ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ರಾಜವಂಶದ ಕುಡಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪ್ರತಿಷ್ಠೆ ಉಳಿಸಿಕೊಳ್ಳುವ ಕಣವಾಗಿ ಮಾರ್ಪಟ್ಟಿದೆ.
ಮೈಸೂರು (ಏ.26): ಮೈಸೂರು ರಾಜವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ರಾಜಕೀಯ ಪ್ರವೇಶದ ಭವಿಷ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಪ್ರತಿಷ್ಠೆ ಉಳಿಸಿಕೊಳ್ಳುವ ಕಣವಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಮಾರ್ಪಟ್ಟಿದೆ. ಇಲ್ಲಿನ ಗೆಲುವು ಇಬ್ಬರ ರಾಜಕೀಯ ಭವಿಷ್ಯ ನಿರ್ಣಯ ಮಾಡಲಿದೆ.
ಹಳೆ ಮೈಸೂರು ಪ್ರಾಂತ್ಯದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಒಕ್ಕಲಿಗರ ಭದ್ರಕೋಟೆ ಆಗಿದೆ. ಆದರೆ, ಈ ಬಾರಿ ಅಲ್ಲಿ ಒಕ್ಕಲಿಗರ ಕಾರ್ಟ್ ಪ್ಲೇ ಮಾಡದ ಬಿಜೆಪಿ ಹೈಕಮಾಂಡ್ ಮೈಸೂರು ರಾಜ ವಂಶಸ್ಥ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತವೂ ರಾಜಮನೆತನವಾಗಿ ಉಳಿದುಕೊಂಡಿರುವ ಮೈಸೂರು ಒಡೆಯರ ವಶಂಸ್ಥರು ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಅತ್ಯಂತ ಮಹತ್ವ ಪಡೆದಿಕೊಂಡಿದೆ. ಈ ಹಿಂದೆ ಯದುವೀರ್ ಅವರ ಒಡೆಯರ್ ಕುಟುಂಬಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಿಂದೆ ನಾಲ್ಕು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, ಕೊನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೈ ಅಭ್ಯರ್ಥಿ ಎದುರು ಸೋಲನುಭವಿಸಿದ್ದರು. ಈಗ ಪುನಃ ಅವರ ಪುತ್ರ ಕೈ ಅಭ್ಯರ್ಥಿಗೆ ಸವಾಲೊಡ್ಡಿದ್ದಾರೆ.
LIVE: ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಸಚಿವೆ ಶೋಭಾ ಕರಂದ್ಲಾಜೆಗೆ ಪ್ರೊಫೆಸರ್ ಸವಾಲು
ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಮಾನ್ಯ ಕಾರ್ಯಕರ್ತ ಎಂ. ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಲಾಗಿದೆ.ಇಲ್ಲಿ ಕೈ ಅಭ್ಯರ್ಥಿ ಲಕ್ಷ್ಮಣ್ ಅವರು ಉತ್ಸವಮೂರ್ತಿಯಂತಾಗಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದಾರೆ. ಜೊತೆಗೆ, ಪ್ರಚಾರದ ವೇಳೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಕನಿಷ್ಠ 60 ಸಾವಿರ ಮತಗಳ ಲೀಡ್ನಿಂದ ಕೈ ಅಭ್ಯರ್ಥಿ ಲಕ್ಷ್ಮಣ್ ಗೆಲ್ಲಿಸಬೇಕೆಮದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದರು. ಇಲ್ಲಿ ಮೋದಿ ಮತ್ತು ಸಿದ್ದರಾಮಯ್ಯನವರ ಜನಪ್ರಿಯತೆ ಚುನಾವಣೆ ಫಲಿತಾಂಶಕ್ಕೆ ನಿರ್ಣಾಯಕ ಎಂದು ಹೇಳಲಾಗುತ್ತಿದೆ.
ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್, ತಾಯಿ ಪ್ರಮೋದಾ ದೇವಿ ಅವರೊಂದಿಗೆ ಬಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಂತರ ಅಲ್ಲಿನ ಮಹಿಳೆಯರು ಮತ್ತು ಯುವತಿಯರು ಸೆಲ್ಫಿಗಾಗಿ ಮುಗಿಬಿದ್ದರು.
ಮತದಾನದ ಲೈವ್ ವಿವರ:
ಅಭ್ಯರ್ಥಿಗಳು: 18
ಮತದಾರರು: 20,92,222
ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.53.55 ಮತದಾನ ಆಗಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ. ಮೈಸೂರಿನ ಯಾದವಗಿರಿಯ ಸುನಂದ ಪಬ್ಲಿಕ್ ಶಾಲೆಯ ಮತಗಟ್ಟೆ 145ರಲ್ಲಿ ಮತದಾನ ಮಾಡಿದ್ದಾರೆ. ಇನ್ನು ಲಕ್ಷ್ಮಣ್ ಅವರಿಗೆ ಪತ್ನಿ ಹಾಗೂ ಮಗಳು ಸಾಥ್ ನೀಡಿದ್ದಾರೆ.