೆಪಿಗೆ ಜನ ಬಲ ಬರಲಿಲ್ಲ. ಆದರೆ, ಕಾಂಗ್ರೆಸ್‌,ಜೆಡಿಎಸ್‌ ಶಾಸಕರನ್ನು್ನ ಖರೀದಿಸಿಕೊಂಡು ಕೋಟ್ಯಾಂತರ ರು. ಖರ್ಚು ಮಾಡಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದರು. ಅದು ಯಾರಪ್ಪನ ಮನೆ ದುಡ್ಡು ಅದು. ಅದು ನಿಮ್ಮ ಹಣ, ಜನರ ಹಣ. ಜನರ ಹಣ ಲೂಟಿ ಮಾಡಿ, ಸರ್ಕಾರದ ಖಜಾನೆ ಲೂಟಿ ಹೊಡೆದು, ಶಾಸಕರನ್ನು ಖರೀದಿಸಿ ಕರ್ನಾಟದಲ್ಲಿ ಆ ಲೂಟಿಯನ್ನು ಮುಂದುವರೆಸಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ 40 ಪರ್ಸೆಂಜೆಟ್‌ ಸರ್ಕಾರ:

ಬಿಜೆಪಿ ಸರ್ಕಾರ 40 ಪರ್ಸೆಂಜೆಟ್‌ ಸರ್ಕಾರ. ಈ ಹಿಂದೆ ಯಾರನಾದರೂ 40 ಪರ್ಸೆಂಜೆಟ್‌ ಸರ್ಕಾರ ಎಂದು ಕರೆದಿದ್ದರಾ? ನಾನು 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಮ್ಮ ಮಂತ್ರಿ ಮಂಡಲದಲ್ಲಿ ಡಿಕೆ ಶಿವಕುಮಾರ, ವಿನಯ ಕುಲಕರ್ಣಿ ಕೆಲಸ ಮಾಡಿದ್ದಾರೆ. ನಮ್ಮ ಮೇಲೆ ಯಾವುದಾದರೂ ಕಳಂಕ ಇತ್ತಾ? ನಮ್ಮ ಮೇಲೆ ಸುಳ್ಳು ಆರೋಪ ಬಂದಾಗ, 8 ಪ್ರಕರಣದಲ್ಲಿ ನಾನು ಸಿಬಿಐಗೆ ವಹಿಸಿದ್ದೇನೆ. ಬಿಜೆಪಿಯವರಿಗೆ, ಮುಖ್ಯಮಂತ್ರಿ ಬೊಮ್ಮಾಯಿಗೆ ದಮ್ಮು, ತಾಕತ್ತಿದ್ದರೆ 2008ರಿಂದ 2013ರವರೆಗೆ ಹಾಗೂ ಈಗ ಮೂರು ವರ್ಷದಿಂದ ಅಧಿಕಾರದಲ್ಲಿದ್ದಾರೆ. ಒಂದೇ ಒಂದು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿ.ಕೆ.ರವಿ, ಗಣೇಶನ ಸೇರಿದಂತೆ ಎಲ್ಲ ಪ್ರಕರಣಗಳಲ್ಲಿಯೂ ಬಿ ರಿಪೋರ್ಚ್‌ ಹಾಕಿದ್ದಾರೆ ಎಂದರು.

ಜನರ ತೀರ್ಪೇ ಅಂತಿಮ:

ಕೇಂದ್ರ ಗೃಹ ಸಚಿವರೇ ಸಾಕ್ಷ್ಯನಾಶ ಮಾಡುವುದಾದರೆ ಗೃಹ ಸಚಿವರು ಇನ್ನೋಸೆಂಟ್‌ ಎಂದು ಹೇಳಲು ಸಿಎಂ ಬಸವರಾಜ ಬೊಮ್ಮಾಯಿ ತಯಾರಾಗಿದ್ದಾರಾ? ಎಷ್ಟುಸುಳ್ಳು ಹೇಳುತ್ತಿಯಪ್ಪ ಬೊಮ್ಮಾಯಿ, ಸುಳ್ಳು ಹೇಳಿ ಹೇಳಿ, ಕಾಂಗ್ರೆಸ್‌ನವರ ಮೇಲೆ ಕೂಬೆ ಕೂಡಿಸುತ್ತಿರುವ ಬಿಜೆಪಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ. ಎಲ್ಲ ನ್ಯಾಯಾಲಯಕ್ಕಿಂತ ಜನತಾ ನ್ಯಾಯಾಲಯ ಮೇಲು. 2023ಕ್ಕೆ ನಾವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ನೀವು ತೀರ್ಮಾನ

ಮಾಡಬೇಕು. 40 ಪರ್ಸೆಂಟೆಜ್‌ ಸರ್ಕಾರ ಬೇಕಾ? ಇಲ್ಲವೇ ಕಿತ್ತುಹಾಬೇಕಾ? ಎಂಬುದನ್ನು ನೀವು ತೀರ್ಮಾನ ಮಾಡಬೇಕು. ಜನರ ತೀರ್ಪೇ ಅಂತಿಮ. ನಿಮ್ಮ ತೀರ್ಪಿನ ಮೇಲೆ ನಂಬಿಕೆ ಇಟ್ಟವರು ಕಾಂಗ್ರೆಸ್‌ನವರು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ವಿನಯ ಒಂದು ಬಂಡೆಯಂತೆ. ಅವರ ವಿರುದ್ಧ ಷಡ್ಯಂತ್ರ ರಚಿಸಿ ಪೆಟ್ಟು ನೀಡುತ್ತಿದ್ದಾರೆ. ಇದರಿಂದ ಬಂಡೆ ಮೂರ್ತಿಯಾಗುತ್ತದೆ ಹೊರತು ಬೇರೇನೂ ಆಗಲೂ ಸಾದ್ಯವಿಲ್ಲವೆಂದು ಮಾರ್ಮಿಕವಾಗಿ ಹೇಳಿದರು.

ಅನೇಕ ಕಷ್ಟಗಳನ್ನು ಬಿಜೆಪಿ ನೀಡುತ್ತಿದೆ. ಪ್ರಕರಣಗಳು ನ್ಯಾಯದಲ್ಲಿವೆ. ಯಾವತ್ತು ನ್ಯಾಯಾಲಯದ ಸಮನ್ಸ್‌ಗಳಿಗೆ ನಾನು ಬೆಲೆ ನೀಡಿದ್ದೇನೆ. ಇವತ್ತು ನನಗೆ ಇಡಿಯಿಂದ ಸಮನ್ಸ್‌ ಇತ್ತು. ಆದರೆ, ನಾನು ಅಲ್ಲಿ ಹಾಜರಾಗಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಗೆಳೆಯನ ಹುಟ್ಟು ಹಬ್ಬದ ನಿಮಿತ್ತ 3 ವಾರ ಮುಂದೂಡುವಂತೆ ಮನವಿಯ ಅರ್ಜಿ ಹಾಕಿ ಇಲ್ಲಿಗೆ ಬಂದಿದ್ದೇನೆ. ಇದಕ್ಕೆ ಕಾರಣ ನಾನು ವಿನಯ ಕುಲಕರ್ಣಿಯವರ ಜೊತೆಗೆ ಇದ್ದೇನೆ ಎಂಬುದು ಸಾಬೀತು ಪಡಿಸಬೇಕಿತ್ತು ಎಂದು ಹೇಳಿದರು.

ಹುಟ್ಟಿದ ಸೂರ್ಯ ಮುಳಗುತ್ತದೆ. ಎಂತಹ ಮಹಾನ್‌ ಚಕ್ರವರ್ತಿಗಳೆ ಮಣ್ಣು ಸೇರಿದ್ದಾರೆ ಇಂದಲ್ಲ ನಾಳೆ ಎಲ್ಲರೂ ಮಣ್ಣು ಸೇರುತ್ತೇವೆ. ಇಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕರ್ಮದ ಫಲ ನಿಮ್ಮನ್ನೇ ತಿನ್ನುತ್ತದೆ ಎಂದ ಅವರು, ನೇರ ರಾಜಕೀಯವಾಗಿ ನಮ್ಮನ್ನು ಸೋಲಿಸಲಾಗದೆ, ಕುಗ್ಗಿಸಲಾಗದೆ ಕುತಂತ್ರ ಮಾಡುವ ನಾಯಕರಿಗೆ ಉತ್ತರ ನೀಡಲು ನಾನಿಲ್ಲಿ ಬಂದಿದ್ದೇನೆ. ಕಷ್ಟದಲ್ಲಿ ಭ್ರಷ್ಟಾಚಾರದಲ್ಲಿ ರಾಜ್ಯ ಮುಳುಗಿದೆ. ಧ್ವೇಷ ಅಸೂಯೇಗಳು ಇಲ್ಲಿ ತಲೆ ಎತ್ತಿದೆ ಎಂದು ಹೇಳಿದರು.

ಕೂಡಲಸಂಗಮದ ಶ್ರೀ, ತೊಂಟದಾರ್ಯ ಮಠದ ಶ್ರೀ, ಮುರುಘಾಮಠದ ಶ್ರೀ, ಬೈಲೂರು ನಿಷ್ಕಲ ಮಂಟಪದ ಶ್ರೀ, ಕಲ್ಮಠದ ಶ್ರೀ, ನಿಚ್ಚಣಕಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳಕರ, ಮಹಾಂತೇಶ ಕೌಜಲಗಿ, ಪ್ರಸಾದ ಅಬ್ಬಯ್ಯಾ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಡಿ.ಬಿ.ಇನಾಂದಾರ, ಮುಖಂಡರಾದ ಸಲೀಂ ಅಹ್ಮದ, ಶಿವಾನಂದ ಪಾಟೀಲ, ಎ.ಬಿ.ಪಾಟೀಲ, ಬಾಬಾಸಾಹೇಬ ಪಾಟೀಲ, ವಿಜಯಾನಂದ ಕಾಶಪ್ಪನವರ, ರೋಹಿಣಿ ಬಾಬಾಸಾಹೇಬ ಪಾಟೀಲ, ವೀಣಾ ಕಾಶಪ್ಪನವರ ಸೇರಿದಂತೆ ಇತರರು ಇದ್ದರು.

ಕುಲಕರ್ಣಿ ವಿರುದ್ಧ ಬಿಜೆಪಿ ಷಡ್ಯಂತ್ರ

ಪಂಚಮಸಾಲಿ ಸಮಾಜದ ಭವಿಷ್ಯದ ರಾಜಕಾರಣಿ. ನನ್ನ ಮಂತ್ರಿ ಮಂಡಳದಲ್ಲಿ ಮಂತ್ರಿ ಮಾಡಿದ್ದೆ. ಯಾವತ್ತೂ ಕೂಡ ಕರ್ನಾಟಕ ಜನತೆಯಿಂದ ಕೆಟ್ಟಹೆಸರು ತೆಗೆದುಕೊಳ್ಳಲಿಲ್ಲ. ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಒಳ್ಳೆಯ ಕೆಲಸ ಮಾಡಿದರು. ಪ್ರಾಮಾಣಿಕವಾಗಿ ರಾಜಕಾರಣ ಮಾಡಿದರೂ ಬಿಜೆಪಿ ರಾಜಕೀಯ ಷಡ್ಯಂತ್ರದಿಂದ ಅವರು ಕಷ್ಟದ ದಿನಗಳನ್ನು ಅನುಭವಿಸಬೇಕಾಯಿತು. ನನ್ನ ಜೊತೆಗೆ ಅನೇಕ ಸಾರಿ ಹಂಚಿಕೊಂಡಿದ್ದರು. ನಾನು ಇನ್ನೋಸೆಂಟ್‌. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ರಾಜಕೀಯ ಷಡ್ಯಂತ್ರದಿಂದ ನನ್ನನ್ನು ಆರೋಪಿಯನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಕಷ್ಟಕೊಡುವುದನ್ನು ನಿಲ್ಲಿಸಲಿಲ್ಲ. ಅವರ ಕಷ್ಟದ ದಿನಗಳಲ್ಲಿ ಅವರ ಶ್ರೀಮತಿ ಮತ್ತು ಅವರ ಮಕ್ಕಳು ಅವರ ಜೊತೆಯಲ್ಲಿ ನಿಂತಿರುವುದು ಮಾದರಿ ಕಾರ್ಯ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ತರಬೇಕು. ನಾನು ಮತ್ತೊಮ್ಮೆ ಕುಲಕರ್ಣಿ ಮತ್ತು ಅವರ ಕುಟುಂಬ ವರ್ಗದವರಿಗೆ ಶುಭಾಶಯಕೋರಿ, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ.ರಾಜಕೀಯ ಭವಿಷ್ಯಉಜ್ವಲವಾಗಲಿ ಎಂದು ಶುಭಕೋರಿತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

'ರಮೇಶ ಜಾರಕಿಹೊಳಿ ಜೆಡಿಎಸ್‌ಗೆ ಬಂದರೆ ಸ್ವಾಗತ'

ನಮ್ಮ ಪಕ್ಷದ ಜಾಲತಾಣಗಳನ್ನು ಬಂದ್‌ ಮಾಡಿಸಿದರು. ನಮ್ಮೆಲ್ಲರನ್ನು ಜೈಲಿಗಟ್ಟಿದರೂ ಜನರ ಮನದಲ್ಲಿ ನಾವಿದ್ದೇವೆ. ರಾಹುಲ ಗಾಂಧಿ ಎಲ್ಲದಕ್ಕೂ ಸಿದ್ಧರಾಗಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರಧಾನಮಂತ್ರಿ ಸ್ಥಾನವನ್ನು ಸಹ ತ್ಯಾಗ ಮಾಡಿ ಬಂದಿದ್ದಾರೆ ಅಂತ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. 

ಮಠಾಧೀಶರಿಂದ ಸನ್ಮಾನ

ಕಿತ್ತೂರಿನಲ್ಲಿ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿ 54ನೇ ಅದ್ಧೂರಿ ಜನ್ಮದಿನ ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿಗೆ ಸನ್ಮಾನ ಮಾಡಿ ವಿವಿಧ ಮಠಾಧೀಶರು ತೆರಳಿದರು. ವೇದಿಕೆ ಮೇಲೆ ರಾಜಕೀಯ ನಾಯಕರು ಆಗಮಿಸುತ್ತಿದ್ದಂತೆ ವಿನಯ್‌ ಕುಲಕರ್ಣಿಗೆ ಸನ್ಮಾನಿಸಿ ಮಠಾಧೀಶರು ತೆರಳಿದರು. ಗದಗ- ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಭಾಷಣ ಮಾಡದೇ ತೆರಳಿದರೆ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಾಷಣ ಮಾಡಿ ತೆರಳಿದರು.
 

click me!