Karnataka assembly election results: ನ್ಯಾಯವಾದಿ, ವೈದ್ಯರು ಕೊಡಗಿನ ನೂತನ ಶಾಸಕರು

By Kannadaprabha NewsFirst Published May 19, 2023, 5:22 AM IST
Highlights

ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ನೂತನವಾಗಿ ಚುನಾಯಿತರಾಗಿರುವ ಇಬ್ಬರೂ ಶಾಸಕರು ವೃತ್ತಿನಿರತರು. ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ವೃತ್ತಿಯಲ್ಲಿ ಹಿರಿಯ ವಕೀಲ, ಮಡಿಕೇರಿ ಶಾಸಕ ಡಾ.ಮಂಥರ್‌ ಗೌಡ ವೈದ್ಯರು.

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ (ಮೇ.19) ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ನೂತನವಾಗಿ ಚುನಾಯಿತರಾಗಿರುವ ಇಬ್ಬರೂ ಶಾಸಕರು ವೃತ್ತಿನಿರತರು. ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ವೃತ್ತಿಯಲ್ಲಿ ಹಿರಿಯ ವಕೀಲ, ಮಡಿಕೇರಿ ಶಾಸಕ ಡಾ.ಮಂಥರ್‌ ಗೌಡ ವೈದ್ಯರು.

ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ(S Ponnanna MLA Virajapete) ಹಿರಿಯ ರಾಜಕಾರಣಿ ದಿ. ಎ.ಕೆ. ಸುಬ್ಬಯ್ಯ-ಪೊನ್ನಮ್ಮ ದಂಪತಿ ಪುತ್ರ. ಕರ್ನಾಟಕದ ಉಚ್ಚ ನ್ಯಾಯಾಲಯದಿಂದ ಗೊತ್ತುಪಡಿಸಿದ ಹಿರಿಯ ವಕೀಲರಾಗಿದ್ದಾರೆ.

ಸಿದ್ದರಾಮಯ್ಯ(Siddaramaiah) ಸರ್ಕಾರದ ಅವಧಿಯಲ್ಲಿ ಹಾಗೂ ಕುಮಾರಸ್ವಾಮಿ(HD Kumaraswamy) ನೇತೃತ್ವದ ಸಮ್ಮಿಶ್ರ ಸರ್ಕಾರದ ಆರಂಭಿಕ ಅವಧಿಯಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿದ್ದರು. ತಮ್ಮ ಖಾಸಗಿ ಪ್ರಾಕ್ಟೀಸ್‌ ಪ್ರಾರಂಭಿಸಲು 2018 ಏಪ್ರಿಲ್‌ನಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

ಹೈದರಾಬಾದ್‌ ಕರ್ನಾಟಕ ಎಜುಕೇಶನ್‌ ಸೊಸೈಟಿಯಲ್ಲಿ ಪಿಯುಸಿ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮಾಡಿದ್ದಾರೆ. ಪೊನ್ನಣ್ಣ 1997ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಕೋಶದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ಆ ನಂತರ ಕಾಂಗ್ರೆಸ್‌ ಪಕ್ಷದ ಅಧಿಕೃತ ವಕ್ತಾರರಾಗಿಯೂ ನೇಮಿಸಲಾಯಿತು. ಹಿರಿಯ ಸಲಹೆಗಾರರಾಗಿ ನೇಮಕಗೊಳ್ಳುವ ಮೊದಲು ಎಕೆಎಸ್‌ ಲೀಗಲ್‌ ಹೆಸರಿನಲ್ಲಿ ಕಾನೂನು ಸಂಸ್ಥೆ ಸ್ಥಾಪಿಸಿದ್ದಾರೆ.

ಸಮಾಜ ಸೇವೆ: ಪೊನ್ನಣ್ಣ ಸಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊಡಗಿಗೆ ಬಂದಿದ್ದ ಪೊನ್ನಣ್ಣ ಅವರು ಎ.ಕೆ. ಸುಬ್ಬಯ್ಯ ಪೊನ್ನಮ್ಮ ಶೈಕ್ಷಣಿಕ ಮತ್ತು ಚಾರಿಟಬಲ್‌ ಶೈಕ್ಷಣಿಕ ಮತ್ತು ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಪರೋಪಕಾರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಸುಮಾರು 10 ಸಾವಿರ ಮಂದಿಗೆ ಕೋವಿಡ್‌ ಸಂದರ್ಭದಲ್ಲಿ ಕಿಟ್‌ ವಿತರಣೆ ಮಾಡಿದ್ದರು. ಹಲವು ದೇವಾಲಯಗಳಿಗೆ ಹಣ, ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಕಾನೂನು ಹೋರಾಟಗಳ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿದ ಕೀರ್ತಿ ಪೊನ್ನಣ್ಣ ಅವರದ್ದು.

ಡಾ.ಮಂಥರ್‌ ಗೌಡ:

ಮಡಿಕೇರಿ ಶಾಸಕ ಡಾ.ಮಂಥರ್‌ ಗೌಡ(Manthargowda Madikeri MLA) ಎಂಬಿಬಿಎಸ್‌, ಎಂಡಿ ರೇಡಿಯಾಲಜಿಸ್ಟ್‌ ಪದವೀಧರರು. ವೃತ್ತಿಯಲ್ಲಿ ವೈದ್ಯರಾಗಿರುವ ಮಂಥರ್‌ ಹಲವು ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎ.ಮಂಜು ಅವರ ಪುತ್ರರಾಗಿರುವ ಮಂಥರ್‌ ಕೊಡಗಿನ ಸಾಕಮ್ಮ ಕುಟುಂಬದವರು.

ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಿರುವ ಮಂಥರ್‌, ಇದೀಗ ರಾಜಕೀಯ ಕ್ಷೇತ್ರದ ಮೂಲಕ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

2021ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಡಾ.ಮಂಥರ್‌ ಗೌಡ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು.

ಅವರು ಈ ಹಿಂದೆ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಸಮಾಜ ಸೇವೆ, ಹಲವು ಕ್ರೀಡಾಕೂಟಗಳಿಗೆ ಪ್ರೋತ್ಸಾಹ, ದೇವಾಲಯಗಳಿಗೆ ಮಂಥರ್‌ ದೇಣಿಗೆ ನೀಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Kodagu Election Results 2023: 25 ವರ್ಷಗಳ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್, ಪೊನ್ನಣ್ಣಗೆ ಸಚಿವ ಸ್ಥಾನದ ಆಗ್ರಹ

ಇದೀಗ ಶಾಸಕರಾಗಿ ಆಯ್ಕೆಯಾಗಿರುವ ಮಂಥರ್‌ ‘ಸಮೃದ್ಧ ಕೊಡಗು’ ಪರಿಕಲ್ಪನೆ ಮೂಲಕ ಕೊಡಗಿನ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಬಗೆಯರಿಸಲು ಯೋಜನೆ ರೂಪಿಸಿದ್ದಾರೆ.

click me!