
ಹೈದರಾಬಾದ್ (ನ.26): ತಮ್ಮ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ರದ್ದುಗೊಳಿಸುವಂತೆ ಶಿಫಾರಸು ಮಾಡಲು ಕರ್ನಾಟಕ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಮೌನ ಮುರಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಈ ನಿರ್ಣಯ ತೆಗೆದುಕೊಂಡಿರುವ ಸಂಪುಟ ಸಭೆಗೆ ನಾನು ಹೋಗಿರಲಿಲ್ಲ. ಅದು ಸರ್ಕಾರ ಕೈಗೊಂಡ ನಿರ್ಧಾರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಆಂಗ್ಲ ಟೀವಿ ಚಾನೆಲ್ ಒಂದರ ಜತೆ ಮಾತನಾಡಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಬಯಸುವುದಿಲ್ಲ. ಅಂದು ನಾನು ಸಚಿವ ಸಂಪುಟ ಸಭೆಗೆ ಹಾಜರಾಗಿಲ್ಲ. ಅದು ಸರ್ಕಾರ ತೆಗೆದುಕೊಂಡ ನಿರ್ಧಾರ. ನನ್ನ ವಿರುದ್ಧದ ತನಿಖೆಗೆ ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ನನ್ನ ವಿರುದ್ಧ ತನಿಖೆಗೆ ಅಂದಿನ ಅಡ್ವೋಕೇಟ್ ಜನರಲ್ ಅನುಮತಿ ನೀಡಿದ್ದು ಸರಿಯಲ್ಲ. ಈಗಿನ ನಿರ್ಧಾರದ ಬಗ್ಗೆ ನಾನೇನೂ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ಇದು ಕಾಂಗ್ರೆಸ್ ಸರ್ಕಾರದ ಪಕ್ಷಪಾತಿ ನಿರ್ಧಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಏನೂ ತಪ್ಪು ಮಾಡಿಲ್ಲ. ಅಂದಿನ ಸರ್ಕಾರ ಕೈಗೊಂಡಿದ್ದು ರಾಜಕೀಯ ನಿರ್ಧಾರ. ಇಂದಿನ ಸರ್ಕಾರ ಕೈಗೊಂಡಿದ್ದು ಕಾನೂನಾತ್ಮಕ ನಿರ್ಧಾರ’ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ‘ಜಾತಿಗಣತಿ ಮೂಲವರದಿ ನಾಪತ್ತೆಯಾಗಿದ್ದು, ರಾಜಕೀಯ ತಂತ್ರವೇ, ವರದಿಯನ್ನು ಮುಚ್ಚಿಡಲಾಗುತ್ತಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಘೋಷಿಸಿರುವ ಜಾತಿಗಣತಿ ಅಥವಾ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಾವು ಬದ್ಧರಾಗಿದ್ದೇವೆ. ಅದು ವ್ಯವಸ್ಥಿತವಾಗಿ ನಡೆಯಬೇಕಿದೆ. ಈ ಬಗ್ಗೆ ನಾನು ಹೆಚ್ಚೇನೂ ಹೇಳಲ್ಲ’ ಎಂದರು.
ತೆಲಂಗಾಣದಲ್ಲಿ ಸೋನಿಯಾ ಜನ್ಮದಿನಕ್ಕೆ ‘ಗ್ಯಾರಂಟಿ ಗಿಫ್ಟ್’: ಡಿ.ಕೆ.ಶಿವಕುಮಾರ್
ಸಿಬಿಐ ತನಿಖೆಗೆ ವಹಿಸುವ ವಿಷಯ ಸಭಾಧ್ಯಕ್ಷರ ವ್ಯಾಪ್ತಿಗೆ ಬರುವುದಿಲ್ಲ. ಡಿಕೆಶಿ ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಏನೂ ಇಲ್ಲ. ಈ ವಿಚಾರದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಪ್ರಸ್ತಾಪಿಸಿರುವುದು ದುರ್ದೈವ.
- ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.