ಹೊಸಕೋಟೆಯಲ್ಲ ಇದು ಶ್ರೀಮಂತರ ಕೋಟೆ: 1,600 ಕೋಟಿ ಒಡೆಯ ಎಂಟಿಬಿ ನಾಗರಾಜ್, ಶತಕೋಟಿ ವೀರ ಶರತ್ ಬಚ್ಚೇಗೌಡ

By Sathish Kumar KHFirst Published Apr 17, 2023, 8:09 PM IST
Highlights

ರಾಜ್ಯ ವಿಧಾನಸಭಾ ಚುನಾವಣೆಗೆ ಏ.13 ರಿಂದ ಈವರೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳ ಪೈಕಿ ಶ್ರೀಮಂತರಿರುವ ವಿಧಾನಸಭಾ ಕ್ಷೇತ್ರವೆಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರವಾಗಿದೆ.

ಬೆಂಗಳೂರು ಗ್ರಾಮಾಂತರ (ಏ.17): ರಾಜ್ಯ ವಿಧಾನಸಭಾ ಚುನಾವಣೆಗೆ ಏ.13 ರಿಂದ ಈವರೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತರಿರುವ ವಿಧಾನಸಭಾ ಕ್ಷೇತ್ರವೆಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಅವರದ್ದು 1,607 ಕೋಟಿ ರೂ. ಆಸ್ತಿ ಮೌಲ್ಯವಾದರೆ, ಇವರ ಎದುರಾಳಿ ಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಶರತ್‌ ಬಚ್ಚೇಗೌಡ 107 ಕೋಟಿ ರೂ. ಮೌಲ್ಯದ ಆಸ್ತಿವಂತರಾಗಿದ್ದಾರೆ.

ರಾಜ್ಯದಲ್ಲಿ 2019ರಲ್ಲಿ ನಡೆದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಎಂಟಿಬಿ ನಾಗರಾಜ್‌ ಅವರು 1,015 ಕೋಟಿ ರೂ. ಆಸ್ತಿಯ ಒಡೆತನವನ್ನು ಘೋಷಣೆ ಮಾಡಿಕೊಂಡಿದ್ದರು. ಆದರೆ, ಈ ವರ್ಷ 2023ರ ವೇಳೆ ಉಮಾದುವಾರಿಕೆ ಸಲ್ಲಿಕೆ ವೇಳೆ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಂಡಿದ್ದು, ಈಗ ಆಸ್ತಿ ಮೌಲ್ಯ 1,607 ಕೋಟಿ ರೂ.ಗೆ ಏರಿಕೆಯಾಗಿದೆ. ಇಂದು ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಎಮ್ ಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆ ಮಾಡಿದರು. ನಾಲ್ಕು ವರ್ಷದಲ್ಲಿ ಎಂಟಿಬಿ ಆಸ್ತಿ ಮೌಲ್ಯ 600 ಕೋಟಿ ರೂ. ಹೆಚ್ಚಳವಾಗಿದೆ.

ಡಿ.ಕೆ. ರವಿ ಪತ್ನಿ ಕುಸಮಾ ಆಸ್ತಿ ಮೌಲ್ಯ 2 ಕೋಟಿ: ಒಂದು ಕಿಲೋ ಬಂಗಾರ

240 ಕೆಜಿ ಬೆಳ್ಳಿ, 4 ಕೆಜಿ ಬಂಗಾರ: ಇನ್ನು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ 1607 ಕೋಟಿ ಮೊತ್ತದ ಆಸ್ತಿ‌ ವಿವರ ಸಲ್ಲಿಸಿದ್ದಾರೆ. ಎಂಟಿಬಿ ನಾಗರಾಜ್ ಅವರ ಹೆಸರಿನಲ್ಲಿ 1,170 ಕೋಟಿ ರೂ. ಹಾಗೂ ಅವರ ಪತ್ನಿ ಶಾಂತಕುಮಾರಿ ಹೆಸರಿನಲ್ಲಿರುವ 437 ಕೋಟಿ ರೂ. ಮೌಲ್ಯದ ಆಸ್ತಿ‌ ವಿವರ ನೀಡಿದ್ದಾರೆ. ಒಟ್ಟು 535 ಕೋಟಿ ಚರಾಸ್ತಿಯಾದ ಠೇವಣಿ, ನಗದು ಚಿನ್ನ ಕಾರಿಗಳ ವಿವರ ಸಲ್ಲಿಸಿದ್ದಾರೆ ಲ್ಯಾಂಡ್ ರೋವರ್, ಕ್ರಿಸ್ಟಾ, ಪೋರ್ಶೆ, ಐ10, ಬೊಲೆರೋ ಸೇರಿ 5 ಕಾರುಗಳ ವಿವರ ನೀಡಿದ್ದಾರೆ. ಎಂಟಿಬಿ ನಾಗರಾಜ್ ಅವರ ಬಳಿ 996 ಗ್ರಾಂ ಚಿನ್ನ, 214 ಕೆಜಿ ಬೆಳ್ಳಿ ಇದೆ. ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ 2 ಕೆಜಿ 879 ಗ್ರಾಂ ಚಿನ್ನ ಹಾಗೂ 26 ಕೆಜಿ ಬೆಳ್ಳಿ ಇದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದ ಎಂಟಿಬಿ ನಾಗರಾಜ್‌, ರಾಜಕೀಯ ಬೆಳವಣಿಗೆಗಳ ನಡುವೆ, ಕಾಂಗ್ರೆಸ್‌ಗೆ ರಾಜಿನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ಸಾಥ್‌ ನೀಡಿದ್ದರು. ಇನ್ನು ಉಪ ಚುನಾವಣೆಯಲ್ಲಿ ಶರತ್‌ ಬಚ್ಚೇಗೌಡ ಅವರ ಮುಂದೆ ಸೋತು, ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಎಂಟಿಬಿ ನಾಗರಾಜ್‌ ಈಗ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣೆಗೆಯಲ್ಲಿ ಬಂದು ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶತಕೋಟಿ ಒಡೆಯ ಶರತ್‌ ಬಚ್ಚೇಗೌಡ: ಸಹಸ್ರ ಕೋಟಿ ಒಡೆಯನಾಗಿದ್ದ ಎಂಟಿಬಿ ನಾಗರಾಜ್‌ ವಿರುದ್ಧ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಯುವಕ ಶರತ್‌ ಬಚ್ಚೇಗೌಡ ಗೆಲುವು ಸಾಧಿಸಿ ವಿಧಾನಸಭೆಗೆ ಆಗಮಿಸಿದ್ದರು. ಈಗಲೂ ಕೂಡ ಕಾಂಗ್ರೆಸ್‌ನಿಂದ ಎಂಟಿಬಿ ನಾಗರಾಜ್‌ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ ಅವರು, ಈ ವೇಳೆ 107 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಇನ್ನು ಶರತ್‌ ಬಚ್ಚೇಗೌಡ ಅವರು 63 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ,  44 ಕೋಟಿ ರೂ. ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. 

Breaking: ಬಿಜೆಪಿ 3ನೇ ಪಟ್ಟಿ ಬಿಡುಗಡೆ: ಹಿರಿಯ ತಲೆಗಳಿಗೆ ಶಾಕ್‌

ಶರತ್‌ ಪತ್ನಿ ಪ್ರತಿಭಾ ಬಳಿ 17 ಕೋಟಿ ರೂ. ಆಸ್ತಿ:  ಇವರ ಪತ್ನಿ ಪ್ರತಿಭಾ ಹೆಸರಲ್ಲಿ 13 ಕೋಟಿ ಮೌಲ್ಯದ ಚರಾಸ್ತಿ, 3 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ 1.5 ಕೋಟಿ ರೂ. ಸಾಲವನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಶರತ್ ಹೆಸರಲ್ಲಿ ಫಾರ್ಚುನರ್, ಇನ್ನೋವಾ ಕ್ರಿಸ್ಟಾ ಕಾರುಗಳಿದ್ದರೆ ಪತ್ನಿ ಪ್ರತಿಭಾ ಹೆಸರಲ್ಲಿ ಮರ್ಸಿಡಿಸ್ ಬೆಂಜ್ ಕಾರು ರಿಜಿಸ್ಟರ್‌ ಆಗಿದೆ. ಶರತ್ ಬಚ್ಚೇಗೌಡ ಅವರ ಬಳಿ 550 ಗ್ರಾಂ ಚಿನ್ನ ಇದ್ದರೆ, ಪತ್ನಿ ಪ್ರತಿಭಾ ಬಳಿ 950 ಗ್ರಾಂ ಚಿನ್ನವಿದೆ.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!