Karnataka election results 2023: ಭದ್ರಕೋಟೆಯಲ್ಲೇ ಬಿದ್ದಿದ್ದು ಜೆಡಿಎಸ್‌ ಹಿನ್ನಡೆಗೆ ಕಾರಣ

Published : May 14, 2023, 05:39 AM IST
Karnataka election results 2023: ಭದ್ರಕೋಟೆಯಲ್ಲೇ ಬಿದ್ದಿದ್ದು ಜೆಡಿಎಸ್‌ ಹಿನ್ನಡೆಗೆ ಕಾರಣ

ಸಾರಾಂಶ

ರಾಜ್ಯದ 16ನೇ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ರಚನೆ ಮಾಡುವ ಉದ್ದೇಶದಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡರೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶ್ರಮ ವ್ಯರ್ಥವಾಗಿದ್ದು, ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ. ಮಂಡ್ಯ, ಹಾಸನ, ರಾಮನಗರ, ಮೈಸೂರಿನ ಭದ್ರಕೋಟೆಯಲ್ಲೇ ಹಿನ್ನಡೆ ಕಂಡಿದ್ದು ಇದಕ್ಕೆ ಪ್ರಮುಖ ಕಾರಣ.

ಬೆಂಗಳೂರು (ಮೇ.14) : ರಾಜ್ಯದ 16ನೇ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ರಚನೆ ಮಾಡುವ ಉದ್ದೇಶದಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡರೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶ್ರಮ ವ್ಯರ್ಥವಾಗಿದ್ದು, ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ. ಮಂಡ್ಯ, ಹಾಸನ, ರಾಮನಗರ, ಮೈಸೂರಿನ ಭದ್ರಕೋಟೆಯಲ್ಲೇ ಹಿನ್ನಡೆ ಕಂಡಿದ್ದು ಇದಕ್ಕೆ ಪ್ರಮುಖ ಕಾರಣ.

ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ತಿಳಿದಿದ್ದರೂ ಕುಮಾರಸ್ವಾಮಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಿಂಗ್‌ ಮೇಕರ್‌ ಆಗುವ ನಿರೀಕ್ಷೆ ಇತ್ತು. ಆದರೆ, ಫಲಿತಾಂಶವು ಜೆಡಿಎಸ್‌ಗೆ ಭಾರೀ ನಿರಾಶೆಯನ್ನುಂಟು ಮಾಡಿದೆ. ಕೇವಲ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಮನಗರದಲ್ಲಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸಹ ಸೋಲನುಭವಿಸಿದ್ದಾರೆ. ಹಲವು ಕ್ಷೇತ್ರದಲ್ಲಿ ತೆರಯಬೇಕು ಎಂಬ ಉದ್ದೇಶ ಈಡೇರಿಲ್ಲ. ಪಕ್ಷದ ಹಿಡಿತವಿದ್ದ ಹಳೇ ಮೈಸೂರು ಭಾಗದಲ್ಲಿಯೂ ಹೇಳಿಕೊಳ್ಳುವಂತಹ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ.

ಕೊನೆಗೂ ಕಾಂಗ್ರೆಸ್‌ ಕಡೆಗೆ ವಾಲಿದ ಲಿಂಗಾಯತರು, ಒಕ್ಕಲಿಗ ಮತಗಳು

ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌, ಬಿಜೆಪಿ ತನ್ನ ಬಳಿ ಬರಲಿದ್ದು, ತಾವು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬಹುದು ಎಂಬ ಕುಮಾರಸ್ವಾಮಿ(HD Kumaraswamy) ನಿರೀಕ್ಷೆಯು ಹುಸಿಯಾಗಿದೆ. ಕುಮಾರಸ್ವಾಮಿ ಅವರು ಚುನಾವಣಾ ಘೋಷಣೆಗೂ ಮುನ್ನ ಮತ್ತು ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚಿತವಾಗಿಯೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದ್ದರು. 123 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ರಾಜ್ಯಾದ್ಯಂತ ರಾರ‍ಯಲಿ, ಪ್ರಚಾರ ಸಭೆಗಳನ್ನು ಕೈಗೊಂಡಿದ್ದರು. ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನು ರಾಜ್ಯದ ಜನತೆಯ ಮುಂದಿಟ್ಟುಕೊಂಡಿದ್ದರು. ಬಿಡದಿಯಲ್ಲಿನ ತೋಟದ ಮನೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಸಿ ಚುನಾವಣೆ ತರಬೇತಿ ನೀಡಿದ್ದರು. ಇದಾದ ಬಳಿಕ ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನಂತರ ಪಂಚರತ್ನ ಯೋಜನೆಗಳನ್ನು ಸಹ ಕೈಗೊಂಡಿದ್ದರು. ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ಕುಮಾರಸ್ವಾಮಿ ಅವರಿಗೆ ಚುನಾವಣಾ ಫಲಿತಾಂಶವು ಭ್ರಮನಿರಸನ ಮಾಡಿದೆ.

ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆಗಳನ್ನು ಕೈಗೊಳ್ಳಲು ಸಾಕಾಷ್ಟುಶ್ರಮ ಹಾಕಿದ್ದರು. ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಉತ್ತೇಜಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್‌-ಬಿಜೆಪಿಯಿಂದ ವಲಸೆ ಬಂದವರಿಗೆ ಟಿಕೆಟ್‌ ನೀಡಲಾಯಿತು. ಅವರು ಗೆಲ್ಲುವ ನಿರೀಕ್ಷೆಯನ್ನಿಟ್ಟು ಕೊಳ್ಳಲಾಗಿತ್ತು. ವಲಸಿಗರು ಪಕ್ಷಕ್ಕೆ ಬಂದ ಬಳಿಕ ಕುಮಾರಸ್ವಾಮಿಗೆ ಜಯಗಳಿಸುವ ವಿಶ್ವಾಸವು ಮತ್ತಷ್ಟುಹೆಚ್ಚಾಯಿತು. ಕುಮಾರಸ್ವಾಮಿ ಅವರ ಜತೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹ ಮತಯಾಚನೆಗೆ ಪ್ರವಾಸ ಕೈಗೊಂಡರು. ಪ್ರಣಾಳಿಕೆಯಲ್ಲಿಯೂ ಜನಪ್ರಿಯ ಭರವಸೆಗಳನ್ನು ನೀಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟರೂ ಜನರು ಜೆಡಿಎಸ್‌ ಕೈ ಹಿಡಿಯದಿರುವುದು ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದೆ.

ಜೆಡಿಎಸ್‌ನ ಭದ್ರಕೋಟೆ ಎಂದು ಭಾವಿಸಿರುವ ಹಾಸನ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. 2018ರಲ್ಲಿ ಮಂಡ್ಯದಲ್ಲಿ 7ಕ್ಕೆ 7 ಕ್ಷೇತ್ರ ಗೆಲುವು ಸಾಧಿಸಿದ ಜೆಡಿಎಸ್‌ ಈ ಬಾರಿ ಮಂಡ್ಯದಲ್ಲಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತಗೊಂಡಿದೆ. ರಾಮನಗರ ಜಿಲ್ಲೆಯ ರಾಮನಗರ ಮತ್ತು ಮಾಗಡಿ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ಮುಖಭಂಗವಾಗಿದೆ.

Karnataka election results 2023: ಬಿಜೆಪಿಗೆ ಮುಖಭಂಗದ ಜತೆ ತೀವ್ರ ಮುಜುಗರ !

ಜೆಡಿಎಸ್‌ ಮುಂದೇನು?

* ಈಗಿನ ಹೀನಾಯ ಸೋಲಿನಿಂದ ಪಾಠ ಕಲಿತು ಪಕ್ಷ ಸಂಘಟನೆಯ ಸ್ವರೂಪ ಬದಲಿಸಿಕೊಳ್ಳಬಹುದು

* ಮುಂಬರುವ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲು ಶ್ರಮಿಸಬಹುದು

* ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಸೋಲು ಮುಚ್ಚುವಂತೆ ಸಾಧನೆ ಮಾಡಲು ಮುಂದಾಗಬಹುದು

* ಕುಟುಂಬದ ಹಿಡಿತದಿಂದ ತಪ್ಪಿಸಿ ಹೊಸಬರಿಗೆ ಪಕ್ಷದಲ್ಲಿ ಹೆಚ್ಚು ಅವಕಾಶ ನೀಡಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ