
ಬಂಗಾರಪೇಟೆ (ಮಾ.07): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ಗೆ ಎಷ್ಟು ಸ್ಥಾನಗಳನ್ನು ಸಿಗಬಹುದು ಎಂಬುದಕ್ಕಿಂತ ಎನ್ಡಿಎ ಅಭ್ಯರ್ಥಿಗಳು ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬುದೇ ಮುಖ್ಯವೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಬಾಲಾಜಿ ಮಿನಿ ಹಾಲ್ನಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಲಿಸಲು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಕಾಂಗ್ರೆಸ್ ನವರಿಗೆ ತಾಕತ್ತು ಇದ್ದರೆ ಲೋಕಸಭೆ ಚುನಾವಣೆ ನಂತರ ಸರ್ಕಾರ ಮುಂದುವರೆಸಿಕೊಂಡು ಹೋಗಲಿ ನೋಡೋಣವೆಂದು ಸವಾಲು ಹಾಕಿದರು.
ವಿಶ್ವವೇ ಮೆಚ್ಚಿದ ಪ್ರಧಾನಿ: ರಾಜ್ಯದಲ್ಲಿ ಬರದಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಅದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ತೆರಿಗೆ ಹಣವನ್ನು ಬಳಸಿಕೊಂಡು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇಲ್ಲ ಎಂದು ಗ್ಯಾರಂಟಿ ಸಮಾವೇಶವನ್ನು ಟೀಕಿಸಿದರು. ವಿಶ್ವವೇ ಮೆಚ್ಚಿರುವ ನಾಯಕ ಪ್ರಧಾನಿ ಮೋದಿರನ್ನು ಹ್ಯಾಟ್ರಿಕ್ ಪ್ರಧಾನಿಯಾಗಿ ಮಾಡುವುದೇ ಬಿಜೆಪಿ,ಜೆಡಿಎಸ್ ಪಕ್ಷಗಳ ಒಂದೇ ಗುರಿಯಾಗಿದೆ ಎಂದರು.
೨೦೨೮ರಲ್ಲಿ ಎಚ್ಡಿಕೆ ಮುಖ್ಯಮಂತ್ರಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಾಯಿತು. ಆದರೆ ಕಾಂಗ್ರೆಸ್ ನವರು ಮೈತ್ರಿ ಧರ್ಮವನ್ನು ಪಾಲಿಸದೆ ತುಮಕೂರು, ಮಂಡ್ಯದಲ್ಲಿ ಕೈಕೊಟ್ಟಿದ್ದನ್ನು ಎಂದಿಗೂ ಮರೆಯಲಾಗದು, ಆ ತಪ್ಪು ಮತ್ತೆ ಮರುಕಳಿಸಲು ಬಿಡದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗದೆ ಮುಂದೆ ಸಹ ಮುಂದುವರೆಯಬೇಕು ಎಂದರಲ್ಲದೆ ಮತ್ತೆ ೨೦೨೮ರಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ತನಕ ಕಾರ್ಯಕರ್ತರು ವಿಶ್ರಾಂತಿ ಪಡೆಯಬಾರದು ಎಂದು ಕರೆ ನೀಡಿದರು.
28 ಎಂಪಿ ಸ್ಥಾನಗಳಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು: ನಿಖಿಲ್ ಕುಮಾರಸ್ವಾಮಿ
ಈ ವೇಳೆ ಪಕ್ಷದ ತಾಃ ಅಧ್ಯಕ್ಷ ಮುನಿರಾಜು,ಎಂಎಲ್ಸಿ ಗೋವಿಂದರಾಜು, ಎಂ.ಮಲ್ಲೇಶಬಾಬು, ಮಂಗಮ್ಮಮುನಿಸ್ವಾಮಿ, ರಾಮೇಗೌಡ,ರಾಮು, ಸಿ.ಎಂ.ಆರ್.ಶ್ರೀನಾಥ್, ಮಹಿಳಾ ಘಟಕದ ಅಧ್ಯಕ್ಷ ರಶ್ಮಿ,ಮುನಿಯಪ್ಪ, ನಾಗರಾಜ್, ಶಿವಕುಮಾರ್, ಆಕಾಶಗೌಡ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.