
ಹಾಸನ (ಏ.24): ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಅದರಂತೆ ಇಂದು ಜಿಲ್ಲೆಯ ಆಲೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಈ ವಿಚಾರವಾಗಿ ಅಮೇರಿಕಾ ಪ್ರೆಸಿಡೆಂಟ್, ರಷ್ಯಾ ಅಧ್ಯಕ್ಷರನ್ನೂ ಕರೆದುಕೊಂಡು ಬರಲಿ, ನಮಗೆ ದೇವೇಗೌಡ, ಕುಮಾರಣ್ಣನೇ ಸಾಕು ಇನ್ಯಾರು ಬೇಡ ಎಂದು ಬೇಲೂರಿನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಟಾಂಗ್ ಕೊಟ್ಟಿದ್ದಾರೆ. 123 ಟಾರ್ಗೆಟ್ ಇಟ್ಟಿದ್ದೀವಿ ಒಂದು ಬಾರಿ ಬಹುಮತ ಕೊಡಿ. ದೇವೇಗೌಡರು, ಕುಮಾರಸ್ವಾಮಿ ಸಾಮಾನ್ಯ ರೈತನ ಮಗ. ನಮ್ಮ ಹತ್ರ ಚಾಣಕ್ಯರು ಯಾರೂ ಇಲ್ಲ. ದೇವೇಗೌಡ, ಕುಮಾರಣ್ಣ ಹಾಗೂ ನಮ್ಮ ಜನರೇ ನಮಗೆ ಚಾಣಕ್ಯರು. ಜನರ ಆಶೀರ್ವಾದ ಇರೋವರೆಗೂ ನಮಗೇನು ತೊಂದರೆಯಿಲ್ಲ ಎಂದರು.
ಜನ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿದ್ದಾರೆ. ಇವೆರಡು ಪಕ್ಷಗಳನ್ನು ಸ್ವಲ್ಪ ದಿನ ರೆಸ್ಟ್ಗೆ ಕಳುಹಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಕುಮಾರಣ್ಣ, ದೇವೇಗೌಡರ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಎಚ್.ಎಸ್.ಪ್ರಕಾಶ್ ಅವರ ಮಗನನ್ನು ನಿಲ್ಲಿಸಿದ್ದೇವೆ. ಭವಾನಿ ಅವರೇ ಕೈ ಎತ್ತಿ ಹೇಳಿದ್ದಾರಲ್ಲಾ, ಇನ್ನೇನುಬೇಕು. ನಮಗೆ ಬೇಕಿರುವುದು ಪಕ್ಷ, ಜನ ಉಳಿಯಬೇಕು, ರಾಜ್ಯ ಉಳಿಯಬೇಕು ಎಂದರು.
ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ವಿವಿಧೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ
ಪ್ರೀತಂಗೌಡ ಸೈಲೆಂಟ್ ಆಗಿರುವ ವಿಚಾರವಾಗಿ ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ನನಗೆ ಮಾತನಾಡುವ ಶಕ್ತಿ ಇಲ್ಲ. ಅವರು ದೊಡ್ಡವರಿರುವಾಗ ಆ ಲೆವೆಲ್ಗೆ ನಾವು ಬೆಳೆದಿಲ್ಲ ಎಂದು ಪರೋಕ್ಷವಾಗಿ ರೇವಣ್ಣ ಟೀಕೆ ಮಾಡಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಹದ್ದುಮೀರಬೇಡಿ ರೇವಣ್ಣ, ಶಿವಲಿಂಗೇಗೌಡ ಎಚ್ಚರಿಕೆ: ‘ರೇವಣ್ಣ ಅವರೇ ನಾನು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಬಹುದು, ಆದರೆ, ಹಾಗೆ ಮಾಡುವುದಿಲ್ಲ. ನೀವು ನನ್ನ ವಿರುದ್ಧ ಅಗೌರವಯುತವಾಗಿ, ಹದ್ದು ಮೀರಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕುರಿತು ಒಬ್ಬ ಕಳ್ಳನನ್ನು ಬೆಳೆಸಿದ್ದಾಗಿ ರೇವಣ್ಣ ಹೇಳಿದ್ದಾರೆ. ಈ ಕ್ಷೇತ್ರದ ಜನರಿಗೆ ನಾನು ಯಾರಿಂದ ಬೆಳೆದೆ, ಯಾರು ನನ್ನನ್ನು ಬೆಳೆಸಿದ್ದಾರೆ ಎಂಬುದು ಗೊತ್ತು.
ಭ್ರಷ್ಟಾಚಾರ, ಹಗರಣದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ಅವರು ನನ್ನನ್ನು ಎಷ್ಟು ಬೆಳೆಸಿದರು, ನಾನೆಷ್ಟು ಕಷ್ಟಪಟ್ಟು ಬೆಳೆದೆ ಎಂಬುದು ಕೂಡ ತಿಳಿದ ಸಂಗತಿ ಎಂದರು. ಅರಸೀಕೆರೆಯಲ್ಲಿ ನಾನು ಅಭ್ಯರ್ಥಿಯಾಗುವ ಮೊದಲು ಜೆಡಿಎಸ್ ಅಭ್ಯರ್ಥಿ 13,000 ನಂತರ 21,000 ಮತಗಳನ್ನು ಪಡೆದುಕೊಂಡಿದ್ದರು. ನಾನು ಮೊದಲ ಚುನಾವಣೆಯಲ್ಲಿಯೇ 75,000 ಮತಗಳನ್ನು ಪಡೆದುಕೊಂಡೆ. ಅದರಲ್ಲಿ ಯಾರ ಪ್ರಯತ್ನ ಇದೆ ಎಂಬುದು ಜನರಿಗೆ ಗೊತ್ತು. ನಾನೇನು ಮಾಜಿ ಪ್ರಧಾನಿಯ ಮಗ ಅಲ್ಲ ಅಥವಾ ರಾಜಕೀಯ ಕುಟುಂಬದ ಹಿನ್ನೆಲೆಯೂ ನನಗಿಲ್ಲ ಎಂದು ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.