ಕಳೆದ 30 ವರ್ಷಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗಿಲ್ಲ ಯಾವುದೇ ಸ್ಥಾನ

Published : Aug 04, 2026, 08:22 PM IST
Cabinet

ಸಾರಾಂಶ

ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಆರ್.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರಂತಹ ಹಿರಿಯ ನಾಯಕರನ್ನು ಕೈಬಿಡಲಾಗಿದೆ.

ಬೆಂಗಳೂರು (ಆ.4): ಕಳೆದ ಮೂರು ದಶಕಗಳಲ್ಲೇ (30 ವರ್ಷಗಳು) ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಯಾವುದೇ ನಾಯಕರಿಗೂ ಪ್ರಾತಿನಿಧ್ಯ ಲಭಿಸಿಲ್ಲ.ರಾಮಕೃಷ್ಣ ಹೆಗಡೆ ಹಾಗೂ ಆರ್‌. ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರಲ್ಲದೆ, 1996ರ ನಂತರ ಬಂದಂತಹ ಪ್ರತಿಯೊಂದು ಸಚಿವ ಸಂಪುಟದಲ್ಲೂ ಬ್ರಾಹ್ಮಣ ಸಮುದಾಯದ ಕನಿಷ್ಠ ಒಬ್ಬರಾದರೂ ಸಚಿವರಾಗಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿಯ ಸಂಪುಟದಲ್ಲಿ ಸಮುದಾಯದ ಯಾವೊಬ್ಬ ನಾಯಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

ಕಾಂಗ್ರೆಸ್‌ನ ಪ್ರಮುಖ ಹಾಗೂ ಹಿರಿಯ ಬ್ರಾಹ್ಮಣ ನಾಯಕರಾದ ಆರ್‌.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರಿಬ್ಬರಿಗೂ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಕೈತಪ್ಪಿದೆ.

ಹಳಿಯಾಳ ಕ್ಷೇತ್ರದಿಂದ ದಾಖಲೆಯ 9 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಸುದೀರ್ಘ ಅವಧಿಗೆ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಆರ್‌.ವಿ. ದೇಶಪಾಂಡೆ ಅವರು, ಎಚ್‌ಡಿ ದೇವೇಗೌಡ, ಜೆಎಚ್ ಪಟೇಲ್ ಹಾಗೂ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅಂದರೆ 1994 ರಿಂದ 2004 ರವರೆಗೆ ಸತತ 10 ವರ್ಷಗಳ ಕಾಲ ಸಚಿವರಾಗಿದ್ದರು. ತದನಂತರ 2015 ರಿಂದ 2018 ರವರೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಆದರೆ, ಪ್ರಸ್ತುತ ವಿಧಾನಸಭೆ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಾಗಲಿ ಅಥವಾ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಾಗಲಿ ದೇಶಪಾಂಡೆ ಅವರಿಗೆ ಸ್ಥಾನ ಸಿಕ್ಕಿಲ್ಲ. ಈಗಾಗಲೇ ಹಲವು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಬೆಂಗಳೂರಿನ ಗಾಂಧಿನಗರ ಕ್ಷೇತ್ರದ 6 ಬಾರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್ ಅವರ ಪುತ್ರರಾಗಿರುವ ದಿನೇಶ್ ಗುಂಡೂರಾವ್ ಅವರಿಗೂ ಈ ಬಾರಿ ಸಚಿವ ಸ್ಥಾನ ನೀಡಿಲ್ಲ. ಇವರು ಸಿದ್ದರಾಮಯ್ಯ ಅವರ ಮೊದಲ ಹಾಗೂ ಎರಡನೇ ಅವಧಿಯ ಸಚಿವ ಸಂಪುಟಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ, 2018 ರಿಂದ 2020 ರವರೆಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಜಕೀಯವಾಗಿ ಬಲವಾಗಿರುವ ಮತ್ತು ಚುನಾವಣೆಯಲ್ಲಿ ಹೆಚ್ಚು ಲಾಭ ತಂದುಕೊಡುವ ಸಮುದಾಯಗಳಿಗೆ ಪಕ್ಷವು ಆದ್ಯತೆ ನೀಡುತ್ತದೆ ಎಂಬುದನ್ನು ಈ ನಿರ್ಧಾರದ ಮೂಲಕ ಕಾಂಗ್ರೆಸ್ ಸ್ಪಷ್ಟಪಡಿಸಿದೆ ಎಂದು ಕಾಂಗ್ರೆಸ್‌ನ ಬ್ರಾಹ್ಮಣ ಸಮುದಾಯದ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಜನಸಂಖ್ಯೆಯ ಶೇ. 2-3ರಷ್ಟಿರುವ ಸಮುದಾಯ

ಕರ್ನಾಟಕದ ಜನಸಂಖ್ಯೆಯ ಶೇ. 2-3 ರಷ್ಟಿರುವ ಮತ್ತು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿತ ನೆಲೆಯಾಗಿ ಕಾಣುವ ಈ ಸಮುದಾಯವನ್ನು 33 ಸದಸ್ಯರ ಸಚಿವ ಸಂಪುಟದಿಂದ ಹೊರಗಿಡಲಾಗಿದೆ. ಕಾಂಗ್ರೆಸ್ ನಿರ್ಧಾರವನ್ನು ಇತರ ಪ್ರಮುಖ ಸಾಮಾಜಿಕ ಗುಂಪುಗಳಿಗೆ ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳುವಾಗ ತನ್ನ ಮೂಲ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಬೆಂಬಲ ನೆಲೆಯನ್ನು ಕ್ರೋಢೀಕರಿಸುವ ಕಾರ್ಯತಂತ್ರದ ಭಾಗವೆಂದು ಪರಿಗಣಿಸಲಾಗುತ್ತಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಟಿ. ರಘುನಾಥ್ ಈ ಕ್ರಮವನ್ನು ನಿರಾಶಾದಾಯಕ ಎಂದು ಕರೆದಿದ್ದಾರೆ. 'ರಾಜಕೀಯ ಪಕ್ಷಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ, ಆದರೆ ಸಮುದಾಯಕ್ಕೆ ಈ ನಿರ್ಲಕ್ಷ್ಯವು ಕಳವಳಕಾರಿಯಾಗಿದೆ' ಎಂದು ಅವರು ಹೇಳಿದರು. "ಬ್ರಾಹ್ಮಣ ಸಮುದಾಯವು ಯಾವಾಗಲೂ ಸಂಪುಟದಲ್ಲಿ ಕನಿಷ್ಠ ಒಬ್ಬ ಸಚಿವರನ್ನು ಹೊಂದಿದೆ ಮತ್ತು ಕಾಂಗ್ರೆಸ್ ಬೆಳವಣಿಗೆಗೆ ಕೊಡುಗೆ ನೀಡಿದೆ. ಈ ನಿರ್ಧಾರವು ಸಮುದಾಯವು ತನ್ನ ರಾಜಕೀಯ ಬೆಂಬಲದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಒತ್ತಾಯಿಸಬಹುದು' ಎಂದು ಎಚ್ಚರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಟಾಲಿನ್​ ಬಾಯಲ್ಲಿ ಬಂದದ್ದು ಕಾವೇರಿ, ನಟಿ ತ್ರಿಶಾ ಎಲ್ಲಿ ಬಂದ್ರು? ತಮಿಳುನಾಡಲ್ಲಿ ಸಂಚಲನ ಸೃಷ್ಟಿಸಿದ ಅರೆಸ್ಟ್​ ವಿವಾದ
Udaynidhi stalin: ನಟಿ ತ್ರೀಷಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಉದಯನಿಧಿ ಬಂಧನ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವ ತೀರ್ಪು