ಯುವ ನಿಧಿ ಯೋಜನೆ ಕೈಬಿಟ್ರಾ?: ಬಜೆಟ್‌ನಲ್ಲಿ ಅನುದಾನದ ನೀಡದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಸರ್ಕಾರ ಮೌನ!

Kannadaprabha News   | Kannada Prabha
Published : Mar 17, 2026, 09:37 AM IST
Is Yuva Nidhi Scheme Dropped MLA Dheeraj Muniraju Questions Karnataka Govt

ಸಾರಾಂಶ

ಯುವನಿಧಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡದ ಬಗ್ಗೆ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನಿಸಿದ್ದು, ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಐಟಿ ಕ್ಷೇತ್ರಕ್ಕೆ ಕಡಿಮೆ ಅನುದಾನ, ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಅವರು ಸರ್ಕಾರದ ಗಮನ ಸೆಳೆದರು.

ವಿಧಾನಸಭೆ: ಯುವನಿಧಿ ಗ್ಯಾರಂಟಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ, ಹಾಗಾದರೆ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆಯಾ ಎಂದು ಬಿಜೆಪಿ ಸದಸ್ಯ ಧೀರಜ್‌ ಮುನಿರಾಜು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಸರ್ಕಾರ 5ನೇ ಗ್ಯಾರಂಟಿಯಾಗಿ ಜಾರಿಗೊಳಿಸಿತ್ತು. ಕಳೆದ ಮೂರು ವರ್ಷದಲ್ಲಿ 3.08 ಲಕ್ಷ ಯುವಕರಿಗೆ ಈ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಿರುವ ಮುಖ್ಯಮಂತ್ರಿ ಅವರು, ಈ ಯೋಜನೆ ಮುಂದುವರೆಯುತ್ತಾ, ಇಲ್ವಾ ಎಂದು ತಿಳಿಸಿಲ್ಲ ಎಂದು ಹೇಳಿದರು.

ಅಲ್ಲದೆ, ಈ ಯೋಜನೆಗೆ ಅನುದಾನವನ್ನೂ ನೀಡಿಲ್ಲ. ಹಾಗಾಗಿ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತಾ ಎಂಬ ಅನುಮಾನ ಸಹಜವಾಗಿ ಬರುತ್ತದೆ. ಇದಕ್ಕೆ ಉತ್ತರ ನೀಡಬೇಕು. ಅದೇ ರೀತಿ ನಿರುದ್ಯೋಗ ಭತ್ಯೆ ಪಡೆದ ಎಷ್ಟು ಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದ ಬೊಕ್ಕಸಕ್ಕೆ 22 ಸಾವಿರ ಕೋಟಿ ರು. ಆದಾಯ ನೀಡುವ ಐಟಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮುಂದಿನ ಐದು ವರ್ಷಕ್ಕೆ ಒಟ್ಟಾರೆ 967 ಕೋಟಿ ರು. ಅನುದಾನ ಮಿಸಲಿಡಲಾಗಿದೆ. ಈ ಹಣದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಹೇಗೆ ಅಗತ್ಯ ಸಹಕಾರ ದೊರೆಯಲು ಸಾಧ್ಯ? ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮಿರಿದ್ದು, ಯಾವ ಜಿಲ್ಲೆ, ತಾಲೂಕು, ಗ್ರಾಪಂ ಕಚೇರಿಗೆ ಹೋದರೂ ಲಂಚ ನೀಡದೆ ಕೆಲಸ ಆಗಲ್ಲ. ಜನರು ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ತಡೆಗೆ ಮುಖ್ಯಮಂತ್ರಿ ಅವರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಾಲ್ಫ್‌ ಆಡ್ತಾರೆ, ಡ್ಯೂಟಿ ಮಾಡೋಕೆ ಟೈಂ ಇಲ್ಲ; 9 ತಿಂಗಳು ಕಚೇರಿಗೆ ಬಾರದ ಐಎಎಸ್‌, ಆರ್ ಅಶೋಕ್ ಗರಂ, ಯಾರು ಆ ಅಧಿಕಾರಿ?
ಸಿದ್ದರಾಮಯ್ಯ ಅವರದ್ದು ಖಾಲಿ ಚೊಂಬು, ಸಾಲದ ಮೇಲೆ ರೂಪಿಸಿದಬಜೆಟ್‌: ಸಿಟಿ ರವಿ