ರಾಜ್ಯಕ್ಕೆ ಬಂದ ಬಳಿಕ ಡಿಕೆಶಿ ಮೊದಲ ಏಟು ಇವರಿಗೆ, ಗುರಿ ಸರಿ ಇದ್ಯಾ?

By Web DeskFirst Published Oct 24, 2019, 9:08 PM IST
Highlights

ಡಿಕೆಶಿ ಬಿಡುಗಡೆ ನಂತರ ರಂಗೇರಿದ ಉಪಚುನಾವಣೆ ಅಖಾಡ/ ಹೊಸಕೋಟೆಯಲ್ಲಿ ಜಂಗೀ ಕುಸ್ತಿಗೆ ವೇದಿಕೆ ಸಿದ್ಧ/ ವಿಧಾಸಭೆಯಲ್ಲಿ ಅಂದೇ ಸವಾಲು ಎಸೆದಿದ್ದ ಡಿಕೆಶಿ

ಬೆಂಗಳೂರು(ಅ. 24)  51 ದಿನಗಳ ಸೆರೆವಾಸದ ಬಳಿಕ ಡಿಕೆ ಶಿವಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಒಂದು ರಿಲೀಫ್ ಪಡೆದುಕೊಂಡಿದ್ದಾರೆ. ಆದರೆ ಇತ್ತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ರಿಲೀಫ್ ಸಿಕ್ಕಿಲ್ಲ. ಅವರಿನ್ನೂ ಹುಡುಕಾಟದಲ್ಲಿಯೇ ಇದ್ದಾರೆ.

ವಿಧಾನಸಭೆಯಲ್ಲೇ ಮಾತನಾಡುತ್ತ ಡಿಕೆಶಿ ಎಂಟಿಬಿ ಬಗ್ಗೆ ಮಾತನಾಡಿದ್ದರು. ನನ್ನ ಮತ್ತು ನಿಮ್ಮ ಹೋರಾಟ ಹೊಸಕೋಟೆಯ ಅಖಾಡದಲ್ಲಿ ಎಂದು ಹೇಳಿದ್ದರು. ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು ಅಖಾಡವೆನೋ ಸಿದ್ಧವಾಗಿದೆ. ಆದರೆ ಎಂಟಿಬಿ ಸದ್ಯದ ಮಟ್ಟಿಗೆ ಬ್ಯಾಟಿಂಗ್ ಗೆ ಇಳಿಯುವ ಹಾಗಿಲ್ಲ.

ಡಿಕೆಶಿ ಬಗ್ಗೆ ಮೃದುವಾಗಿ ಮಾತನಾಡಿದ ಬಿಜೆಪಿ ನಾಯಕ

ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ: ಹೊಸಕೋಟೆಯ ಕಾಂಗ್ರೆಸ್ ಎಂಎಲ್ ಎ ಆಗಿ ಸಚಿವರೂ ಆಗಿದ್ದ  ಎಂಟಿಬಿ ನಾಗರಾಜ್ ಬದಲಾದ ರಾಜಕೀಯ ವಿದ್ಯಮಾನದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅಂದಿನ ಸ್ಪೀಕರ್ ರಮೇಸ್ ಕುಮಾರ್ ಎಂಟಿಬಿ ಅವರು ಸೇರಿದಂತೆ ರಾಜೀನಾಮೆ ನೀಡಿದ್ದ ಎಲ್ಲ ಶಾಸಕರನ್ನು ಸ್ಥಾನದಿಂದ ಅನರ್ಹಗೊಳಿಸಿದ್ದರು. ಅನರ್ಹತೆ ಪ್ರಶ್ನೆ ಮಾಡಿ ಅನರ್ಹ ಶಾಸಕರು ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ಮೆಟ್ಟಿಲು ಏರದ್ದು ಪ್ರಕರಣ ವಿಚಾರಣೆ ಹಂತದಲ್ಲಿ ಇದೆ.

ಡಿಸೆಂಬರ್ 5ಕ್ಕೆ ಚುನಾವಣೆ: ಡಿಸೆಂಬರ್ 5ಕ್ಕೆ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್ ಆಗಿದೆ. ಹೊಸಕೋಟೆಯಲ್ಲಿ ಬಿಜೆಪಿಯಿಂದ ಶರತ್ ಬಚ್ಚೇಗೌಡ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಗಿರಿಯನ್ನು ರಾಜ್ಯಸರ್ಕಾರ ದಯಪಾಲಿಸಿತ್ತು. ಆದರೆ ಶರತ್ ಇನ್ನೂ ಆ ಹುದ್ದೆ ಒಪ್ಪಿಕೊಂಡಿದಲ್ಲ. ಹಾಗಾಗಿ ಎಂಟಿಬಿ ಅವರಿಗೆ ಟಿಕೆಟ್ ಹಾದಿ ಇನ್ನೂ ಸಲೀಸಾಗಿಲ್ಲ.

ಬಿಜೆಪಿ ಸ್ನೇಹಿತರಿಗೂ ಧನ್ಯವಾದ

ಸವಾಲು-ಪ್ರತಿ ಸವಾಲು: ಡಿಕೆಶಿಯೇ ಮುಂದಾಗಿ ಎಂಟಿಬಿ ನಾಗರಾಜ್ ಅವರಿಗೆ ಸವಾಲು ಹಾಕಿದ್ದರು. ಇದಾದ ನಂತರದಲ್ಲಿ ಡಿಕೆಶಿ ಇಡಿ ಬಲೆಯಲ್ಲಿ ಸಿಕ್ಕಿ ತಿಹಾರ್ ಜೈಲುವಾಸ ಅನುಭವಿಸಬೇಕಾಗಿ ಬಂತು. ಇಲ್ಲಿ ಟಿಕೆಟ್ ಗಾಗಿ ಕಚ್ಚಾಟವೂ ಶುರುವಾಯ್ತು. ಆದರೆ ಈಗ ಡಿಕೆಶಿ ಬಿಡುಗಡೆ ಬಳಿಕ ಅಖಾಡ ಮತ್ತೆ ರಂಗೇರುವುದು ನಿಶ್ಚಿತ. ಸವಾಲು-ಪ್ರತಿಸವಾಲುಗಳು ವಿಜೃಂಭಿಸುವುದು ಖಂಡಿತ.

ಡಿಕೆಶಿ ಬಿಡುಗಡೆ ಮತ್ತು ಉಪಚುನಾವಣೆ: ನ್ಯಾಯಾಲಯ ಮತ್ತು ಇಡೀ ವಿಚಾರಣೆ ಹಂತಗಳನ್ನು ನೋಡಿದರೆ ಡಿಕೆಶಿ ಉಪಚುನಾವಣೆ ಮುಗಿಯುವವರೆಗೆ ಬಿಡುಗಡೆ ಭಾಗ್ಯ ಕಾಣುವುದು ಕಷ್ಟ ಎಂದೇ ಪರಿಭಾವಿಸಲಾಗಿತ್ತು. ಆದರೆ ಈಗ ಜಾಮೀನು ಸಿಕ್ಕಿದೆ. ಸಹಜವಾಗಿಯೇ ಕಾಂಗ್ರೆಸ್ ಗೆ ಇದೊಂದು ಟಾನಿಕ್ ನೀಡಲಿದ್ದು ಡಿಕೆಶಿಯೇ ಉಪಚುನಾವಣೆ ಉಸ್ತುವಾರಿ ವಹಿಸಿಕೊಳ್ಳಬಹುದು.

ಉಪಚುನಾವಣೆ ಮಾಸ್ಟರ್: ಡಿಕೆಶಿ ಒಂದರ್ಥದಲ್ಲಿ ಉಪಚುನಾವಣೆ ಕಿಂಗ್ ಎಂದೇ ಕರೆಸಿಕೊಂಡವರು. ಬಳ್ಳಾರಿಯಲ್ಲಿ ಉಗ್ರಪ್ಪ ಅವರನ್ನು ಸಂಸದರನ್ನಾಗಿ ಗೆಲ್ಲಿಸಿಕೊಂಡು ಬಂದಿದ್ದು ಶಿವಕುಮಾರ್ ಎಂಬ ವಿಚಾರ ರಹಸ್ಯವೇನಲ್ಲ.  ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರರಿಬ್ಬರ ಕಾಳಗ ನಡೆದಾಗ ಮಧು ಬಂಗಾರಪ್ಪ ಡಿಕೆಶಿ ಅವರೇ ಇಲ್ಲಿನ ಉಸ್ತುವಾರಿಯಾಗಲಿ ಎಂಬ ಬೇಡಿಕೆ ಇಟ್ಟಿದ್ದರು.

click me!