
ಧಾರವಾಡ (ಏ.11): ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಇರುವಾಗ ಬಿಜೆಪಿ ಹೈಕಮಾಂಡ್ ನಾಯಕರು ಕರೆ ಮಾಡಿ ಈ ಬಾರಿ ನೀವು ಸ್ಪರ್ಧೆ ಮಾಡುವುದು ಬೇಡ, ಮತ್ತೊಬ್ಬರಿಗೆ ಟಿಕೆಟ್ ಕೊಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ನಾನು ಸಮ್ಮತಿಸದೇ ಇನ್ನೊಂದು ಬಾರಿ ಚರ್ಚೆ ಮಾಡಿ ಟಿಕೆಟ್ ಕೊಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರಿಷ್ಠರ ಕಡೆಯಿಂದ ನನಗೆ ಮಾಹಿತಿ ಬಂತು. ನೀವು ಹಿರಿಯರಿದ್ದೀರಿ ಯಿವಜನರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ರಾಜ್ಯದಲ್ಲಿ 30 ವರ್ಷದಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಸೇವೆಯನ್ನು ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ನಾನು ಶ್ರಮಿಸಿದ್ದೇನೆ. ಈಶ್ವರಪ್ಪ, ಯಡಿಯೂರಪ್ಪ, ಅನಂತಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾನು 6 ಬಾರಿ ಆರಿಸಿ ಬಂದಿದ್ದೇನೆ. ಪ್ರತಿಬಾರಿ 25 ಸಾವಿರಕ್ಕೂ ಅಧಿಕ ಮತಗಳಿಂದ ನಾನು ಗೆದ್ದು ಬಂದಿದ್ದೇನೆ. ಆದರೆ, ನಾನು ಯಾಕೆ ಸ್ಪರ್ಧೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದೇನೆ. ಇನ್ನು ಹುಬ್ಬಳ್ಳಿ ಕೇಂದ್ರ ಭಾಗದಲ್ಲಿ ಸಮೀಕ್ಷೆ ಮಾಡಿದಾಗ ಗೆಲ್ಲುವಂತಹ ವ್ಯಕ್ತಿ ಎಂದು ವರದಿ ಬಂದಿದೆ.
ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೂ ಟಿಕೆಟ್ ಮಿಸ್
2-3 ತಿಂಗಳ ಮುಂಚೆಯೇ ಹೇಳಬೇಕಿತ್ತು: ಹೈಕಮಾಂಡ್ ಮಾಜಿ ಸಿಎಂ ಹಾಗು ಹಿರಿಯ ನಾಯಕರಿಗೆ ಗೌರವ ನೀಡಬೇಕು. ವರಿಷ್ಠರ ನಿರ್ಧಾರದಿಂದ ನನಗೆ ಬೇಸರವಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ನನ್ನ ಸಮ್ಮತಿ ಇಲ್ಲ. ಮತ್ತೊಮ್ಮೆ ಚರ್ಚೆ ಮಾಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಚುನಾವಣೆಗೆ ನಿಲ್ಲಬೇಡ ಎಂದು 2-3 ತಿಂಗಳ ಮುಂಚೆಯೇ ಹೇಳಬೇಕಿತ್ತು. ಬೇರೆಯವರಿಗೆ ಟಿಕೆಟ್ ನೀಡುತ್ತೇನೆ ಎಂದು ಹೇಳಬೇಕಿತ್ತು. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇ ನನಗೆ ಮೈನಸ್ ಆಗಿದೆ. ಸರ್ವೇಯನ್ನೂ ನನ್ನ ಪರವಾಗಿಯೇ ಜನಾಭಿಪ್ರಾಯ ಬಂದಿದೆ.
ಕಪ್ಪು ಚುಕ್ಕೆ ಇಲ್ಲದ ನನಗೆ ಟಿಕೆಟ್ ಕೊಡದಿರಲು ಕಾರಣವೇನು? : ನನ್ನ ರಾಜಕಾರಣದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ. ಬಿಜೆಪಿ ಪಕ್ಷಕ್ಕೆ ನಿಷ್ಠನಾಗಿ, ನಾಯಲ್ ಆಗಿ ಕೆಲಸ ಮಾಡಿದ್ದೇನೆ. ಹಾಗಿದ್ದರೂ ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ನಾಮಪತ್ರ ಸಲ್ಲಿಕೆಗೆ 2-3 ದಿನಗಳು ಇರುವಾಗ ಹೇಳಿದ್ದು ಸರಿಯಲ್ಲ. ನನಗೆ ನನ್ನ ಕ್ಷೇತ್ರದ ಜನರ ಆಶೀರ್ವಾದವಿದೆ. ಹೈಕಮಾಂಡ್ನ ಅಂತಿಮ ನಿರ್ಧಾರ ತಿಳಿದು ಮುಂದಿನ ತೀರ್ಮಾನ ಮಾಡುತ್ತೇನೆ. 7ನೇ ಬಾರಿ ಸ್ಪರ್ಧೆ ಮಾಡ್ತೇನೆ,ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೈಕಮಾಂಡ್ಗೆ ಹೇಳಿದ್ದೇನೆ ಎಂದು ತಿಳಿಸಿದರು.
ಪುತ್ರನಿಗೆ ಟಿಕೆಟ್ ಕೊಡುವ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು, ರಾಜಕೀಯ ನಿವೃತ್ತಿ ಬೆನ್ನಲ್ಲೇ ಈಶ್ವರಪ್ಪ ಹೇಳಿಕೆ
ಕೆ.ಎಸ್. ಈಶ್ವರಪ್ಪ ರಾಜನೀಯ ನಿವೃತ್ತಿ: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಮಾಡುವುದಾಗಿ ಸೂಚನೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲ ರಾಜಕೀಯ ನಾಯಕರಿಗೂ ಕೂಡ ಟಿಕೆಟ್ ನೀಡುವುದಿಲ್ಲ ಎಂಬ ಸುಳಿವನ್ನು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಗುವುದಿಲ್ಲ ಎಂಬ ನಿರೀಕ್ಷೆಯಿಂದ ಬಿಜೆಪಿಯ ಟಿಕೆಟ್ ಘೋಷಣೆಗೂ ಮುನ್ನವೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ಸ್ವತಃ ನಿವೃತ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.