
ಬಾಗಲಕೋಟೆ/ ದಾವಣಗೆರೆ (ಏ.11): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕುಟುಂಬ, ದೇವಸ್ಥಾನ, ಮುಖಂಡರು, ಕಾರ್ಯಕರ್ತರ ಜತೆಗೆ ಸಮಯ ಕಳೆಯುತ್ತಿದ್ದಾರೆ. ಮತದಾನದ ಮರುದಿನವಾದ ಶುಕ್ರವಾರ ಅಭ್ಯರ್ಥಿಗಳು ದಿನನಿತ್ಯದ ಕಾರ್ಯ ಚಟುವಟಿಗಳಲ್ಲಿ ಎಂದಿನಂತೆ ಭಾಗವಹಿಸಿದ್ದರು. ಮೇ 4ರಂದು ಘೋಷಣೆ ಆಗಲಿರುವ ಫಲಿತಾಂಶದ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಇದ್ದು, ಫಲಿತಾಂಶ ಬರುವವರಿಗೂ ಚರ್ಚೆ ಮುಂದುವರೆಯಲಿದೆ.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಎಂ.ಶಾಮನೂರು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಕಳೆದ ಒಂದು ತಿಂಗಳಿನಿಂದ ಪ್ರಚಾರದಲ್ಲಿ ಭಾಗವಹಿಸಿದ್ದರು. ಚುನಾವಣೆ ನಂತರ ಎಂದಿನಂತೆ ಕೆಲಸಕ್ಕೆ ವಾಪಸಾಗಿದ್ದಾರೆ.
ಚರಂತಿಮಠ ಅವರು, ಬೆಳಗ್ಗೆ 10 ಗಂಟೆಗೆ ಎಪಿಎಂಸಿ ಅಡತಿ ಅಂಗಡಿಯಲ್ಲಿ ವ್ಯವಹಾರದ ಕುರಿತು ಮಾಹಿತಿ ಪಡೆದು ನಂತರ 11 ಗಂಟೆಗೆ ಬಿ.ವಿ.ವಿ ಸಂಘದ ಕಚೇರಿಗೆ ಆಗಮಿಸಿ ದಿನನಿತ್ಯದ ಕಾರ್ಯಚಟುವಟಿಗಳಲ್ಲಿ ಭಾಗವಸಿದ್ದರು. ಮೇಟಿ ಸಹ ಸ್ವ ಗ್ರಾಮವಾದ ತಿಮ್ಮಾಪುರದಲ್ಲಿ ಎಂದಿನಂತೆ ಜನರ ಜೊತೆಯಲ್ಲಿ ಕಾಲ ಕಳೆದರು.
ಸಮರ್ಥ ಬೆಳಗ್ಗೆಯೇ ಎಂದಿನಂತೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ದೇವಸ್ಥಾನಗಳಿಗೆ ತೆರಳಿದರು. ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆ ಬಗ್ಗೆ ಮಾಹಿತಿ ಪಡೆದರು.
ಮತ್ತೊಂದು ಕಡೆ ಶ್ರೀನಿವಾಸ ಅವರು ಬೆಳಗ್ಗೆ ಸ್ನೇಹಿತರು, ಬೆಂಬಲಿಗರು, ಹಿತೈಷಿಗಳೊಂದಿಗೆ ಹಳೆ ಬಸ್ ನಿಲ್ದಾಣ ಸಮೀಪದ ಕಾಫಿ ಬಾರ್ ಬಳಿ ಬಂದು, ‘ಕನ್ನಡಪ್ರಭ’ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮತದಾನ ಕುರಿತಂತೆ ಸುದ್ದಿಗಳನ್ನು ವೀಕ್ಷಿಸಿದರು.
ಮತ ಹಾಕಿದವರು, ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ ಶ್ರೀನಿವಾಸ ಮಧ್ಯಾಹ್ನ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಏ.11ರಂದು ಮಂತ್ರಾಲಯಕ್ಕೆ ತೆರಳಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದಾಗಿ ಶ್ರೀನಿವಾಸ ಹೇಳಿದರು.
ಎಸ್ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಸಹ ಕ್ಷೇತ್ರದ ಅಲ್ಪಸಂಖ್ಯಾತರ ಪ್ರದೇಶದಲ್ಲಿ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇತರೆ ಅಭ್ಯರ್ಥಿಗಳು ಸಹ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.