ಹಾಲಪ್ಪ ಆಚಾರ ಶಕ್ತಿ ಪ್ರದರ್ಶನಕ್ಕೆ ಜನಸಾಗರ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ

By Kannadaprabha NewsFirst Published Apr 20, 2023, 10:39 AM IST
Highlights

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಪ್ಪ ಬಸಪ್ಪ ಆಚಾರ ಬುಧವಾರ 2ನೇ ಬಾರಿಗೆ ತಮ್ಮ ಅಪಾರ ಬೆಂಬಲಿಗರ ಜತೆ ಬೃಹತ್‌ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದರು.

ಯಲಬುರ್ಗಾ (ಏ.20) : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಪ್ಪ ಬಸಪ್ಪ ಆಚಾರ ಬುಧವಾರ 2ನೇ ಬಾರಿಗೆ ತಮ್ಮ ಅಪಾರ ಬೆಂಬಲಿಗರ ಜತೆ ಬೃಹತ್‌ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದರು.

ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಬಿಜೆಪಿ ಪಕ್ಷದ ಪರ ನಾನಾ ಜೈಕಾರ ಘೋಷಣೆ ಕೂಗುತ್ತಾ ಸಾಗಿದರು.

ಬೃಹತ್‌ ಮೆರವಣಿಗೆ ದಾರಿಯುದ್ದಕ್ಕೂ ಸುಮಾರು ಎರಡ್ಮೂರು ತಾಸು ಸಾಗಿದ್ದರಿಂದ ಅಲ್ಲಿಲ್ಲಿ ಸಾಕಷ್ಟುಟ್ರಾಫಿಕ್‌ ಸಮಸ್ಯೆಯಾಯಿತು. ತಾಲೂಕಿನ ನಾನಾ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಲಪ್ಪ ಆಚಾರ ಅಭಿಮಾನಿಗಳು ಘೋಷಣೆಗಳು ಮುಗಿಲು ಮುಟ್ಟಿದ್ದವು.ಮತ್ತೊಮ್ಮೆ ಶಾಸಕ ಹಾಲಪ್ಪ ಆಚಾರ ಎನ್ನುವ ಘೋಷಣೆಗಳು ಜೋರಾಗಿದ್ದವು.

ಸ್ವಾವಲಂಬಿ ಭಾರತಕ್ಕೆ ಪ್ರಧಾನಿ ಮೋದಿ ಕೊಡುಗೆ ಅಪಾರ: ಸಚಿವ ಹಾಲಪ್ಪ ಆಚಾರ್

ಹೀಗೆ ಸಾಗಿದ ಮೆರವಣಿಗೆ ತಹಸೀಲ್ದಾರ್‌ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ.ಅವರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:

ಮಾಜಿ ಸಚಿವ ಬಸವರಾಜ ರಾಯರಡ್ಡಿ (Basavaraj Rayareddy)ಈ ಕ್ಷೇತ್ರವನ್ನು 30 ವರ್ಷ ಆಡಳಿತ ನಡೆಸಿದರೂ ನೀರಾವರಿ ಮಾಡಲಿಲ್ಲ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಎಂದೋ ಮಾಡಬೇಕಿತ್ತು ಅವರಿಗೆ ಇಚ್ಛಾ ಶಕ್ತಿ ಕೊರತೆಯಿಂದ ಏನನ್ನು ಮಾಡಲಿಲ್ಲ. ನಾನು ಶಾಸಕ, ಸಚಿವನಾದ ಮೇಲೆ ಕೊಪ್ಪಳ ಏತ ನೀರಾವರಿ(Kopal lift irrigation) ಯೋಜನೆಗೆ 2ನೇ ಹಂತದ ಅನುದಾನ ತಂದು ಕೆರೆಗಳಿಗೆ ಕೃಷ್ಣೆಯ ನೀರನ್ನು ಹರಿಸಿದ್ದೇನೆ. ಈ ಹಿಂದೆ ರಾಯರಡ್ಡಿಯವರು ಈ ತಾಲೂಕಿಗೆ ಸತ್ಯಹರಿಶ್ಚಂದ್ರ ಬಂದರೂ ನೀರು ಬರಲು ಸಾಧ್ಯವಿಲ್ಲ ಈ ಪ್ರದೇಶ ಎತ್ತರಕ್ಕಿದೆ ಎಂದು ಕ್ಷೇತ್ರದ ಜನರಿಗೆ ಸುಳ್ಳು ಹೇಳಿದ್ದರು. ಈಗ ನಾನು ಕೆರೆಗಳಿಗೆ ನೀರು ತುಂಬಿಸಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಇದು ನಾನು ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಯಾರು ಮಾಡಿದ್ದು ಎನ್ನುವುದು ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತಿದೆ ಅವರು ನನಗೆ ಈ ಸಾರಿ ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರದಲ್ಲಿದ್ದಾಗ ರಾಯರಡ್ಡಿಯವರು ಏನ್ನನ್ನು ಮಾಡದವರು ಇದೀಗ ನನ್ನ ಗೆಲ್ಲಿಸಿ ಈ ಕ್ಷೇತ್ರವನ್ನು ನೀರಾವರಿಯನ್ನಾಗಿ ಮಾಡುತ್ತೇನೆಂದು ಜನರಿಗೆ ಸುಳ್ಳು ಹೇಳುವ ಮೂಲಕ ಜನತೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ನನ್ನ ಐದು ವರ್ಷಗಳ ಅಧಿಕಾರವಧಿಯಲ್ಲಿ ನಾನು ಚುನಾವಣೆಯಲ್ಲಿ ಕೊಟ್ಟಮಾತಿನಂತೆ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಶಿಕ್ಷಣ ಕ್ಷೇತ್ರವನ್ನು ನಿರೀಕ್ಷೆಗೊ ಮೀರಿ ಸಮಗ್ರ ಅಭಿವೃದ್ಧಿಗೊಳಿಸಿರುವುದನ್ನು ಮೆಚ್ಚಿಕೊಂಡು ಕ್ಷೇತ್ರದ ಜನತೆ ಇಷ್ಟೋಂದು ಸಂಖ್ಯೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಲು ನನಗೆ ಅತೀವ ಸಂತಸವಾಗಿದೆ ಎಂದರು.

ರೈತ ವರ್ಗಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ: ಸಚಿವ ಹಾಲಪ್ಪ ಆಚಾರ್‌

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ,ಸಿ.ಎಚ್‌.ಪಾಟೀಲ್‌, ಎಂ.ವಿಶ್ವನಾಥ, ಅರವಿಂದಗೌಡ ಪಾಟೀಲ,ವೀರಣ್ಣ ಹುಬ್ಬಳ್ಳಿ, ಬಸವರಾಜ ಗೌರಾ, ಅಯ್ಯಪ್ಪ ಗುಳೆ, ಶಿವಶಂಕರರಾವ್‌ ದೇಸಾಯಿ, ಕಳಕಪ್ಪ ಕಂಬಳಿ, ಶಂಕ್ರಪ್ಪ ಸುರಪುರ,ಅಯ್ಯನಗೌಡ ಕೆಂಚಮ್ಮನವರ್‌, ರತನ ದೇಸಾಯಿ,ಶರಣಪ್ಪ ಇಳಗೇರ, ಸುಧಾಕರ ದೇಸಾಯಿ, ಶಿವಣ್ಣ ವಾದಿ, ಫಕೀರಪ್ಪ ತಳವಾರ,ಬಸನಗೌಡ ತೊಂಡಿಹಾಳ, ಪ್ರಭುರಾಜ ಪಾಟೀಲ, ಶಕುಂತಲಾದೇವಿ ಮಾಲಿಪಾಟೀಲ, ಶಿವಲೀಲಾ ದಳವಾಯಿ, ಮಹಾದೇವಿ ಕಂಬಳಿ, ಪ್ರಕಾಶ ಬೇಲೇರಿ, ಶಿವಕುಮಾರ ನಾಗಲಾಪೂರಮಠ, ಮಹೇಶ್ವರಿ ಹಿರೇಮಠ, ಎಸ್‌.ಎನ್‌.ಶ್ಯಾಗೋಟಿ, ಯಲ್ಲಪ್ಪ ಹಡಗಲಿ, ಇಂದಿರಾ ಉಳ್ಳಾಗಡ್ಡಿ, ಹಂಚ್ಯಾಳಪ್ಪ ತಳವಾರ ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!