
ನವದೆಹಲಿ(ಜು.13): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಅಪಾಯ ತಂದೊ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತಿರುವಾಗಲೇ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ಜೂ.25ನ್ನು 'ಸಂವಿಧಾನ ಹತ್ಯಾ ದಿವಸ'ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಜೂ.25ನ್ನು ಸಂವಿಧಾನ ಹತ್ಯಾ ದಿವಸವಾಗಿ ಆಚರಿಸುವುದರಿಂದ ಸಂವಿಧಾನವನ್ನು ತುಳಿದಾಗ ಏನಾಗುತ್ತದೆ ಎಂಬುದು ನೆನಪಿಗೆ ಬರುತ್ತದೆ. ಭಾರತದ ಕರಾಳ ಚರಿತ್ರೆ ಯಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ತುರ್ತು ಪರಿಸ್ಥಿತಿಯ ವೇಳೆ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರನ್ನೂ ಸ್ಮರಿಸುವ ದಿನ ಇದಾಗಲಿದೆ' ಎಂದು ಬಣ್ಣಿಸಿದ್ದಾರೆ.
ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಸಂವಿಧಾನ ಹತ್ಯಾ ದಿನ ಘೋಷಿಸಿದ ಮೋದಿ ಸರ್ಕಾರ
ಅಧಿಸೂಚನೆಯಲ್ಲೇನಿದೆ?:
1975ರ ಜೂ.25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಅದಾದ ಬಳಿಕ ಅಂದು ಆಡಳಿತದಲ್ಲಿದ್ದ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿತು. ದೇಶದ ಜನರನ್ನು ವ್ಯಾಪಕ ದೌರ್ಜನ್ಯಕ್ಕೆ ಗುರಿಪಡಿ ಸಲಾಯಿತು. ದೇಶದಜನರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಪುಟಿದೇಳುವ ಶಕ್ತಿಯ ಬಗ್ಗೆ ನಂಬಿಕೆ ಇದೆ. ಹೀಗಾಗಿ ಜೂ.25 ಅನ್ನು ಸಂವಿಧಾನ ಹತ್ಯಾ ದಿವಸವಾಗಿ ಆಚರಿಸಲಾಗುತ್ತದೆ. ತನ್ಮೂಲಕ ತುರ್ತು ಪರಿಸ್ಥಿತಿ ವೇಳೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರ ವಿರುದ್ಧ ಹೋರಾಡಿ ಹಾಗೂ ಹಿಂಸೆ ಅನುಭವಿಸಿದ ಎಲ್ಲರನ್ನೂ ಸ್ಮರಿಸಲಾಗುತ್ತದೆ. ಭವಿಷ್ಯದಲ್ಲಿ ಮುಂದೆಂದೂ ಈ ರೀತಿ ಅಧಿಕಾರ ದುರ್ಬಳಕೆಗೆ ಬೆಂಬಲ ನೀಡಬೇಡಿ ಎಂದು ಮರುಬದ್ಧತೆ ವ್ಯಕ್ತಪಡಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ವಾಧಿಕಾರಿ ಮನಸ್ಥಿತಿಯನ್ನು 1975ರ ಜೂ.25ರಂದು ನಿರ್ಲಜ್ಜೆಯಿಂದ ಪ್ರದರ್ಶಿಸಿದ್ದ ಇಂದಿರಾ ಅವರು, ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಭಾರತದ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಚುಕಿದ್ದರು. ಲಕ್ಷಾಂತರ ಜನರನ್ನು ತಪ್ಪು ಮಾಡದಿದ್ದರೂ ಜೈಲಿಗೆ ಅಟ್ಟಲಾಗಿತ್ತು ಎಂದಿದ್ದಾರೆ.
ದುರ್ಬಲ ಜನಾದೇಶ ಪಡೆದರೂ ಮೋದಿ ವರ್ತನೆ ಬದಲಾಗಿಲ್ಲ: ಸೋನಿಯಾ ಗಾಂಧಿ ಆಕ್ರೋಶ
ಜೂ.4 ಮೋದಿ ಮುಕ್ತಿ ದಿವಸ: ಕಾಂಗ್ರೆಸ್!
ನವದೆಹಲಿ: ಜೂ.25ನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ರುವ ಕಾಂಗ್ರೆಸ್, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಹೀನಾಯವಾಗಿ ಸೋತ ಜೂ.4ನ್ನು ಮೋದಿ ಮುಕ್ತಿ ದಿವಸ್ ಎಂದು ಇತಿಹಾಸದಲ್ಲಿವುದು ಎಂದಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ವಿಷಯ ತಿಳಿಸಿದ್ದಾರೆ. 10 ವರ್ಷ ಅಘೋಷಿತ ತುರ್ತು ಸ್ಥಿತಿ ಜಾರಿಗೊಳಿಸಿದ ಹಾಗೂ ತಮ್ಮನ್ನು ದೇವರ ಅವತಾರ ಎಂದು ಕರೆದುಕೊಳ್ಳುವ ಪ್ರಧಾನಿ ಜನರ ಗಮನ ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಅವರು ಹೀನಾಯವಾಗಿ ಸೋತ ಜೂ.4ನ್ನು ಮೋದಿ ಮುಕ್ತಿ ದಿವಸ್ ಎಂದು ಇತಿಹಾಸದಲ್ಲಿ ಗುರುತಿಸಲಾಗುವುದು' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.