Karnataka Election: ಹುಕ್ಕೇರಿಯಲ್ಲಿ ಕತ್ತಿ ವಾರಸದಾರರು ಯಾರು?

By Kannadaprabha NewsFirst Published Feb 13, 2023, 1:24 PM IST
Highlights

ರಾಜ್ಯದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲೊಂದಾದ ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಮದಗಜಗಳ ಕಾಳಗಕ್ಕೆ ವೇದಿಕೆ ಸಜ್ಜುಗೊಂಡಿದೆ. ಪ್ರಭಾವಿ ಲಿಂಗಾಯತ ನಾಯಕ, ಹಿರಿಯ ರಾಜಕಾರಣಿ ದಿ.ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ಕ್ಷೇತ್ರದ ಶಾಸಕ ಸ್ಥಾನ ಈಗ ಖಾಲಿ ಆಗಿದೆ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಮೇಲಾಗಿದೆ. ಉಮೇಶ ಕತ್ತಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೀಗ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಾಗಿ ತೀವ್ರ ಹುಡುಕಾಟ ನಡೆಸಿದೆ. ಉಮೇಶ ಕತ್ತಿ ವಾರಸುದಾರರು ಯಾರಾಗುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಶ್ರೀಶೈಲ ಮಠದ

ಬೆಳಗಾವಿ (ಫೆ.13) : ರಾಜ್ಯದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲೊಂದಾದ ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಮದಗಜಗಳ ಕಾಳಗಕ್ಕೆ ವೇದಿಕೆ ಸಜ್ಜುಗೊಂಡಿದೆ. ಪ್ರಭಾವಿ ಲಿಂಗಾಯತ ನಾಯಕ, ಹಿರಿಯ ರಾಜಕಾರಣಿ ದಿ.ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ಕ್ಷೇತ್ರದ ಶಾಸಕ ಸ್ಥಾನ ಈಗ ಖಾಲಿ ಆಗಿದೆ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಮೇಲಾಗಿದೆ. ಉಮೇಶ ಕತ್ತಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೀಗ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಾಗಿ ತೀವ್ರ ಹುಡುಕಾಟ ನಡೆಸಿದೆ. ಉಮೇಶ ಕತ್ತಿ ವಾರಸುದಾರರು ಯಾರಾಗುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಈ ಕ್ಷೇತ್ರದಿಂದ ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ದಿ. ಉಮೇಶ ಕತ್ತಿ(Umesh katti) ಅವರು ಉತ್ತರ ಕರ್ನಾಟಕ(North Karnataka) ಪ್ರಭಾವಿ ನಾಯಕರಾಗಿದ್ದರು. ಅವರು ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಸದಾ ಧ್ವನಿ ಎತ್ತುತ್ತಲೇ ಇದ್ದರು. ಪಕ್ಷದ ಮೇಲೂ ಅವರು ವರ್ಚಸ್ಸು ಹೊಂದಿದ್ದರು. ಇಲ್ಲಿ ಬಿಜೆಪಿ(BJP) ಭದ್ರಕೋಟೆಕ್ಕಿಂತ ಕತ್ತಿ ಅವರ ಹಿಡಿತದಲ್ಲಿತ್ತು. ಕತ್ತಿ ಅವರ ಅಗಲಿಕೆಯಿಂದ ಶಾಸಕ ಸ್ಥಾನ ತೆರವುಗೊಂಡಿದೆ. ಉಪಚುನಾವಣೆ ಎದುರಿಸಬೇಕಿದ್ದ ಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ.

ರಾಯಚೂರು ನಗ​ರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್‌ ಲೆಕ್ಕಾಚಾರ

ಸತೀಶ ಕಸರತ್ತು:

ಪ್ರಬಲರಾಗಿದ್ದ ದಿ.ಉಮೇಶ ಕತ್ತಿ ಅವರಿಗೆ ಕಳೆದ ಬಾರಿ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡಿತ್ತು. ಆದರೆ, ಈ ಬಾರಿ ಬಿಜೆಪಿಯಲ್ಲಿ ಬಲಿಷ್ಠ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಹಾಗಾಗಿ, ಈ ಕ್ಷೇತ್ರದವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ನಾನಾ ರಣತಂತ್ರ ರೂಪಿಸುತ್ತಿದೆ. ಹೇಗಾದರೂ ಮಾಡಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish Jarkiholi) ಕಸರತ್ತು ನಡೆಸಿದ್ದಾರೆ.

ಬಿಜೆಪಿ ಟಿಕೆಟ್‌ ಬಿಕ್ಕಟ್ಟು:

ಇನ್ನು ಉಮೇಶ ಕತ್ತಿ ಅಗಲಿಕೆಯಿಂದ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಕ್ಕಟ್ಟು ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉಮೇಶ ಕತ್ತಿ ಅವರ ಸಹೋದರ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಪುತ್ರ ನಿಖಿಲ್‌ ಕತ್ತಿ(Nikhil Katti) ಬಿಜೆಪಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳು. ರಮೇಶ ಕತ್ತಿ ಇಲ್ಲವೇ ನಿಖಲ್‌ ಅವರಿಗೆ ಬಿಜೆಪಿ ಟಿಕೆಟ್‌(BJP Ticket) ಸಿಗಬಹುದು. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಂದ್ರ ನೇರ್ಲಿ ಕೂಡ ಬಿಜೆಪಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳಲ್ಲೂಬ್ಬರು. ಕತ್ತಿ ಕುಟುಂಬದ ಮೂಲಕವೇ ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿದೆ ಎನ್ನಲಾಗಿದೆ.

Ticket fight: ಈಶ್ವರಪ್ಪಗೆ ಟಿಕೆಟ್‌ ಸಿಗುತ್ತೋ, ಇಲ್ವೋ ಎಂಬುದೇ ಕುತೂಹಲ

ಉಮೇಶ ಕತ್ತಿ ಅವರು ಹುಕ್ಕೇರಿ ಕ್ಷೇತ್ರದಿಂದ ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2008ರಲ್ಲಿ ಜೆಡಿಎಸ್‌ನಿಂದ ಉಮೇಶ ಕತ್ತಿ ಆಯ್ಕೆಯಾಗಿದ್ದರು. ಬಳಿಕ ಆಪರೇಷನ್‌ ಕಮಲಕ್ಕೆ ಒಳಗಾಗಿ, ಬಿಜೆಪಿ ಸೇರ್ಪಡೆಯಾಗಿದ್ದರು. ಉಮೇಶ ಕತ್ತಿ ಅವರ ತಂದೆ ವಿಶ್ವನಾಥ ಕತ್ತಿ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, ಇಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಹಾಗಾಗಿ, ಇನ್ನು ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎ.ಬಿ.ಪಾಟೀಲ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈ ಹಿಂದೆ ಸಂಕೇಶ್ವರ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗುತ್ತ ಬಂದಿದ್ದ ಎ.ಬಿ.ಪಾಟೀಲ ಅವರು, ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವರಾಗಿದ್ದರು. ಕ್ಷೇತ್ರವಿಂಗಡಣೆಯಿಂದ ಸಂಕೇಶ್ವರ ಕ್ಷೇತ್ರ ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಪಾಟೀಲ ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಉಮೇಶ ಕತ್ತಿ ಅವರ ವಿರುದ್ಧ ಪರಾಭವಗೊಂಡಿದ್ದರು. ಪ್ರಭಾವಿ ಅಭ್ಯರ್ಥಿ ಇಲ್ಲದಿರುವುದರಿಂದ ಕಾಂಗ್ರೆಸ್‌ ಹುಕ್ಕೇರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ಹೆಣೆದಿದೆ. ಲಿಂಗಾಯತ ಮತದಾರರೇ ಇಲ್ಲಿ ನಿರ್ಣಾಯಕರು.

click me!