
ಪಿರಿಯಾಪಟ್ಟಣ/ಮೈಸೂರು (ನ.15): ‘ನಾನು ಮುಖ್ಯಮಂತ್ರಿಯಾಗಬೇಕಿದ್ದರೆ ಕಾಂಗ್ರೆಸ್ಗೆ ವೋಟ್ ಹಾಕಿ. ನೀವು ಮತಹಾಕದೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತದಾರರಿಗೆ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಇಂಗಿತ ಹೊರಹಾಕಿದ್ದಾರೆ.
ತಾಲೂಕಿನ ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಸೋಮವಾರ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೋದಬಂದ ಕಡೆಯೆಲ್ಲ ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನುತ್ತೀರಿ. ಆದರೆ ನೀವೆಲ್ಲ ವೋಟ್ ಕೊಡದೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರಲು 113 ಕಾಂಗ್ರೆಸ್ ಶಾಸಕರು ಬೇಕು. ಎಲ್ಲರೂ ಹಿಡಿದು, ಕಾಲೆಳೆದು ನೀವೇ ಮುಖ್ಯಮಂತ್ರಿ ಆಗಬೇಕು ಅಂದ್ರೆ ಸಾಧ್ಯನಾ’ ಎಂದು ಬೇಸರ ತೋಡಿಕೊಂಡರು.
Karnataka Politics: ಸಿದ್ದು ವಿರುದ್ಧ ಅಚ್ಚರಿಯ ಅಭ್ಯರ್ಥಿ ಕಣಕ್ಕೆ: ಸಚಿವ ಶ್ರೀರಾಮುಲು
ರಾಜ್ಯದಲ್ಲಿ ಹಿಂದುಳಿದ, ಬಡವರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ರಕ್ಷಣೆಯಾಗಬೇಕಾದರೆ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಿರಾಣಿ, ಬೊಮ್ಮಾಯಿ ಮುಖ್ಯಮಂತ್ರಿ ಆಗ್ತಾರೆ. ನಾನು ಬಂದಾಗ ಜೈ ಅಂತ ಹೇಳಿ ಚುನಾವಣೆ ಸಂದರ್ಭ ಮಹದೇವನಿಗೆ (ಪಿರಿಯಾಪಟ್ಟಣದ ಜೆಡಿಎಸ್ ಹಾಲಿ ಶಾಸಕರು) ವೋಟ್ ಹಾಕ್ತೀರಾ? ಈ ಬಾರಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ, ನಮ್ಮ ಅಭ್ಯರ್ಥಿ ಕೆ.ವೆಂಕಟೇಶ್ ಗೆಲ್ಲಿಸಿ. ನಿಮ್ಮ ಪ್ರೀತಿ ಮತವಾಗಿ ಪರಿವರ್ತನೆಯಾಗಲಿ ಎಂದರು.
ಎಲ್ಲಿ ಬೇಕಾದರೂ ಸ್ಪರ್ಧಿಸುವವನೇ ಲೀಡರ್: ಇದಕ್ಕೂ ಮುನ್ನ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಕ್ಷೇತ್ರ ಹುಡುಕುತ್ತಿರುವ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ವ್ಯಂಗ್ಯಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನೇ ನಿಜವಾದ ಲೀಡರ್. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಕೋಲಾರದವರು ಬಯಸಿದರೆ ಕೋಲಾರ, ವರುಣದವರು ಬಯಸಿದರೆ ವರುಣ. ಎಲ್ಲಾ ಕ್ಷೇತ್ರದ ಜನರೂ ನನಗೆ ಪ್ರೀತಿ ತೋರಿಸುತ್ತಿದ್ದಾರೆ. ಅಂತಿಮವಾಗಿ ನಾನು ಎಲ್ಲಿಂದ ಸ್ಪರ್ಧಿಸಬೇಕೆಂಬುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ತಿಳಿಸಿದರು.
ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಸಿದ್ದು ಬೇರೆ ಕಡೆ ಸ್ಪರ್ಧೆ: ಯಡಿಯೂರಪ್ಪ
ಇದೇ ವೇಳೆ ಸಿದ್ದರಾಮಯ್ಯಗೆ ರಾಜಕೀಯವಾಗಿ ಪುನರ್ ಜನ್ಮ ಕೊಟ್ಟೆಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾನು 8 ಚುನಾವಣೆ ಗೆಲ್ಲುವಾಗ ಅವರು ಎಲ್ಲಿದ್ರು? ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದೇ 1996ರಲ್ಲಿ. ನಾನು ಅಷ್ಟೊತ್ತಿಗೆ ಚುನಾವಣೆ ಗೆದ್ದಿರಲಿಲ್ವಾ ಎಂದು ಪ್ರಶ್ನಿಸಿದರು. ‘ನಾನು ಬಾದಾಮಿಗೆ ಹೋಗದ ಕಾರಣ ಸಿದ್ದರಾಮಯ್ಯ ಗೆದ್ದರು’ ಎಂಬ ಅವರ ಮಾತಿಗೆ ಅರ್ಥ ಇಲ್ಲ. ಈ ರೀತಿಯ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.