Karnataka Election 2023: ಕಾಂಗ್ರೆಸ್‌ನಿಂದ ಶೆಟ್ಟರ್‌ ಗೆಲ್ತಾರೆ ಎಂದ ಬಿಜೆಪಿ ಸಂಸದೆ ಅಂಗಡಿ..!

By Kannadaprabha NewsFirst Published May 11, 2023, 10:54 AM IST
Highlights

ನಾನು ಪಕ್ಷ ಬದಲಾವಣೆ ಮಾಡುವುದಿಲ್ಲ. ನಾನು ಬಿಜೆಪಿಯಲ್ಲೆ ಇರುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದ ಸಂಸದೆ ಮಂಗಲ ಅಂಗಡಿ 
 

ಬೆಳಗಾವಿ(ಮೇ.11): ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇರುವುದರಿಂದ ಸುಮಾರು 13 ರಿಂದ 14ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತವೆ ಎಂದು ಸಂಸದೆ ಮಂಗಲ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಕೇಂದ್ರದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಬ್ಬಳ್ಳಿ ಕೇಂದ್ರ ಮತಕ್ಷೇತ್ರದಲ್ಲಿ ತಮ್ಮ ಬೀಗರಾದ ಜಗದೀಶ ಶೆಟ್ಟರ ಅವರು ಸ್ಪರ್ಧಿಸಿದ್ದು, ಅಲ್ಲಿನ ವಾತಾವರಣ ಹೇಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಗದೀಶ್‌ ಶೆಟ್ಟರ ಪಕ್ಷ ಭೇದ ಮರೆತು ಕೆಲಸ ಮಾಡಿದ್ದರಿಂದ ಬೀಗರದು ಚೆನ್ನಾಗಿದೆ. ಚೆನ್ನಾಗಿ ನಡೀತಾ ಇದೆ. ಅವರು ಬರ್ತಾರೆ ಎಂದು ತಮ್ಮ ಬೀಗರಾದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ ಪರವಾಗಿ ಬ್ಯಾಟಿಂಗ್‌ ಮಾಡಿದರು.

ಸಿಡಿ ಬಿಡುಗಡೆ ಬೆದರಿಕೆ ಒಡ್ಡಿದ್ದ ಡಿಕೆಶಿ; ಅದೇನು ಬಿಡುತ್ತಿಯೋ ಬಿಡು ಮಗನೆ , ತಿರುಗೇಟು ನೀಡಿದ ಜಾರಕಿಹೊಳಿ

ಅಲ್ಲದೇ ಶೆಟ್ಟರ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಲಿಟಿಕ್ಸ್‌ನಲ್ಲಿ ಹಾಗೆ ಎಲ್ಲಾ ಆಗೋದು ಎಂದ ಅವರು, ಮೊದಲಿಂದಲೂ ಜಗದೀಶ್‌ ಶೆಟ್ಟರ ಅಲ್ಲಿ ಹೆಸರು ಮಾಡಿದ್ದಾರೆ ಎಂದರು.
ಬಿಜೆಪಿ ಸಂಸದರಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಪರವಾಗಿ ಸಪೋರ್ಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಅವರದು ಅಲ್ಲಿ, ನಮ್ಮದು ಇಲ್ಲಿ ಎಂದು ಸಮಜಾಯಿಷಿ ನೀಡಿದರು. ಮುಂದಿನ ಚುನಾವಣೆಯಲ್ಲಿ ತಾವು ಪಕ್ಷ ಬದಲಾವಣೆ ಮಾಡುತ್ತೀರಾ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಪಕ್ಷ ಬದಲಾವಣೆ ಮಾಡುವುದಿಲ್ಲ. ನಾನು ಬಿಜೆಪಿಯಲ್ಲೆ ಇರುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದರು.

click me!