
ಬೀದರ್ (ಜು.31): ಆಗಸ್ಟ್ನಿಂದ ರಾಜ್ಯದ 104 ವಿಧಾನಸಭಾ ಕ್ಷೇತ್ರಗಳಾದ್ಯಂತ ಪಂಚರತ್ನ ರಥಯಾತ್ರೆ ಆರಂಭಿಸಲಾಗುತ್ತಿದ್ದು, ಪ್ರತಿ ಕ್ಷೇತ್ರದ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಪಕ್ಷದ ಕಾರ್ಯ ಯೋಜನೆಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಹಂತಗಳಲ್ಲಿ ರಥಯಾತ್ರೆ ನಡೆಯುತ್ತದೆ.
ಮೊದಲ ಹಂತದ ಕಾರ್ಯಕ್ರಮ ಕುರಿತಂತೆ ಶೀಘ್ರದಲ್ಲಿ ದಿನಾಂಕ ಘೋಷಣೆ ಮಾಡುತ್ತೇವೆ. ನಾನು ಚುನಾವಣೆ ಪೂರ್ವದಲ್ಲಿಯೇ ನಮ್ಮ ಯೋಜನೆಯ ಎಲ್ಲ ರೂಪರೇಷೆಗಳನ್ನು ಜನರ ಮುಂದಿಡುತ್ತೇನೆ ಎಂದರು. ಇದೇ ವೇಳೆ, 2023ರ ಸಾರ್ವತ್ರಿಕ ಚುನಾವಣೆಗೆ ನಿಖಿಲ್ ಸ್ಪರ್ಧೆ ಇಲ್ಲ. ಅವರನ್ನು ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸುವದಕ್ಕಿಂತ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಕಳಿಸಿ ಯುವ ಮತದಾರರ ಮನವೊಲಿಸುವುದಕ್ಕೆ ಬಳಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಬೊಮ್ಮಾಯಿ ಮಂಗಳೂರಲ್ಲಿದ್ದಾಗಲೇ 3ನೇ ಕೊಲೆಯಾಗಿದೆ: ಎಚ್ಡಿಕೆ ಕಿಡಿ
ಏನಿದು ಪಂಚರತ್ನ?: ಉಚಿತ ಶಿಕ್ಷಣ, ಆರೋಗ್ಯ, ಯುವಜನತೆಗೆ ಸ್ವಉದ್ಯೋಗ, ರೈತರ ಉನ್ನತಿ, ವಸತಿ ಸೌಕರ್ಯ ಎಂಬ ಐದು ಅಂಶಗಳು ‘ಪಂಚರತ್ನ’ಗಳಾಗಿವೆ. ಈ ಹಿಂದೆಯೂ ಈ ಹೆಸರಲ್ಲಿ ಯಾತ್ರೆ ನಡೆದಿತ್ತು. ಮುಂದೆಯೂ ಇವುಗಳನ್ನು ಇಟ್ಟುಕೊಂಡು ಜನತೆ ಬಳಿ ಹೋಗಿ ರಾಜ್ಯಾದ್ಯಂತ ಮತ ಕೇಳಲು ಆರಂಭಿಸಲಾಗುವುದು. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ನ ವೈಫಲ್ಯಗಳನ್ನು ಜನರ ಮುಂದಿಡುವುದರ ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಕ್ಕೆ ದ್ರೋಹ ಮಾಡಿವೆ ಎಂದು ತಿಳಿಸಲು ರಣತಂತ್ರ ರೂಪಿಸಲಾಗಿದೆ.
ಜೆಡಿಎಸ್ ಬಲವರ್ಧನೆಗಾಗಿ ಬೀದರ್ನಲ್ಲಿ ಸಭೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ, ಬಲವರ್ಧನೆಗೊಳಿಸುವಕ್ಕಾಗಿಯೇ ಈ ಭಾಗದ ಬೀದರ್ನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮುಂಬರುವ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಪ್ರಮುಖರ ಸಭೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ಯತೀತ ಜನತಾದಳ ಪಕ್ಷವನ್ನು ಸಂಘಟಿಸುವದಕ್ಕಾಗಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆ ನಡೆಸಲಾಗುತ್ತದೆ. ಈಗ ಕಲ್ಯಾಣ ಕರ್ನಾಟಕ ಭಾಗದಿಂದ ಸಭೆ ಆರಂಭಿಸಲಾಗಿದೆ ಎಂದರು. ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ಪ್ರಮುಖರು ಸೇರಿದಂತೆ ಅನೇಕರು ಅನೇಕ ಸಲಹೆ ನೀಡಿದ್ದಾರೆ. ಜಿಲ್ಲೆಗಳ ಮುಖಂಡರಿಂದ ಅನಿಸಿಕೆಗಳನ್ನು ಪಡೆದುಕೊಂಡಿದ್ದೇವೆ. ಕೊಪ್ಪಳ ಮತ್ತು ಬಳ್ಳಾರಿ ಭಾಗದಲ್ಲಿ ಪಕ್ಷ ಸಂಘಟನೆಯಾಗಬೇಕಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರಿನಲ್ಲಿ ಈಗಾಗಲೇ ಪಕ್ಷ ಉತ್ತಮ ರೀತಿಯಲ್ಲಿದೆ ಎಂದರು.
ಸಾವಿನ ವೇಳೆ ಸರ್ಕಾರಕ್ಕೆ ಸಂಭ್ರಮ ಬೇಕಾ: ಎಚ್.ಡಿ.ಕುಮಾರಸ್ವಾಮಿ
ನಾವು ಅನೇಕ ಬಾರಿ ಈ ಭಾಗದಲ್ಲಿ ಗೆದ್ದಿದ್ದೇವೆ. ಇನ್ನೂ ಹತ್ತು ಹನ್ನೆರಡು ದಿನಗಳಲ್ಲಿ ಬೀದರ್ ಜಿಲ್ಲೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಅವರಿಗೆ ಸೂಚಿಸಿದ್ದೇನೆ. ರಾಯಚೂರು ಜಿಲ್ಲೆಯಲ್ಲಿ ಮಸ್ಕಿ ಹೊರತುಪಡಿಸಿ ಉಳಿದೆಡೆ ಸಂಘಟನೆ ಚೆನ್ನಾಗಿದೆ. ಮುಂದಿನ ತಿಂಗಳಲ್ಲಿ ಪಕ್ಷದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಎಚ್ಡಿ ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.