ಶಿಗ್ಗಾಂವಿ ಬಿಡಲ್ಲ, ಕ್ಷೇತ್ರ ಬಿಡುತ್ತೇನೆಂದು ಯಾವನ್ರಿ ಹೇಳಿದ್ದು: ಸಿಎಂ ಬೊಮ್ಮಾಯಿ

By Kannadaprabha NewsFirst Published Mar 21, 2023, 4:00 AM IST
Highlights

ನಾನು ಯಾವುದೇ ಕಾರಣಕ್ಕೂ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಹೋಗುವುದಿಲ್ಲ, ನಾನು ಕ್ಷೇತ್ರ ಬಿಡುತ್ತೇನೆ ಅಂತ ಯಾವನ್ರಿ ಹೇಳಿದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಪ್ರಶ್ನೆ ಹಾಕಿದ್ದಾರೆ. 

ಹಾವೇರಿ (ಮಾ.21): ನಾನು ಯಾವುದೇ ಕಾರಣಕ್ಕೂ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಹೋಗುವುದಿಲ್ಲ, ನಾನು ಕ್ಷೇತ್ರ ಬಿಡುತ್ತೇನೆ ಅಂತ ಯಾರ್ ಹೇಳಿದ್ರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಪ್ರಶ್ನೆ ಹಾಕಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಬೇರೆ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

ಶಿಗ್ಗಾಂವಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸೋಮವಾರ ಆಗಮಿಸಿದ್ದ ಅವರನ್ನು ಮಾಧ್ಯಮವರು ಈ ಕುರಿತು ಪ್ರಶ್ನಿಸಿದಾಗ, ಆಗ ನಾನು ಕ್ಷೇತ್ರ ಬಿಡುತ್ತೇನೆ ಎಂದು ಯಾರು ನಿಮಗೆ ಹೇಳಿದ್ದು ಎಂದು ಮರು ಪ್ರಶ್ನಿಸಿದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಬಹಳಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಹಿಂದೆ ಎಂದೂ ಆಗದ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿವೆ. ಇಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಶೀಘ್ರ ಹಾವೇರಿ ಮೆಡಿಕಲ್‌ ಕಾಲೇಜ್‌ ಉದ್ಘಾಟನೆ ಮಾಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಫಾಕ್ಸ್‌ಕಾನ್ ಸೇರಿದಂತೆ 18 ಹೂಡಿಕೆ ಪ್ರಸ್ತಾವನೆಗಳಿಗೆ ಎಸ್‌ಎಚ್‌ಎಲ್‌ಸಿಸಿ ಸಭೆಯಲ್ಲಿ ಅನುಮೋದನೆ: ಸಿಎಂ ಬೊಮ್ಮಾಯಿ

ನಾಲತವಾಡಕ್ಕೆ ಇಂದು ಸಿಎಂ, ಹೈಟೆಕ್‌ ಬಸ್‌ ನಿಲ್ದಾಣ ಲೋಕಾರ್ಪಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಾಲವತವಾಡ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದು, ಹೈಟೆಕ್‌ ಬಸ್‌ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲೇ, ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ವೀರೇಶ್ವರ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತವನ್ನು ಅನಾವರಣಗೊಳಿಸಲಿದ್ದಾರೆ. ಮುಖ್ಯಮಂತ್ರಿ ಈ ಭೇಟಿ ಮತ್ತಷ್ಟುಅಭಿವೃದ್ಧಿಗೆ ಸಾಕಾರವಾದೀತು ಎಂಬ ಒಂದಷ್ಟುನಿರೀಕ್ಷೆ ಸಹ ಮೂಡಿಸಿದೆ.

ಸಿಎಂ ಸ್ವಾಗತಕ್ಕೆ ಪಟ್ಟಣದಲ್ಲಿ ಸಕಲ ಸಿದ್ಧತೆ ನಡೆದಿದೆ. ವೀರೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಬೃಹತ್‌ ವೇದಿಕೆ ಸಜ್ಜಾಗಿದ್ದು, ಮೊರಾರ್ಜಿ ವಸತಿ ಶಾಲೆ ಪಕ್ಕದಲ್ಲಿ ಹೆಲಿಪ್ಯಾಡ್‌ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಮಂಗಳವಾರ ಬೆಳಗ್ಗೆ ಹೆಲಿಕ್ಯಾಪ್ಟರ್‌ ಮೂಲಕ ಆಗಮಿಸಲಿರುವ ಸಿಎಂ ಬೊಮ್ಮಾಯಿ ಪಟ್ಟಣದಲ್ಲಿ ಅಂಬೇಡ್ಕರ ವೃತ್ತವನ್ನು ಅನಾವರಣಗೊಳಿಸಲಿದ್ದಾರೆ. ನಂತರ ಬಸವೇಶ್ವರ ಮೂರ್ತಿ ಹಾಗೂ ನಾಲತವಾಡದ ಶರಣ ವೀರೇಶ್ವರರ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ನಂತರದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಮತ್ತು ಸಭಾ ಭವನ ಉದ್ಘಾಟಿಸಲಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲನೆ: ಸಿಎಂ ಆಗಮನದ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಸ್ಥಳಳಿಗೆ ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಭದ್ರಾ ಕಾಮಗಾರಿ ನಾವೇ ಲೋಕಾರ್ಪಣೆ ಮಾಡ್ತೇವೆ: ಸಿಎಂ ಬೊಮ್ಮಾಯಿ

ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟಣೆ: ಈ ಹಿಂದೆ ಇದ್ದ ಬಸ್‌ ನಿಲ್ದಾಣ ತೆಗ್ಗು ಪ್ರದೇಶದಲ್ಲಿತ್ತು. ಪಟ್ಟಣದಲ್ಲಿ ಸ್ವಲ್ಪ ಮಳೆಯಾದರೆ ಸಾಕು ನಿಲ್ದಾಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರವಾಗುತಿತ್ತು. ಪಟ್ಟಣದ ಜನರ ಬಹು ಬೇಡಿಕೆಯಾಗಿದ್ದ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯವನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸಾಕಾರಗೊಳಿಸಿದ್ದಾರೆ. 2.50 ಕೋಟಿ ಹೆಚ್ಚಿನ ಅನುದಾನದಲ್ಲಿ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಇಂದು ಉದ್ಘಾಟನೆಗೆ ರೆಡಿಯಾಗಿದೆ. ಅದೇ ರೀತಿ 98 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣವಾದ ಸಭಾ ಭವನ, 77 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್‌ ಹಾಗೂ ಬಸವೇಶ್ವರ ಮೂರ್ತಿ, 20 ಲಕ್ಷ ವೆಚ್ಚದಲ್ಲಿ ವೀರೇಶ್ವರ ಮೂರ್ತಿಯನ್ನು ಸಿಎಂ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ. ನಂತರ ವೀರೇಶ್ವರ ವಿದ್ಯಾಸಂಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

click me!