ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಗೆದ್ದ ಕಾಂಗ್ರೆಸ್

By Suvarna NewsFirst Published Jun 16, 2022, 4:53 PM IST
Highlights

* ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಫಲಿತಾಂಶ
* ಜೆಡಿಎಸ್ ಬಿಜೆಪಿ ಒಳ ಜಗಳ ಲಾಭವನ್ನ ಕಾಂಗ್ರೆಸ್ 
* ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು
 

ಮೈಸೂರು, (ಜೂನ್. 16): ದಕ್ಷಿಣ ಪದವೀಧರ ಕ್ಷೇತ್ರದ (South Graduates constituency) ಕಾಂಗ್ರೆಸ್​ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಒಟ್ಟು 45,275 ಮತಗಳು ಪಡೆದುಕೊಂಡಿದ್ದು, 12,205 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಗೆಲುವಿಗೆ ನಿಗದಿತ 46,083 ಮತಗಳ ನಿಗದಿತ ಕೋಟ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಪ್ರತಿಸ್ಪರ್ಧಿ ಬಿಜೆಪಿಯ ರವಿಶಂಕರ್​ ಎಲಿಮಿನೇಟ್​ ಮಾಡಿ ಅಲ್ಲಿಂದ 808 ಮತ ಪಡೆಯಲಾಗಿದೆ. ಆ ಮೂಲಕ ನಿಗದಿತ ಕೋಟ ತಲುಪಿದ ಮಧು ಜಿ.ಮಾದೇಗೌಡ ಜಯ ಎಂದು ಘೋಷಣೆ ಮಾಡಲಾಯ್ತು.  

ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್​ಗೆ 33,878 ಮತಗಳು ಮತ್ತು ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ಕೇವಲ 19,630 ಮತಗಳನ್ನು ಪಡೆದುಕೊಳ್ಳುವಲ್ಲಿ ಮಾತ್ರ ಸಫಲರಾದರು.

 ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಇಂದುಗುರುವಾರ) ಬೆಳಗ್ಗೆ ಬಹುತೇಕ ಪಕ್ಕಾ ಆಗಿತ್ತು. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿತ್ತು. ಎಲ್ಲ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. 

ಪರಿಷತ್‌ನಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್‌ ಮುಂದೇನು?

ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು ಇದಾಗಿದ್ದು, 2ನೇ ಬಾರಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಸೋಲು ಕಂಡಿದ್ದಾರೆ. ಇನ್ನು ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ.  ಜೆಡಿಎಸ್ ಬಿಜೆಪಿಗೆ ಬಂಡಾಯ ಮುಳುವಾಗಿದ್ದು, ಜೆಡಿಎಸ್ ಬಿಜೆಪಿ ಒಳ ಜಗಳದ ಲಾಭವನ್ನ ಕಾಂಗ್ರೆಸ್ ಪಡೆದುಕೊಂಡಿದೆ.

 ಹಳೇ ಮೈಸೂರು ಭಾಗದಲ್ಲಿ ಮತ್ತೆ ಕೈ ಕನಸು ಚಿಗುರೊಡೆದಿದ್ದು,. ಮಂಡ್ಯ ಹಾಸನದಲ್ಲಿ ಶಾಸಕರಿಲ್ಲದಿದ್ದರು ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮೈಸೂರು ಚಾಮರಾಜನಗರದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದೆ. ಜೆಡಿಎಸ್ ಬಿಜೆಪಿಗೆ ಮುಖಭಂಗವಾಗಿದ್ದು, ಹಳೆ ಮೈಸೂರು ಭಾಗದ ಭದ್ರಕೋಟೆ ಛಿದ್ರವಾಗಿದೆ. 

ಬಿಜೆಪಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡಿದ್ದರು. ಮತ್ತೊಂದೆಡೆ ಜೆಡಿಎಸ್​ನಿಂದಲೂ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಕೂಡ ಪ್ರಚಾರ ಮಾಡಿದ್ದರು. ಆದ್ರೆ, ಅಂತಿಮವಾಗಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆದ್ದು ಬೀಗಿದ್ದಾರೆ.

click me!