ಕರ್ನಾಟಕದ ಮಾಜಿ ಸಿಎಸ್‌ ರತ್ನಪ್ರಭಾಗೆ ಬಿಜೆಪಿ ಟಿಕೆಟ್? ಎಲ್ಲಿಂದ?

By Kannadaprabha NewsFirst Published Mar 26, 2021, 9:21 AM IST
Highlights

ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್  ಅಧಿಕಾರಿ ರತ್ನಪ್ರಭಾ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದ್ದು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ದಟ್ಟವಾಗಿದೆ. 

ಹೈದ್ರಾಬಾದ್‌ (ಮಾ.26): ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ರತ್ನಪ್ರಭಾ ಅವರು ಆಂಧ್ರಪ್ರದೇಶ ತಿರುಪತಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

 ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈ ವೇಳೆ ರತ್ನಪ್ರಭಾ ಅವರು ಬಿಜೆಪಿ ಮತ್ತು ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರತ್ನಪ್ರಭಾ ಅವರು ಮೂಲತಃ ಆಂಧ್ರದ ಪ್ರಕಾಶಂ ಜಿಲ್ಲೆಯವರು. 

ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಜೆಪಿ ಸೇರ್ಪಡೆ ..

ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಯಾದ ಅವರು, ಈ ಹಿಂದೆ ಸಿಎಂ ವೈ.ಎಸ್‌. ರಾಜಶೇಖರ ರೆಡ್ಡಿ ಅವಧಿಯಲ್ಲಿ ಕೆಲಕಾಲ ನಿಯೋಜನೆ ಮೇಲೆ ಆಂಧ್ರಪ್ರದೇಶ ಸರ್ಕಾರದಲ್ಲೂ ಕೆಲಸ ಮಾಡಿ, ಬಳಿಕ ಕರ್ನಾಟಕಕ್ಕೆ ಮರಳಿದ್ದರು. ರತ್ನಪ್ರಭಾ ಅವರ ತಂದೆ, ಸೋದರ ಮತ್ತು ಪತಿ ಕೂಡಾ ಐಎಎಸ್‌ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವದ ಜೊತೆಗೆ ಆಂಧ್ರದಲ್ಲಿ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸೂಕ್ತ ಅಭ್ಯರ್ಥಿಯಾಗಿ ಹುಡುಕಾಡುತ್ತಿರುವ ಬಿಜೆಪಿ, ಈಗಾಗಲೇ ಕರ್ನಾಟಕದಲ್ಲಿ ತಮ್ಮ ಪಕ್ಷ ಸೇರಿರುವ ರತ್ನಪ್ರಭಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಧಾರ ಕೈಗೊಂಡಿತ್ತು. ಆದರೆ ತಿರುಪತಿಯಲ್ಲಿ ತಮ್ಮ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿಯೇ ತೀರುವುದಾಗಿ ಜನಸೇನಾ ಪಕ್ಷ ಕೂಡಾ ಹಠಕ್ಕೆ ಬಿದ್ದ ಹಿನ್ನೆಲೆಯಲ್ಲಿ, ರತ್ನಪ್ರಭಾ ಅವರನ್ನೇ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಉಭಯ ಪಕ್ಷಗಳು ಸಮ್ಮತಿಸಿವೆ ಎಂದು ವರದಿಗಳು ತಿಳಿಸಿವೆ.

click me!