ಜಮೀರ್ ಸಚಿವ ಸ್ಥಾನಕ್ಕೆ ಬಂತಾ ಕುತ್ತು?: ಹೈಕಮಾಂಡ್‌ಗೆ ವರದಿ ತಲುಪುತ್ತಿದ್ದಂತೆ ಜಬ್ಬಾರ್ ರಾಜೀನಾಮೆ, ನಜೀರ್‌ಗೂ ಕೊಕ್!

Published : Apr 11, 2026, 04:34 PM IST
Zameer Ahmed Khan Jabbar and Nazeer

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಆಂತರಿಕ ಕಲಹದ ಕುರಿತ ಎಐಸಿಸಿ ವರದಿಯು ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ಈ ವರದಿಯ ಆಧಾರದ ಮೇಲೆ ಹೈಕಮಾಂಡ್ ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಅಂತಿಮವಾಗಿ ಸಚಿವ ಜಮೀರ್ ಅಹಮದ್ ಖಾನ್ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು (ಏ.11): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ, ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಂತರಿಕ ಬೆಳವಣಿಗೆಗಳ ಕುರಿತಾದ ವರದಿಯೊಂದು ಹೈಕಮಾಂಡ್ ಕೈಸೇರಿದ್ದು, ಮುಂದಿನ ದಿನಗಳಲ್ಲಿ ಜಮೀರ್ ಅಹಮದ್ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.

ವರದಿಯಲ್ಲೇನಿದೆ? ಸಂಚಲನ ಮೂಡಿಸಿದ ಅಭಿಶೇಕ್ ದತ್ ರಿಪೋರ್ಟ್!

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ನಲ್ಲಿನ ಆಂತರಿಕ ಅಸಮಾಧಾನ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಎಐಸಿಸಿ (AICC) ಉಸ್ತುವಾರಿ ಕಾರ್ಯದರ್ಶಿ ಅಭಿಶೇಕ್ ದತ್ ಅವರು ಸುದೀರ್ಘ ವರದಿಯೊಂದನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಕ್ಷೇತ್ರದ ಗೊಂದಲಗಳಿಗೆ ಪ್ರಮುಖ ಕಾರಣಗಳು ಮತ್ತು ಕೆಲವು ನಾಯಕರ ನಡೆಗಳ ಬಗ್ಗೆ ಗಂಭೀರ ಉಲ್ಲೇಖಗಳಿವೆ ಎನ್ನಲಾಗಿದೆ. ಈ ವರದಿ ಕೈಸೇರುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್ ವರಿಷ್ಠರು, ರಾಜ್ಯ ಘಟಕದಲ್ಲಿ ಆಪರೇಷನ್ ಕ್ಲೀನ್ ಆರಂಭಿಸಿದ್ದಾರೆ.

ಸಸ್ಪೆಂಡ್ ಮಾಡುವ ಮುನ್ನವೇ ಜಬ್ಬಾರ್ ರಾಜೀನಾಮೆ!

ವರದಿಯ ಬೆನ್ನಲ್ಲೇ ಹೈಕಮಾಂಡ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರ ಮೊದಲ ಭಾಗವಾಗಿ ಅಬ್ದುಲ್ ಜಬ್ಬಾರ್ ಅವರನ್ನು ಅಮಾನತು ಮಾಡಲು ಹೈಕಮಾಂಡ್ ತೀರ್ಮಾನಿಸಿತ್ತು. ಆದರೆ, ಈ ಸುಳಿವು ಸಿಗುತ್ತಿದ್ದಂತೆಯೇ ಅಬ್ದುಲ್ ಜಬ್ಬಾರ್ ಅವರು ಶಿಸ್ತು ಕ್ರಮದಿಂದ ಬಚಾವಾಗಲು ಮುನ್ನೆಚ್ಚರಿಕೆಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಗೂ ರಾಜೀನಾಮೆ ನೀಡುವಂತೆ ಅವರಿಗೆ ತಾಕೀತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಂಎಲ್‌ಸಿ ನಜೀರ್ ಅಹಮದ್‌ಗೂ ಬಿಸಿ:

ಪಕ್ಷದ ಆಂತರಿಕ ಶಿಸ್ತು ಉಲ್ಲಂಘನೆ ಮತ್ತು ವರದಿಯಲ್ಲಿನ ಅಂಶಗಳ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ (MLC) ನಜೀರ್ ಅಹಮದ್ ಅವರಿಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಇದು ಕಾಂಗ್ರೆಸ್ ಪಡಶಾಲೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಅಲ್ಪಸಂಖ್ಯಾತ ನಾಯಕರ ವಿರುದ್ಧ ಹೈಕಮಾಂಡ್ ಇಷ್ಟೊಂದು ಕಠಿಣವಾಗಿ ವರ್ತಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.

ಜಮೀರ್ ಅಹಮದ್ ವಿರುದ್ಧ ತಿರುಗಿಬಿದ್ದ ಅಲ್ಪಸಂಖ್ಯಾತ ಶಾಸಕರು!

ಈ ಇಡೀ ಬೆಳವಣಿಗೆಯ ಅಂತಿಮ ಗುರಿ ಸಚಿವ ಜಮೀರ್ ಅಹಮದ್ ಖಾನ್ ಎನ್ನಲಾಗುತ್ತಿದೆ. ವಿಶೇಷವೆಂದರೆ, ಸ್ವತಃ ಅಲ್ಪಸಂಖ್ಯಾತ ಸಮುದಾಯದ ಇತರ ಶಾಸಕರೇ ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಜಮೀರ್ ಅವರ ನಡವಳಿಕೆ ಮತ್ತು ಪಕ್ಷದೊಳಗಿನ ಅವರ ಏಕಪಕ್ಷೀಯ ನಿರ್ಧಾರಗಳು ಸಮುದಾಯದ ಇತರ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ, ಮುಂದಿನ ಸಚಿವ ಸಂಪುಟ ಪುನರ್ರಚನೆ ವೇಳೆ ಜಮೀರ್ ಅಹಮದ್ ಅವರ ಸಚಿವ ಸ್ಥಾನಕ್ಕೆ ‘ತಲೆದಂಡ’ವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಿಚ್ಚು ಈಗ ಬೆಂಗಳೂರು ಮತ್ತು ದೆಹಲಿಯವರೆಗೂ ಹಬ್ಬಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹಮದ್ ಅವರನ್ನು ಹೈಕಮಾಂಡ್ ಕೈಬಿಡುತ್ತದೆಯೇ ಅಥವಾ ಸಿಎಂ ಅವರ ರಕ್ಷಣೆಗೆ ಬರುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

US-Iran peace talks in Pakistan: ಕದನ ನಿಲ್ಲಿಸುವ ದಲ್ಲಾಳಿತನಕ್ಕೆ ಪಾಕ್‌ ಇಳಿದಿದ್ದೇಕೆ!?
ಮತದಾನ ಮುಗಿದಿದೆ, ರಿಲ್ಯಾಕ್ಸ್ ಮೂಡ್‌ನಲ್ಲಿ ಕದನ ಕಲಿಗಳು, ಏನು ಮಾಡುತ್ತಿದ್ದಾರೀಗ?