ಜಮೀರ್ ಅಲ್ಲ, ಆ ಪರಮಾತ್ಮನೇ ಬಂದ್ರೂ ನಾಮಪತ್ರ ವಾಪಸ್ ಪಡೆಯೊಲ್ಲ: ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಸವಾಲ್

Published : Mar 25, 2026, 04:07 PM IST
davanagere south congress sadiq Pailwan

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನವೊಲಿಸಲು ಬರುವ ಸಚಿವ ಜಮೀರ್ ಅಹ್ಮದ್‌ಗೆ 'ಗೋ ಬ್ಯಾಕ್' ಎನ್ನುವುದಾಗಿ ಸವಾಲು ಹಾಕಿದ್ದಾರೆ.

ದಾವಣಗೆರೆ (ಮಾ.25): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ರಣಕಣ ರಾಜಕೀಯ ಮತ್ತಷ್ಟು ಕಾವೇರಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ನಾಯಕರ ಮನವೊಲಿಕೆಯ ನಡುವೆಯೂ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ: ನಾಮಪತ್ರ ವಾಪಸ್ ಇಲ್ಲ

ನಾನು ನಾಮಪತ್ರ ವಾಪಸ್ ಪಡೆದಿದ್ದೇನೆ ಎನ್ನುವ ಸುದ್ದಿಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ವದಂತಿ ಹಬ್ಬಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಾದಿಕ್ ಪೈಲ್ವಾನ್ ಎಚ್ಚರಿಸಿದ್ದಾರೆ. ತಾವು ನೂರಕ್ಕೆ ನೂರರಷ್ಟು ಕಣದಲ್ಲಿ ಇರುವುದಾಗಿ ಅವರು ದೃಢವಾಗಿ ತಿಳಿಸಿದ್ದಾರೆ.

ಜಮೀರ್ ಅಹ್ಮದ್‌ಗೆ 'ಗೋ ಬ್ಯಾಕ್' ಎಂದ ಪೈಲ್ವಾನ್!

ಸಚಿವ ಜಮೀರ್ ಅಹ್ಮದ್ ಅವರು ಮನವೊಲಿಕೆಗೆ ಬರುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಜಮೀರ್ ಅವರು ಮನವೊಲಿಸಲು ಬಂದರೆ ಅವರಿಗೆ ಗೋ ಬ್ಯಾಕ್ ಎನ್ನುತ್ತೇನೆ. ಮೊದಲು ಸಮುದಾಯದ ಮನವೊಲಿಸಿದ ಬಳಿಕವೇ ನನ್ನ ಬಳಿ ಬರಲಿ. ಅಲ್ಲವರೆಗೆ ಆ ಪರಮಾತ್ಮನೇ ಭೂಮಿಗೆ ಇಳಿದು ಬಂದು ಹೇಳಿದರೂ ನಾನು ನಾಮಪತ್ರ ವಾಪಸ್ ಪಡೆಯಲ್ಲ. ನಮ್ಮ ರಾಜ್ಯದ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ರಹೀಂ ಖಾನ್ ಅವರ ಮೇಲೆ ಅತೀವ ಬೇಸರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತ ಮತ್ತು ಅಹಿಂದ ಕಡೆಗಣನೆಗೆ ಆಕ್ರೋಶ

ಇಡೀ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯ ಅಸಮಾಧಾನಗೊಂಡಿದೆ. ಅಹಿಂದ ವರ್ಗಕ್ಕೆ ನೋವು ಮಾಡಿರುವುದರಿಂದ ನಾನು ರಣರಂಗಕ್ಕೆ ಇಳಿದಿದ್ದೇನೆ. ನನ್ನ ಮನವೊಲಿಸುವ ಮುಂಚೆ ನಮ್ಮ ಸಮಾಜದವರ ಮತ್ತು ಅಹಿಂದ ವರ್ಗದವರ ಮನವೊಲಿಸಲಿ. ಉಳಿದವರೆಲ್ಲರಿಗೂ ನಾಮಪತ್ರ ಹಿಂಪಡೆಯಲು ಹೇಳಿ, ನಾನೊಬ್ಬನೇ ಕಣದಲ್ಲಿ ಇರುತ್ತೇನೆ' ಯಾರೇ ಬಂದು ಮನವೊಲಿಸಿದರೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ

ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿರುವುದಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಗುಡುಗಿದ್ದಾರೆ. 'ನನಗೆ ಹೈಕಮಾಂಡ್‌ನಿಂದ ಸಾಕಷ್ಟು ಫೋನ್‌ಗಳು ಬಂದಿದ್ದವು, ಆದರೆ ನಾನು ಯಾವುದನ್ನೂ ಸ್ವೀಕರಿಸಿಲ್ಲ. ಅಲ್ಪಸಂಖ್ಯಾತರಿಗೆ ನೋವು ನೀಡಿರುವ ಪಕ್ಷಕ್ಕೆ ಈ ಬಾರಿ ಬಿಗ್ ಶಾಕ್ ನೀಡುತ್ತೇವೆ ಎಂದು ಎಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಸಕರಾಯ್ತು, ಸ್ಪೀಕರ್ ಖಾದರ್ ಜೊತೆಗೆ ಈಗ ಸಿಬ್ಬಂದಿಗಳ ಫೋಟೋಶೂಟ್, ಬದಲಾವಣೆಯ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ!
ಪ್ರದೀಪ್ ಈಶ್ವರ್‌ನ ನಿಮ್ಹಾನ್ಸ್ ಗೆ ಸೇರಿಸಿ: ಡಿಸಿ ಮೂಲಕ ಚುನಾವಣಾ ಆಯೋಗಕ್ಕೆ ಮಂಡ್ಯ ಬಿಜೆಪಿ ಮನವಿ