ಮೈಸೂರು ಮೇಯರ್ ಪಟ್ಟ ಜೆಡಿಎಸ್‌ಗೆ, ಆದ್ರೂ ಕುಮಾರಸ್ವಾಮಿಗೆ ಭಾರೀ ಮುಖಭಂಗ

By Suvarna NewsFirst Published Feb 24, 2021, 2:37 PM IST
Highlights

ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಚ್‌ಡಿ ಕುಮಾರಸ್ವಾಮಿಗೆ ಎಚ್‌ಡಿ ದೇವೇಗೌಡ ಬಿಗ್ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, (ಫೆ.24): ಕೊನೇ ಕ್ಷಣದಲ್ಲಿ ಸಿದ್ದರಾಮಯ್ಯ ಅವರ ಮಾಸ್ಟರ್ ಪ್ಲಾನ್ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ್ರ ಉರುಳಿಸಿದ ದಾಳದಿಂದಾಗಿ ಬಿಜೆಪಿ ಹಾಗೂ ಎಚ್‌ಡಿ ಕುಮಾರಸ್ವಾಮಿ ನಿರೀಕ್ಷೆ ಹುಸಿಯಾಗಿದೆ.

"

ಹೌದು....ದೊಡ್ಡಗೌಡ್ರ ಮೆಗಾ ಪ್ಲಾನ್‌ನಿಂದ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್​​​-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿದ್ದು,  ಮೇಯರ್ ಹುದ್ದೆ ಜೆಡಿಎಸ್​ ಪಾಲಾಗಿದ್ದರೆ, ಕಾಂಗ್ರೆಸ್​ನ ಅಭ್ಯರ್ಥಿ ಉಪ ಮೇಯರ್​ ಆಗಿದ್ದಾರೆ.

ಮೂರೂ ಪಕ್ಷಗಳಿಗೆ ಬಹುಮತವಿಲ್ಲದ ಕಾರಣ ಮೈತ್ರಿಗೆ ನಾನಾ ಕಸರತ್ತುಗಳು ನಡೆದಿದ್ದವು. ಇದಕ್ಕಾಗಿ ಕಳೆದ ಎರಡು ದಿನಗಳಿಂದ ಹಲವು ಬೆಳವಣಿಗೆಗಳು ನಡೆದಿದ್ದು, ಬಿಜೆಪಿಗೆ ಮೇಯರ್ ಪಟ್ಟ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅಂತಿಮವಾಗಿ ಕಾಂಗ್ರೆಸ್ ಮತ್ತೊಂದು ದಾಳ ಉರುಳಿಸಿ ಜೆಡಿಎಸ್‍ಗೆ ಬೆಂಬಲ ನೀಡುವ ಮೂಲಕ ಕಮಲ ಪಡೆಗೆ ಶಾಕ್ ನೀಡಿದೆ.

ಮುಂದುವರಿದ JDS-ಕೈ ಮೈತ್ರಿ : ಮೈಸೂರು ಮೇಯರ್ ಆಗಿ ರುಕ್ಮಿಣಿ ಮಾದೇಗೌಡ

ಒಟ್ಟು 73 ಮತಗಳಲ್ಲಿ 43 ಮತಗಳನ್ನು ಪಡೆಯುವ ಮೂಲಕ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನ ಕಾಂಗ್ರೆಸ್‍ನ ಅನ್ವರ್ ಬೇಗ್ ಅವರಿಗೆ ಒಲಿದಿದೆ.ಜೆಡಿಎಸ್‌ಗೆ ಅಧಿಕಾರ ಸಿಕ್ಕರೂ ಸಹ ಎಚ್‌ಡಿ ಕುಮಾರಸ್ವಾಮಿಗೆ ಭಾರೀ ಮುಖಭಂಗವಾಗಿದೆ.

ಕುಮಾರಸ್ವಾಮಿಗೆ ಬಿಗ್ ಶಾಕ್
ಸಿದ್ದರಾಮಯ್ಯನವರ ಮಾತಿನಿಂದ ಕೋಪಗೊಂಡಿದ್ದ ಕುಮಾರಸ್ವಾಮಿ, ಬಿಜೆಪಿ ಜೊತೆ ಕೈ ಜೋಡಿಸಲು ಕುಮಾರಸ್ವಾಮಿ ಮುಂದಾಗಿದ್ದರು. ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಎಂದು ಸಿದ್ದರಾಮಯ್ಯ ಅವು ಹೇಳಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಕುಮಾರಸ್ವಾಮಿ, ಮೈಸೂರು ಮೇಯರ್ ಪಾಲಿಕೆಯಲ್ಲಿ ನಮ್ಮದು ಏನು ಎನ್ನುವುದನ್ನು ತೋರಿಸುತ್ತೇವೆ. ಸಿದ್ದರಾಮಯ್ಯನವರಿಗೆ ಪಾಠ ಕಲಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದರು. 

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರ ಜೊತೆ ಮಾತುಕತೆ ಮಾಡಿದ್ದರು. ಬಳಿಕ ರಾತ್ರಿಯಿಡಿ ಸರಣಿ ಸಭೆ  ನಡೆಸಿ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಆದ್ರೆ, ಸಿದ್ದರಾಮಯ್ಯ ಹಾಗೂ ದೇವೇಗೌಡ್ರು ದಾಳಕ್ಕೆ ಎಚ್‌ಡಿಕೆ ಕಾರ್ಯತಂತ್ರಗಳು ಫೇಲ್ ಆಗಿವೆ.  ಜೆಡಿಎಸ್ ಪಾಲಿಕೆ ಸದಸ್ಯರೇ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೂಲಕ ಕುಮಾರಸ್ವಾಮಿಗೆ ಮುಖಭಂಗವಾಗಿದೆ.

ಬಿಜೆಪಿಗೆ ಮುಖಭಂಗ
ಇದೇ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಹರಸಾಹಸ ಪಟ್ಟಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅಖಾಡಕ್ಕಿಳಿದಿದ್ದು, ಇವರೊಂದಿಗೆ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಲ್‌.ನಾಗೇಂದ್ರ, ರಾಮ ದಾಸ್‌ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆ ನಡೆಸಿ ಮೈತ್ರಿ ಸಾಧಿಸಿದ್ದು, ಬಿಜೆಪಿ ಕನಸಿಗೆ ಎಳ್ಳು ನೀರು ಬಿಟ್ಟಿದೆ.

click me!