
ಬೆಂಗಳೂರು (ಮೇ.24): ಶೀಘ್ರ ಕನಕಪುರಕ್ಕೆ ತಾವೇ ಖುದ್ದಾಗಿ ಬಂದು ತಮ್ಮೆಲ್ಲರಿಗೂ ಕೃತಜ್ಞತೆ, ಅಭಿನಂದನೆ ಸಲ್ಲಿಸುತ್ತೇನೆ. ಹಾಗಾಗಿ ಯಾರೂ ಕೂಡಾ ಬೆಂಗಳೂರಿಗೆ ಬರುವ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕ್ಷೇತ್ರದ ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ದೆಹಲಿ ಪ್ರವಾಸ ಮುಗಿಸಿಕೊಂಡು ಬಂದ ಕೂಡಲೇ ಕನಕಪುರ ಕ್ಷೇತ್ರಕ್ಕೆ ಬರುತ್ತೇನೆ. ನನ್ನ ಹಾಗೂ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು, ಅಭಿಮಾನಿಗಳಿಗೆ ಕೃತಜ್ಞತೆ, ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗೆ ತೊಂದರೆ ಆಗುವುದು ಬೇಡ ಎಂಬ ಕಾಳಜಿಯಿಂದ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಸಿದ್ದು, ಡಿಕೆಶಿ, ಎಂಬಿಪಾ ಒಂದೇ ಕಾರಲ್ಲಿ ಪ್ರಯಾಣ: ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯಿಂದ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದು ಪ್ರತಿಪಕ್ಷಗಳಿಗೆ ಆಹಾರವಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ತೇಪೆ ಹಚ್ಚಲು ಮುಂದಾಗಿದ್ದಾರೆ. ಇದರ ಭಾಗವಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವಿಧಾನಸೌಧಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದರು.
ಬಿಜೆಪಿ ಸೋಲಿನ ಹೊಣೆ ಎಲ್ಲರೂ ಹೊರಬೇಕು: ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ಡಿಸಿಎಂ ಡಿಕೆಶಿ, ವಿವಿಧ ಸಚಿವರಿಗೆ ಕೊಠಡಿ, ಮನೆ ಹಂಚಿಕೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳು ಹಾಗೂ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಿ ಆದೇಶ ಮಾಡಲಾಗಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗಿನಿಂದ ಇದುವರೆಗೂ ಇರುವ ಗಾಂಧಿ ಭವನ ರಸ್ತೆಯ ಕೊನೆಯಲ್ಲಿರುವ ಕುಮಾರ ಕೃಪ ಈಸ್ಟ್ ನಂ.1 ನಿವಾಸವನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ. ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ನಲ್ಲಿ ನಂ.1 ನಿವಾಸವನ್ನು ಸಚಿವ ಎಂ.ಬಿ.ಪಾಟೀಲ್ ಅವರಿಗೆ, ನಂ.2 ನಿವಾಸವನ್ನು ಕೆ.ಜೆ.ಜಾಜ್ರ್ ಅವರಿಗೆ, ನ.4 ನಿವಾಸವನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಹಂಚಲಾಗಿದೆ. ಇನ್ನು ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸದಾಶಿವನಗರದ 9ನೇ ಕ್ರಾಸ್ನ ನಂ.94/ಎ ನಲ್ಲಿರುವ ಸರ್ಕಾರಿ ವಸತಿ ಗೃಹವನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
40% ಕಮಿಷನ್ ತನಿಖೆ ನನ್ನಿಂದಲೇ ಆರಂಭವಾಗಲಿ: ಸಿಎಂ ಸಿದ್ದುಗೆ ಕೋಟಾ ಶ್ರೀನಿವಾಸ ಪೂಜಾರಿ ಸವಾಲು!
ವಿಧಾನಸೌಧದ ಕೊಠಡಿಗಳ ಹಂಚಿಕೆ: ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸೌಧ ಕೊಠಡಿ ಸಂಖ್ಯೆ 335, 336, 337 ಮತ್ತು 337ಎ ಈ ನಾಲ್ಕು ಕೊಠಡಿಗಳು, ಡಾ.ಜಿ.ಪರಮೇಶ್ವರ್ ಅವರಿಗೆ ನಂ.327, 327ಎ ಎರಡು ಕೊಠಡಿಗಳು, ಸಚಿವ ರಾಮಲಿಂಗಾರೆಡ್ಡಿ ಅವರಿಗೆ 329, 329ಎ ಕೊಠಡಿ ಹಂಚಿಕೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತ ಜ್ಯೋತಿಷಿ ಡಾ.ಆರಾಧ್ಯ ಅವರ ಸಲಹೆ ಮೇರೆಗೆ ವಾಸ್ತು ಆಧರಿಸಿ ಈ ಹಿಂದೆ ತಾವು ಸಚಿವರಾಗಿ ಕೆಲಸ ಮಾಡಿದ್ದ ಕೊಠಡಿಗಳನ್ನೇ ಪಡೆದಿದ್ದಾರೆ. ಇಂಧನ, ಜಲಸಂಪನ್ಮೂಲ ಸಚಿವರಾಗಿದ್ದಾಗ 336ರಲ್ಲಿ ಕೆಲಸ ಮಾಡಿದ್ದ ಡಿ.ಕೆ.ಶಿವಕುಮಾರ್ ಅವರು ಮತ್ತೆ ಆ ಕೊಠಡಿ ಜತೆ ಇನ್ನೂ ಮೂರು ಕೊಠಡಿಗಳನ್ನು ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.