ವಿಜಯಪುರದಲ್ಲಿ ಬಿರುಸಿನ ಪ್ರಚಾರ, ನನಗೆ ಮಗ ಅಲ್ಲ ಜನ ಮುಖ್ಯ ಎಂದ ಯಡಿಯೂರಪ್ಪ

By Suvarna NewsFirst Published Apr 27, 2024, 3:50 PM IST
Highlights

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬರುಸಿನ‌ ಪ್ರಚಾರ

ವರದಿ:  ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.27) : ಲೋಸಕಭಾ ಚುನಾವಣಾ ಪ್ರಚಾರಾರ್ಥ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬರುಸಿನ‌ ಪ್ರಚಾರ ನಡೆಸಿದರು.

ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿದು ಬಿ.ಎಸ್.ಯಡಿಯೂರಪ್ಪ‌ ನಂತರ ರೋಡ್ ಶೋದಲ್ಲಿ‌ ಭಾಗಿಯಾದರು. ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್, ಸಂಗೊಳ್ಳಿ ರಾಯಣ್ಣ ಮಾರ್ಗವಾಗಿ ಬನಶಂಕರಿ ದೇಗುಲದವರಿಗೆ ರೋಡ್ ಶೋ ಜರುಗಿತು. ರೋಡ್ ಶೋ ಬಳಿಕ ಪಟ್ಟಣದ ಬನಶಂಕರಿ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಬರ ಪರಿಹಾರದ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ, ಕೇಳಿದ್ದಷ್ಟು ಸಿಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

ಜೈ ಶ್ರೀರಾಮ ಜೈ ಜೈ ಶ್ರೀರಾಮ್ ಎಂದು ಭಾಷಣ ಆರಂಭಿಸಿದ ಯಡಿಯೂರಪ್ಪ, ನರೇಂದ್ರ ಮೋದಿಯವರು ಪ್ರಧಾನಿಯಾಗಿ 10 ವರ್ಷವಾದರೂ ಒಂದೇ ದಿನ ವಿಶ್ರಾಂತಿ ಪಡೆದಿಲ್ಲ. ಅವರು ದೇಶ ಹಾಗು ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ವಾತಾವರಣ ಇದೆ. ನಿನ್ನೆ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಹಿಂದೆ ಹಣ ಬಲ, ಜಾತಿ ಬಲ, ತೋಳ್ ಬಲ ದಿಂದ ಚುನಾವಣೆ ಗೆಲ್ಲುತ್ತೇವೆಂದು ಕಾಂಗ್ರೆಸ್ ನವರು ನಂಬಿದ್ದರು. ಆದರೆ ಈಗಾ ಕಾಲ ಬದಲಾಗಿದೆ ಎಂದರು

ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ:
ನಾನು ಸಿಎಂ ಆಗಿದ್ದಾಗ 4500 ಕೋಟಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದಾದರೂ ಅನುದಾನ ಕಾರ್ಯಕ್ರಮ ಕೊಟ್ಟಿದ್ದಾರಾ.? ಸರ್ಕಾರ ದಿವಾಳಿಯಾಗಿದೆ, ಪಾಪರ್ ಆಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಎಸ್ವೈ ವಾಗ್ದಾಳಿ ನಡೆಸಿದರು.

Karnataka drought relief ರಾಜ್ಯ ಕೇಳಿದ್ದು 18 ಸಾವಿರ ಕೋಟಿ, ಕೇಂದ್ರ ಬಿಡುಗಡೆ ಮಾಡಿದ್ದು 3 ಸಾವಿರ ಕೋಟಿ

ಬಿಜೆಪಿ ಸರ್ಕಾರದ ಯೋಜನೆಗಳು ನಿಂತು ಹೋಗಿವೆ:
ಈ ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲಿ ದರೋಡೆಯಾಗಿದೆ. ವಿದ್ಯುತ್ ದರ ಏರಿಕೆಯಾಗಿದೆ, ಕಿಸಾನ್ ಸಮ್ಮಾನ ಯೋಜನೆ ಹಣ ನೀಡುತ್ತಿಲ್ಲ. ಭಾಗ್ಯಲಕ್ಷ್ಮೀ ಬಾಂಡ್ ಯಾಕೆ ನೀಡುತ್ತಿಲ್ಲಾ, ಎಲ್ಲಾ ಯೋಜನೆ ನಿಂತು ಹೋಗಿವೆ. ಕಾಂಗ್ರೆಸ್ ನವರು ಕೇವಲ ಪ್ರಚಾರಕ್ಕೆ ನಿಂತಿದ್ದಾರೆ. ಹಾಗಾಗಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಬೇಕು ಎಂದರು. ಬೇರೆ ಕಾರ್ಯಕ್ರಮದ ಕಾರಣ ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಬಂದಿಲ್ಲ. ಅವರು 3 ಲಕ್ಷಕ್ಕೂ ಆಧಿಕ ಮತಗಳಿಂದ ಗೆಲ್ಲಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಕಾಂಗ್ರೆಸ್ಸಿಗರು ಅಯೋಧ್ಯೆ ಶ್ರೀರಾಮ್ ಮಂದಿರ ವಿರೋಧಿಸಿದ್ರು ; 
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆಗೆ ಕಾಂಗ್ರೆಸ್ ನವರು ಬರಲಿಲ್ಲ. ಅವರಿಗೆ ಶ್ರೀರಾಮ ಇಷ್ಟ ಇರಲಿಲ್ಲ, ಇದು ಕಾಂಗ್ರೆಸ್ಸಿನ ನೀತಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕಾಗಿದೆ. ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಇಡೀ ವಿಶ್ವವೇ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಈ ಬಾರಿ ನಾವು 400 ಕ್ಕೂ ಅಧಿಕ ಸೀಟ್ ಗಳನ್ನು ಗೆಲ್ಲುತ್ತೇವೆ. ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇಡೀ ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲು ನಾನು ಪ್ರಚಾರ ಮಾಡುವೆ:
ನನಗೆ 82 ವರ್ಷ ವಯಸ್ಸಾಗಿದೆ, ಇನ್ನೂ ಕೈಕಾಲುಗಳು ಗಟ್ಟಿ ಇವೆ. ಇನ್ನೊಂದು ಲೋಕಸಭಾ ಚುನಾವಣೆ ಮಾಡುತ್ತೇನೆ. ಉರಿ ಬಿಸಿಲನ್ನು ಲೆಕ್ಕಿಸದೇ ಇಲ್ಲಿನ ಜನ ಸಾಗರ ನೋಡಿದರೆ ಜನರಿಗೆ ಏನೂ ಕೊಟ್ಟರೂ, ಏನು ಮಾಡಿದರೂ ಕಡಿಮೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ದಿಗೆ ಸಿದ್ದವೆಂದು ಯಡಿಯೂರಪ್ಪ ಭರವಸೆ ನೀಡಿದರು. ಇದೇ ವೇಳೆ ಎಸ್ಸಿ ಎಸ್ಟಿ ಸಮಾಜದ ಬಗ್ಗೆಯೂ ಮಾತನಾಡಿ ಎಂದು ಬಿಎಸ್ವೈಗೆ ಯುವಕನೊಬ್ಬ ಮನವಿ ಮಾಡಿದಾಗ ಬಿಎಸ್ವೈ ಮಾತನಾಡಿ, ನನ್ನ ಆಧಿಕಾರವಧಿಯಲ್ಲಿ ಎಸ್ಸಿಎಸ್ಟಿ ಸಮಾಜದ ಜನರ ಕೆಲಸ ಮಾಡಿದ್ದೇನೆ. ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ. ಅಂಬೇಡ್ಕರ್ ಅವರು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್  ಹಣ, ಜಾಗ ನೀಡಲಿಲ್ಲ.

ಅಂಬೇಡ್ಕರ್ ವಿಚಾರಧಾರೆಯಂತೆ ಮೋದಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತೇವೆ. ಸೂರ್ಯಪಥ ಯೋಜನೆಯಲ್ಲಿ ಸೋಲಾರ್ ಯೋಜನೆ ಮನೆ ಮನೆಗೆ ತರುತ್ತೇವೆ. ನಿತ್ಯ ಮೋದಿ 16 ರಿಂದ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ರೈಲು ಅಭಿವೃದ್ದಿ, ಹೆದ್ದಾರಿ ನಿರ್ಮಾಣ, ಜಲ್ ಜೀವನ ಮೀಷನ್ ಹೀಗೆ ಹತ್ತಾರು ಯೋಜನೆ ಮೋದಿ ಮಾಡಿದ್ದಾರೆಂದು ಹೇಳಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅಂಕಿ ಅಂಶಗಳನ್ನು ಓದಿ ಹೇಳಿದರು.

ನನಗೆ ನನ್ನ ಮಗ ರಾಘವೇಂದ್ರ ಆದ್ಯತೆ ಅಲ್ಲ:
ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಸೂರ್ಯಚಂದ್ರರಷ್ಟೇ ಸತ್ಯ. ತಾವೆಲ್ಲರೂ ನಮ್ಮ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕಬೇಕು. ನನ್ನ ಮಗ ಚುನಾವಣೆಗೆ ನಿಂತಿದ್ದರೂ ಇಲ್ಲಿ ಬಂದಿದ್ದೇನೆ. ನನಗೆ ನೀವು ಮುಖ್ಯ ನನ್ನ ಮಗನಲ್ಲ ಎಂದಾಗ ನೆರೆದ ಜನರು, ಕಾರ್ಯಕರ್ತರು ಜೋರಾದ ಚಪ್ಪಾಳೆ ತಟ್ಟಿದರು.

click me!