Karnataka election results 2023: ರಾಜಧಾನಿಯಲ್ಲಿ ಒಬ್ಬ ಬಂಡಾಯ ಅಭ್ಯರ್ಥಿಯೂ ಗೆದ್ದಿಲ್ಲ!

By Kannadaprabha NewsFirst Published May 14, 2023, 6:25 AM IST
Highlights

 ಪಕ್ಷಗಳಿಂದ ಟಿಕೆಟ್‌ ನಿರಾಕರಿಸಿದ್ದರಿಂದ ಬಂಡಾಯದ ಬಾವುಟ ಹಾರಿಸಿ ಚುನಾವಣಾ ಕಣಕ್ಕಿಳಿದಿದ್ದ ‘ಬಂಡಾಯಗಾರರು’ ರಾಜಧಾನಿಯಲ್ಲಿ ಯಶ ಕಂಡಿಲ್ಲ. ಮತದಾರರು ಸಾರಾಸಗಟಾಗಿ ಇವರೆಲ್ಲರನ್ನೂ ತಿರಸ್ಕರಿಸಿರುವುದು ವಿಶೇಷವಾಗಿದೆ.

ಬೆಂಗಳೂರು (ಮೇ.14) : ಪಕ್ಷಗಳಿಂದ ಟಿಕೆಟ್‌ ನಿರಾಕರಿಸಿದ್ದರಿಂದ ಬಂಡಾಯದ ಬಾವುಟ ಹಾರಿಸಿ ಚುನಾವಣಾ ಕಣಕ್ಕಿಳಿದಿದ್ದ ‘ಬಂಡಾಯಗಾರರು’ ರಾಜಧಾನಿಯಲ್ಲಿ ಯಶ ಕಂಡಿಲ್ಲ. ಮತದಾರರು ಸಾರಾಸಗಟಾಗಿ ಇವರೆಲ್ಲರನ್ನೂ ತಿರಸ್ಕರಿಸಿರುವುದು ವಿಶೇಷವಾಗಿದೆ.

ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಅಖಾಡಕ್ಕಿಳಿದಿದ್ದ ಕೃಷ್ಣಯ್ಯ ಶೆಟ್ಟಿಪರಾಭವಗೊಂದಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌ ಅವರ ಗೆಲುವಿನ ನಾಗಾಲೋಟ ಮುಂದುವರೆದಿದೆ.

Latest Videos

Karnataka election results 2023: ಬೊಮ್ಮಾಯಿ ಸಂಪುಟದ 12 ಸಚಿವರ ಸೋಲು !

ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕಿಟ್‌ ಸಿಗದಿದ್ದರಿಂದ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಜಿಎಫ್‌ ಬಾಬು, ಜಯಗಳಿಸದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜ್‌ ಪರಾಭವಕ್ಕೆ ‘ಕಾಣಿಕೆ’ ನೀಡಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಉದಯ ಗರುಡಾಚಾರ್‌ ವಿಜಯಿಯಾಗಿದ್ದಾರೆ.

ಹಾಲಿ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಪುಲಕೇಶಿ ನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ್ದರಿಂದ ಪಕ್ಷದ ವಿರುದ್ಧ ಸಿಟ್ಟಿಗೆದ್ದು ಬಹುಜನ ಸಮಾಜ ಪಕ್ಷದಿಂದ ಅಖಾಡಕ್ಕೆ ಧುಮುಕಿದ್ದರು. ಆದರೆ ಇಲ್ಲಿ ಕಣದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ಜಯಭೇರಿ ಬಾರಿಸಿದ್ದಾರೆ.

ಬಂಡಾಯ ಶಮನವಾದರೂ ಗೆಲುವು ಸಿಗಲಿಲ್ಲ

ಮತ್ತೊಂದೆಡೆ, ಜಯನಗರ ವಿಧಾನಸಭಾ ಕ್ಷೇತ್ರದಿಂದ ಎನ್‌.ಆರ್‌.ರಮೇಶ್‌ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್‌ ನಿರಾಕರಿಸಿ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಂಮೂರ್ತಿ ಅವರಿಗೆ ಮಣೆ ಹಾಕಿತ್ತು. ಟಿಕೆಟ್‌ ನೀಡದಿದ್ದಕ್ಕೆ ರಮೇಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ ಅವರನ್ನು ಸಮಾಧಾನಪಡಿಸಲಾಗಿತ್ತು. ಆದರೆ ಕೊನೆಗೂ ಇಲ್ಲಿ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಪುನರಾಯ್ಕೆಯಾಗಿದ್ದಾರೆ.

Karnataka election results 2023: ಭದ್ರಕೋಟೆಯಲ್ಲೇ ಬಿದ್ದಿದ್ದು ಜೆಡಿಎಸ್‌ ಹಿನ್ನಡೆಗೆ ಕಾರಣ

ಬಿಜೆಪಿ ತೊರೆದು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಪುಟ್ಟಣ್ಣ ಅವರಿಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದಕ್ಕೆ ಕೆಲ ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಬಂಡಾಯ ಶಮನ ಮಾಡಲಾಗಿತ್ತಾದರೂ ಇಲ್ಲಿ ಬಿಜೆಪಿಯ ಸುರೇಶ್‌ಕುಮಾರ್‌ ಪುನರಾಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

click me!