ನಾಮಪತ್ರ ಕೇಸ್ ತೀರ್ಪು ಕಾಯ್ದಿರಿಸಿದ ಕೋರ್ಟ್: ಆತಂಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ

By Suvarna NewsFirst Published Jan 10, 2020, 6:52 PM IST
Highlights

ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪ ಪ್ರಕರಣ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಪ್ರವೇಶಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಆತಂಕದಲ್ಲಿದ್ದಾರೆ. 

ಬೆಂಗಳೂರು, [ಜ.10]: ಲೋಕಸಭಾ ಚುನಾವಣೆಗೆ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಧ್ಯಂತರ ತೀರ್ಪು ಸೋಮವಾರಕ್ಕೆ [ಜನವರಿ 13] ಕಾಯ್ದಿರಿಸಿದೆ. 

ಪ್ರಜ್ವಲ್ ರೇವಣ್ಣ ಅವರು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದ್ರೆ, ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಹೈಕೋರ್ಟ್ ಮೆಟ್ಟಿಲೇರಿದ್ದರು.

‘ಕೋರ್ಟ್‌ನಿಂದ ನೋಟಿಸ್‌ ಬಂದಿಲ್ಲ : ಬಂದ್ರೆ ಹೋಗ್ತೀನಿ’ 

ಇಂದು [ಶುಕ್ರವಾರ] ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪ್ರಜ್ವಲ್ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ ವಾದ ಮಂಡಿಸಿದ್ರೆ, ಎ.ಮಂಜು ಪರ ವಕೀಲ ಪ್ರಮೀಳ ನೇಸರ್ಗಿ ಪ್ರತಿವಾದ ಮಾಡಿದರು. ಎರಡೂ ಕಡೆಯಿಂದ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ ಕುನ್ಹಾ, ಮಧ್ಯಂತರ ತೀರ್ಪನ್ನು ಇದೇ ಸೋಮವಾರಕ್ಕೆ  ಕಾಯ್ದಿರಿಸಿದರು.

ತಿರಸ್ಕಾರವಾಗುತ್ತಾ ಪ್ರಜ್ವಲ್‌ ರೇವಣ್ಣ ನಾಮಪತ್ರ ?

ಎಲೆಕ್ಷನ್ ಪಿಟಿಷನ್ ನಲ್ಲಿ ಎ.ಮಂಜು ಅವರ ನಾಮಿನೇಷನ್ ಫೈಲ್ ಪ್ರತಿ ಹಾಕಿಲ್ಲ. ಇದರಿಂದ ಅವರು ಎಲೆಕ್ಷನ್ ಪಿಟಿಷನ್ ಚಾಲೆಂಜ್ ಮಾಡಲು ಸಾಧ್ಯವಿಲ್ಲ ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ಕೆಲ ಅರ್ಜಿಗಳನ್ನ ವಜಾಗಳಿಸಿದೆ. ಈ ವೇಳೆ ಹೈಕೋರ್ಟ್ ವಜಾಗೊಳಿಸಿರುವ ಕೆಲ ಕೇಸ್ ಗಳ ದಾಖಲೆಗಳನ್ನು (ಸೈಟೇಷನ್) ಪ್ರಜ್ವಲ್ ಪರ ವಕೀಲರಾದ ಉದಯ್ ಹೊಳ್ಳ ಕೋರ್ಟ್ ಗೆ ಸಲ್ಲಿಸಿದರು.

ಮತ್ತೊಂದೆಡೆ ಮಂಜು ಪರ ವಕೀಲ ಪ್ರಮೀಳ ನೇಸರ್ಗಿ, ಇದೇ ತರಹನಾದ ಕೇಸ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಕೆಲ ಹಿಂದಿನ  ದಾಖಲೆಗಳನ್ನು (ಸೈಟೇಷನ್) ಕೋರ್ಟ್ ಗೆ ಸಲ್ಲಿಸಿದರು. ಇದನೆಲ್ಲ ಆಲಿಸಿರುವ ಕೋರ್ಟ್, ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. 

ಸದ್ಯ ಸೋಮವಾರ  ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಸಂಸದ ಪ್ರಜ್ವಲ್​ ರಾಜಕೀಯ ನಿಂತಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ. 

click me!