ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

By Kannadaprabha NewsFirst Published Oct 17, 2021, 3:48 PM IST
Highlights

*  ಹಾನಗಲ್‌ ಚುನಾವಣಾ ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ
*  ಸರ್ಕಾರ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ವಿರುದ್ಧ ವಾಗ್ದಾಳಿ
*  ಎಲ್ಲರ ಹಿತ ಕಾಪಾಡುವುದು ಕಾಂಗ್ರೆಸ್‌ ಸಿದ್ಧಾಂತ
 

ಹಾವೇರಿ(ಅ.17):  ಮೋದಿ ಪ್ರಧಾನಿಯಾದ(Narendra Modi) ಮೇಲೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ(India) 101ನೇ ಸ್ಥಾನಕ್ಕೆ ಕುಸಿದಿದೆ. ಬಡವರ(Poor) ಸಂಖ್ಯೆ ಹೆಚ್ಚಿದೆ. ಅಚ್ಚೇ ದಿನ್‌(Achche Din) ಆಯೇಗಾ ಎಂದರೆ ಇದೇನಾ ಎಂದು ಬಿಜೆಪಿ(BJP) ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. 

ಹಾನಗಲ್‌(Hanagal) ಉಪಚುನಾವಣೆಯ(Byelection) ಕಾಂಗ್ರೆಸ್‌(Congress) ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮಲಗುಂದ ಗ್ರಾಮದಲ್ಲಿ ಶನಿವಾರ ಪ್ರಚಾರ(Campaign) ನಡೆಸಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಬಡವರ ಕಲ್ಯಾಣಕ್ಕಾಗಿ ಜಾರಿಗೆ ತಂದ ಅನೇಕ ಯೋಜನೆಗಳನ್ನು ಬಿಜೆಪಿಯವರು ನಿಲ್ಲಿಸಿದ್ದಾರೆ. 7 ಕೆಜಿ ಅಕ್ಕಿ(Rice) ನೀಡುತ್ತಿದ್ದುದ್ದನ್ನು ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿಯಾದ ಮೇಲೆ 5 ಕೆಜಿಗೆ ಇಳಿಸಿದರು.

ಬಸವರಾಜ ಬೊಮ್ಮಾಯಿ(Basavaraj Bommai) ಕೂಡ ಇದನ್ನೇ ಮುಂದುವರಿಸಿದ್ದಾರೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಬಡವರ ಸಂಖ್ಯೆ ಹೆಚ್ಚಿದೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಬಿಜೆಪಿಯವರಿಗೆ ಭಯ. ಈ ಉಪಚುನಾವಣೆಯಲ್ಲಿ ನಾವು ಗೆದ್ದರೂ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಜನರನ್ನು ಕಷ್ಟಕ್ಕೆ ನೂಕಿದ ಬಿಜೆಪಿಗೆ ಮತದಾರರು(Voters) ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ:

ಕೊರೋನಾ(Coronavirus) ಸಂದರ್ಭದಲ್ಲಿ ಸರ್ಕಾರ(Government) ಮಾಡಬೇಕಾದ ಕೆಲಸವನ್ನು ಶ್ರೀನಿವಾಸ ಮಾನೆ ಮಾಡಿದ್ದಾರೆ. ಸೋತರೂ ಮೂರು ವರ್ಷಗಳ ಕಾಲ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಇತ್ತ ಕಡೆ ಮುಖ ಹಾಕಿರಲಿಲ್ಲ. ಸಮೀಪದ ಸಂಗೂರು ಸಕ್ಕರೆ ಕಾರ್ಖಾನೆಗೆ(Sugar Factory) ಸಿ.ಎಂ. ಉದಾಸಿ(CM Udasi) ಅಧ್ಯಕ್ಷರಾಗಿದ್ದಾಗ ಶಿವರಾಜ ಸಜ್ಜನರ ಉಪಾಧ್ಯಕ್ಷರಾಗಿದ್ದರು. ಇಬ್ಬರೂ ಸೇರಿ ಕಾರ್ಖಾನೆ ನುಂಗಿ ನೀರು ಕುಡಿದಿದ್ದಾರೆ. ಖಾಲಿ ಚೀಲವನ್ನೂ ಬಿಡದೇ ಮಾರಿ ತಿಂದರು. ಈಗ ಗೌರಾಪುರ ಗುಡ್ಡವನ್ನು ತಿನ್ನುತ್ತಿದ್ದಾರೆ. ಈಗ ಸಂಗೂರು ಕಾರ್ಖಾನೆಯನ್ನು ಗುತ್ತಿಗೆ ನೀಡಿದ್ದಾರೆ. ಕಾರ್ಖಾನೆ ಹಾಳಾಗಲು ಕಾರಣರಾದ ಸಜ್ಜನರ ಅವರಿಗೆ ಜನರು ಖಾಲಿ ಚೀಲ ಕೊಟ್ಟು ಕಳುಹಿಸಬೇಕು. ತಿಂದಿದ್ದನ್ನು ಕಕ್ಕಿಸಬೇಕು ಎಂದು ಹೇಳಿದರು.

2018ರ ಚುನಾವಣೆಯಲ್ಲಿ(Election) ಯಾವ ಪಕ್ಷಕ್ಕೂ ಬಹುಮತ ಬಾರದೇ ಇರುವುದರಿಂದ ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡಬಾರದು ಎಂಬ ಕಾರಣಕ್ಕೆ ಜೆಡಿಎಸ್‌ಗೆ(JDS) ನಾವು ಬೆಂಬಲ ನೀಡಿದೆವು. ಆದರೆ, ಆ ಪುಣ್ಯಾತ್ಮ ಅಧಿಕಾರ ಉಳಿಸಿಕೊಳ್ಳಲಿಲ್ಲ. ಆಗ ಯಡಿಯೂರಪ್ಪ ನಮ್ಮವರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಯಾದರು. ಈಗ ಅವರೂ ಮುಖ್ಯಮಂತ್ರಿಯಾಗಿ ಉಳಿದಿಲ್ಲ. ಬೊಮ್ಮಾಯಿ ಮತ್ತು ಬಿ.ಎಲ್‌. ಸಂತೋಷ(BL Santosh) ಹೋಗಿ ಗೋಗರೆದದ್ದರಿಂದ ಯಡಿಯೂರಪ್ಪ ಇಲ್ಲಿಗೆ ಪ್ರಚಾರಕ್ಕೆ ಬರಬಹುದು. ಆದರೆ, ಜನರು ಬಿಜೆಪಿ ಸರ್ಕಾರದ ದುರಾಡಳಿತವನ್ನು ನೋಡಿ ಬೇಸತ್ತಿದ್ದಾರೆ. ಬಡವರ ಪರವಾಗಿಲ್ಲದ, ಅಭಿವೃದ್ಧಿಯಿಲ್ಲದ ಬಿಜೆಪಿಯನ್ನು ಸೋಲಿಸಬೇಕು. ಇಲ್ಲಿಯ ಜನರ ಕಷ್ಟಕ್ಕೆ ಸ್ಪಂದಿಸಿದ ಶ್ರೀನಿವಾಸ ಮಾನೆ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಲೂಟಿಕೋರ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ನಿರ್ಣಯ: ಸತೀಶ್‌ ಜಾರಕಿಹೊಳಿ

ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಸೋತರೂ ಇಲ್ಲಿಯೆ ಇರುತ್ತೇನೆ ಎಂದು ಹೇಳಿದ್ದೆ. ಅದರಂತೆ ಕಳೆದ ಮೂರೂವರೆ ವರ್ಷಗಳಿಂದ ಪ್ರಾಮಾಣಿಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಮತ್ತೆ ಜನಪರ ಸರ್ಕಾರ ಅಧಿಕಾರಕ್ಕೆ ಬರಲು ಮತ್ತು ತಪ್ಪು ಮಾಡಿದವರಿಗೆ ಅವರ ಸ್ಥಾನ ಏನೆಂದು ತೋರಿಸಲು ಮತದಾರರು ಬಿಜೆಪಿಗೆ ಪಾಠ ಕಲಿಸಬೇಕು. ಕ್ಷೇತ್ರದ ಜನರ ಸೇವೆಗಾಗಿ ನನಗೆ ಮತ್ತಷ್ಟುಶಕ್ತಿ ನೀಡಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಮಾತನಾಡಿ, ಎಲ್ಲರ ಹಿತ ಕಾಪಾಡುವುದು ಕಾಂಗ್ರೆಸ್‌ ಸಿದ್ಧಾಂತ. ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಬಲಿದಾನ ಮಾಡಿದೆ. ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ. ಪೆಟ್ರೋಲ್‌(Petrol), ಡೀಸೆಲ್‌(Diesel), ಅಡುಗೆ ಅನಿಲ(LPG), ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದಕ್ಕೆ ಬಿಜೆಪಿಗೆ ಮತ ನೀಡಬೇಕಾ ಎಂದು ಜನರು ಕೇಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ಆಕ್ರೋಶಗೊಂಡಿದ್ದಾರೆ. ಮತ ಕೇಳುವ ನೈತಿಕ ಹಕ್ಕನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಯು.ಟಿ. ಖಾದರ್‌, ಮನೋಹರ ತಹಶೀಲ್ದಾರ್‌ ಮಾತನಾಡಿದರು. ಪ್ರಮುಖರಾದ ಸಂತೋಷ ಲಾಡ್‌, ರಿಜ್ವಾನ್‌ ಅರ್ಷದ್‌, ಐವನ್‌ ಡಿಸೋಜಾ, ನಾರಾಯಣಸ್ವಾಮಿ, ಬೈರತಿ ಸುರೇಶ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಪ್ರಕಾಶಗೌಡ ಪಾಟೀಲ ಇತರರು ಇದ್ದರು.
 

click me!