B Nagendra Resignation: ಬಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದೇಕೆ? ಸಿಎಂ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಏನು?

Published : Aug 26, 2026, 11:30 AM IST
Karnataka Minister B Nagendra Offers To Resign Over Valmiki corporation Corruption Allegations rav

ಸಾರಾಂಶ

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಬಿಐ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಹೀಗಾಗಿ ನಾಗೇಂದ್ರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು (ಆ.26): ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ ಇದೀಗ ಸರ್ಕಾರದಲ್ಲಿ ಬಿ ನಾಗೇಂದ್ರ ರಾಜೀನಾಮೆಗೆ ವೇದಿಕೆ ಸಿದ್ಧವಾಗುತ್ತಿದೆಯೇ? ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸಲು ನಾಗೇಂದ್ರ ಅವರ ತಲೆದಂಡಕ್ಕೆ ಸರ್ಕಾರ ಮುಂದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ರಾಜ್ಯಪಾಲರಿಂದ ಸರ್ಕಾರಕ್ಕೆ ಮಹತ್ವದ ಸಂದೇಶ

ಸಿಬಿಐ ಸಲ್ಲಿಸಿರುವ ಪ್ರಾಸಿಕ್ಯೂಷನ್ ಮನವಿ ಬಗ್ಗೆ ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಕೇಳಿದ್ದಾರೆ. ರಾಜ್ಯಪಾಲರ ಸಂದೇಶದ ಕುರಿತು ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸರ್ಕಾರ ಶಿಫಾರಸು ಮಾಡಿದರೆ ನಾಗೇಂದ್ರ ಅವರ ಸಂಕಷ್ಟಕ್ಕೆ ಸರ್ಕಾರವೇ ಹೊಣೆ ಆಗಲಿದೆ. ಅನುಮತಿ ನೀಡುವ ನಿರ್ಧಾರ ಸರ್ಕಾರಕ್ಕೆ ರಾಜಕೀಯವಾಗಿಯೂ ಮುಜುಗರ ತರಬಹುದು.

ಅನುಮತಿ ಕೊಡದಿದ್ರೆ ಸಾಂವಿಧಾನಿಕ ಬಿಕ್ಕಟ್ಟು

ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಂತೆ ಶಿಫಾರಸು ಮಾಡಿದರೆ ಸಾಂವಿಧಾನಿಕ ಬಿಕ್ಕಟ್ಟಿನ ಪ್ರಶ್ನೆ ಎದುರಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಹೀಗಾಗಿ ಬಿಕ್ಕಟ್ಟು ಪರಿಹಾರಕ್ಕೆ ನಾಗೇಂದ್ರ ತಲೆದಂಡಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಖರ್ಗೆ ಜೊತೆ ಸಿಎಂ ಮಾತುಕತೆ ಸಾಧ್ಯತೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲೇ ಇದ್ದಾರೆ. ಅಂತಿಮ ತೀರ್ಮಾನ ಹೊರಬೀಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರು ಖರ್ಗೆ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾದ ಹಿನ್ನೆಲೆ ಸ್ವತಃ ನಾಗೇಂದ್ರ ಕೂಡ ರಾಜೀನಾಮೆ ನೀಡಲು ಸಿದ್ಧ ಎಂದು ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಜೊತೆ ಚರ್ಚೆ ಎಂದ ಸಿಎಂ

ನಾಗೇಂದ್ರ ರಾಜೀನಾಮೆ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ಸಿಎಂ ಹೇಳಿದ್ದಾರೆ. ಸದ್ಯಕ್ಕೆ ಸುಮ್ಮನಿರುವಂತೆ, ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಏನು?

ನಾಗೇಂದ್ರ ಅವರ ರಾಜೀನಾಮೆ ಪಡೆದು ಅನ್ನಪೂರ್ಣ ತುಕಾರಾಂ ಅವರನ್ನು ಸಚಿವರನ್ನಾಗಿ ಮಾಡುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಈ ಮೂಲಕ ಮಹಿಳಾ ಕೋಟಾ ಭರ್ತಿಯಾಗಲಿದೆ. ಉಳಿಯುವ ಒಂದು ಸ್ಥಾನಕ್ಕೆ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಅವರನ್ನು ಸಚಿವರನ್ನಾಗಿ ಮಾಡುವ ಚಿಂತನೆಯೂ ಇದೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರ ಅಸಮಾಧಾನವನ್ನು ತಣಿಸುವ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ ಎಂಬ ಚರ್ಚೆ ನಡೆದಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳಿಗೂ ಹೈಕಮಾಂಡ್ ಒಪ್ಪಿಗೆಯೊಂದು ಬಾಕಿ ಇದೆ.

ಬಿ ನಾಗೇಂದ್ರ ಅವರಿಂದಲೇ ಪಾದಯಾತ್ರೆ!

ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಸೆ.1 ರಿಂದ ಬಿಜೆಪಿ ನಡೆಸಲು ಮುಂದಾಗಿರುವ ಪಾದಯಾತ್ರೆಗೆ ಕೌಂಟರ್ ಕೊಡಲು ಕಾಂಗ್ರೆಸ್ ಹೊಸ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ನಾಗೇಂದ್ರ ಅವರಿಂದಲೇ ಪಾದಯಾತ್ರೆ ಮಾಡಿಸುವ ಚಿಂತನೆಯೂ ನಡೆದಿದೆ. ಎಸ್‌ಟಿ ಸಮುದಾಯ ಹೆಚ್ಚಿರುವ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿಸುವ ಮೂಲಕ ಪ್ರತಿಪಕ್ಷ ಬಿಜೆಪಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ ಎಂಬ ಚರ್ಚೆ ಇದೆ.

ನಾಗೇಂದ್ರ ಕಚೇರಿಯಿಂದ ಸ್ಪಷ್ಟನೆ

ಆದರೆ ಇದೀಗ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳು ಎಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ ಬಿ ನಾಗೇಂದ್ರ ಅವರ ಕಚೇರಿ ಸ್ಪಷ್ಟನೆ ನೀಡಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ, ಯಾವುದೇ ರಾಜೀನಾಮೆ ವಿಚಾರ ಚರ್ಚೆ ಆಗಿಲ್ಲ ಎಂದು ನಾಗೇಂದ್ರ ಕಚೇರಿ ತಿಳಿಸಿದೆ.

ನಾಗೇಂದ್ರ ವಿರುದ್ಧ ಮೂರು ಕುಣಿಕೆ

ಸಚಿವ ನಾಗೇಂದ್ರ ವಿರುದ್ಧ ಒಂದಲ್ಲ, ಮೂರು ಕಡೆಗಳಿಂದ ಕುಣಿಕೆ ಬಿಗಿಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ವಿಚಾರ, ಸಿಬಿಐ ಮತ್ತು ಇಡಿ ಬೆಳವಣಿಗೆಗಳು ಹಾಗೂ ವಿಪಕ್ಷಗಳ ಹೋರಾಟ ನಾಗೇಂದ್ರ ಅವರಿಗೆ ಕಂಟಕವಾಗುವ ಸಾಧ್ಯತೆ ಇದೆ. ಒಂದು ಕಡೆ ರಾಜಕೀಯ ಒತ್ತಡ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಕಾನೂನು ಕುಣಿಕೆಯೂ ಬಿಗಿಯಾಗುತ್ತಿದೆ. ರಾಜ್ಯಪಾಲರ ಬಳಿ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ಮನವಿ ಮಾಡಿದೆ.

ದೆಹಲಿ ಪ್ರವಾಸದ ಬಗ್ಗೆ ಇಡಿ ದಾಖಲೆ ಸಂಗ್ರಹ

ನ್ಯಾಯಾಲಯ ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ ಮಾಡಿರುವ ಬಗ್ಗೆ ಇಡಿ ದಾಖಲೆಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಇಡಿ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೂ ಇದೆ. ಇದೆಲ್ಲದರ ನಡುವೆ ಇತ್ತ ನಾಗೇಂದ್ರ ವಿರುದ್ಧ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಹೀಗಾಗಿ ರಾಜಕೀಯವಾಗಿಯೂ ನಾಗೇಂದ್ರ ಮೇಲೆ ಒತ್ತಡ ಹೆಚ್ಚಾಗಿದೆ.

ಪ್ರಾಸಿಕ್ಯೂಷನ್ ಅನುಮತಿ ಸಿಕ್ಕರೆ ಕಂಟಕ

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ನಾಗೇಂದ್ರ ಅವರಿಗೆ ಕಾನೂನು ಸಂಕಷ್ಟ ಎದುರಾಗಲಿದೆ. ಇಡಿ ಮನವಿ ಮೇರೆಗೆ ಬೇಲ್ ರದ್ದಾದರೂ ನಾಗೇಂದ್ರ ಮತ್ತೆ ಇಡಿ ವಶಕ್ಕೆ ಹೋಗುವ ಸಾಧ್ಯತೆ ಎದುರಾಗಲಿದೆ ಎಂಬ ಚರ್ಚೆ ಇದೆ. ಇದೆಲ್ಲದಕ್ಕೂ ಅಂತ್ಯ ಹಾಡಬೇಕು ಎಂದರೆ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದು ಸಿಎಂಗೆ ಅನಿವಾರ್ಯವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ನಾಳೆ ಕೋರ್ಟ್ ತೀರ್ಪಿನ ಬಳಿಕ ರಾಜೀನಾಮೆ ಪಡೆಯುವ ಬದಲು ಈಗಲೇ ರಾಜೀನಾಮೆ ಪಡೆದರೆ ಸರ್ಕಾರಕ್ಕೆ ಮುಜುಗರ ತಪ್ಪಿಸಿಕೊಳ್ಳಬಹುದು ಎಂದು ಸಿಎಂಗೆ ಸಲಹೆ ನೀಡಲಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಲಬುರಗಿ ಡಿಸಿಗೆ ನಿಂದನೆ ಕೇಸ್; ಈ ಒಂದು ನಿರ್ಧಾರಕ್ಕೆ ಬಂಧನದಿಂದ ರವಿಕುಮಾರ್ ಜಸ್ಟ್‌ ಪಾರು!
ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಪಡಸಾಲೆಯ ಚರ್ಚೆ ರಿವೀಲ್ ಬೆನ್ನಲ್ಲೇ ಸಿಕ್ತು ಸ್ಪಷ್ಟನೆ!