ಕರ್ನಾಟಕದಲ್ಲಿ ಮರಾಠ ಪ್ರಾಧಿಕಾರಕ್ಕೆ ಆಕ್ರೋಶ, ಸಿಎಂ ರಾಜೀನಾಮೆಗೆ ಆಗ್ರಹ

By Suvarna NewsFirst Published Nov 15, 2020, 8:23 PM IST
Highlights

ರಾಜ್ಯ ಸರ್ಕಾರ ದಿಢೀರನೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದ್ದು,  ಇದಕ್ಕೆ ಆರಂಭದಲ್ಲಿಯೇ ರಾಜ್ಯದ ನಾನಾ ಭಾಗಗಳಲ್ಲಿ ಅಪಸ್ವರ ಕೇಳಿ ಬಂದಿದೆ.

ಬೆಂಗಳೂರು, (ನ.15):  ಏಕಾಏಕಿ ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠಿಗರ ಮತ ಸೆಳೆಯುವ ಏಕೈಕ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿದೆ ಎಂದು ಆರೋಪಿಸಿವೆ.

ಪುತ್ರ ಹೇಳಿದ ಒಂದೇ ಮಾತಿಗೆ ಜಾರಿಗೊಳಿಸಿದ ಸಿಎಂ: ಇದೆಲ್ಲ ಬಸವ'ಕಲ್ಯಾಣ'ಕ್ಕಾಗಿ...!

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯವಾಗಿದೆ. ಈ ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮರಾಠಿ ಪ್ರಾಧಿಕಾರ ರಚನೆಯಿಂದ ಭಾರಿ ಪಿತೂರಿ ಮಾಡಲಾಗಿದೆ. ಇದರ ಹಿಂದೆ ಪ್ರಧಾನಿ ಮೋದಿ ಕುಮ್ಮಕ್ಕು ಇದೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎಂದು ಬಂದಿರಲಿಲ್ಲ. ಇವತ್ತು ಮರಾಠಿ ನಾಳೆ ತಮಿಳು ನಾಡಿದ್ದು ತೆಲುಗು ಆಮೇಲೆ ಮಲೆಯಾಳಂ ಪ್ರಾಧಿಕಾರ ರಚನೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಇಡೀ ಸಮಗ್ರ ಕರ್ನಾಟಕದ ಕನ್ನಡಿಗರು ಬೀದಿಗೆ ಬರಲೇಬೇಕು. ನಾನಂತು ಜೈಲಿಗೆ ಹೋಗಲು ಸಿದ್ಧ, ಹೋರಾಟ ತೀವ್ರಗೊಳಿಸುತ್ತೇವೆ. ಅದಕ್ಕಾಗಿ ವಿಧಾನಸೌಧ ಮುಂದೆ ನಿಂತು  ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ಒತ್ತಾಹಿಸುತ್ತೇನೆ. ಮರಾಠಿ ಪ್ರಾಧಿಕಾರ ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದರು.

click me!