ಹೊಸಪೇಟೆ (ಸೆ.04): ಹೊಸ ಜಿಲ್ಲೆಗಳ ರಚನೆಯಿಂದ ಅಭಿವೃದ್ಧಿಯಾಗಲಿದೆ. ಜತೆಗೆ ಜನರ ಸಮಸ್ಯೆಗಳಿಗೆ ಬೇಗ ಸ್ಪಂದನೆ ದೊರೆಯಲಿದೆ ಎಂಬುದನ್ನರಿತು ವಿಜಯನಗರ ಜಿಲ್ಲೆಗಾಗಿ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಾಗಿದ್ದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ವಿಜಯನಗರ ಜಿಲ್ಲಾ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಟಿಎಸ್ಪಿ ಕಾರ್ಖಾನೆ ಆವರಣದಲ್ಲಿ ವಿಜಯನಗರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜೆ.ಎಚ್. ಪಟೇಲರು ಕರ್ನಾಟಕದಲ್ಲಿ ಅಭಿವೃದ್ಧಿಗಾಗಿ ಹೊಸ ಜಿಲ್ಲೆಗಳನ್ನು ರಚನೆ ಮಾಡಿದ್ದರು. ಅದೇ ಹೋರಾಟದ ಕಿಚ್ಚಿನೊಂದಿಗೆ ನಾವು ಬೆಂಗಳೂರಿಗೆ ಎರಡು ವಿಶೇಷ ವಿಮಾನಗಳಲ್ಲಿ ನಿಯೋಗ ಹೋಗಿದ್ದೆವು. ಆದರೆ, ನಮ್ಮ ಕೆಲಸ ಸುಲಭವಾಗಿರಲಿಲ್ಲ. ನಮ್ಮ ಬೇಡಿಕೆಗೆ ಸ್ಪಂದನೆ ದೊರೆಯಲಿಲ್ಲ. ಬಳಿಕ ಹೋರಾಟ ತೀವ್ರಗೊಳಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನಗೆದ್ದು ಜಿಲ್ಲೆ ಮಾಡಿಸಿರುವೆ ಎಂದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಯಡಿಯೂರಪ್ಪನವರು ಊಟ ಮಾಡುತ್ತಿದ್ದರು. ನಾನು ಕ್ಯಾಬಿನೆಟ್ ಮಂತ್ರಿಯಾದರೂ ಶಿಷ್ಟಾಚಾರ ಬದಿಗೊತ್ತಿ ಅವರ ಬಳಿ ಸಾವರಿಸಿ ಹೋಗಿ, ವಿನಯದಿಂದ ಜಿಲ್ಲೆ ಮಾಡಲು ಕೋರಿಕೊಂಡೆ.
Hosapete: ಜೀವ ಬೆದರಿಕೆ ಆರೋಪ: ಸಚಿವ ಆನಂದ್ ಸಿಂಗ್ ವಿರುದ್ಧ ಕೇಸ್
ಅವರು ತಡ ಮಾಡದೇ ಹೊಸಜಿಲ್ಲೆಯ ಕಡತಕ್ಕೆ ರುಜು ಹಾಕಿದರು. ಇದಕ್ಕೆ ಸಹಕಾರ ನೀಡಿದ ಉಭಯ ಜಿಲ್ಲೆಗಳ ಶಾಸಕರನ್ನು ನಾನು ಮರೆಯುವುದಿಲ್ಲ. ಜತೆಗೆ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಮರೆಯುವುದಿಲ್ಲ ಎಂದರು. ವಿಧಾನಪರಿಷತ್ನ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯನವರು ಜಿಲ್ಲಾ ಕಟ್ಟಡವನ್ನು ಟಿಎಸ್ಪಿಯಲ್ಲಿ ಮಾಡಲು ಸಲಹೆ ನೀಡಿದರು. ಅವರ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಕರ್ನಾಟಕ ಗೃಹ ಮಂಡಳಿಗೆ ಈ ಜಾಗ ಹಸ್ತಾಂತರವಾಗಿತ್ತು. ವಸತಿ ಸಚಿವ ವಿ. ಸೋಮಣ್ಣ ಅವರು ಖುದ್ದು ಜಾಗ ಪರಿಶೀಲನೆ ಮಾಡಿ, ಈ ಜಾಗ ನಮಗೆ ಹಸ್ತಾಂತರದ ಆದೇಶ ಮಾಡಿದರು ಎಂದರು.
ಅಭಿವೃದ್ಧಿಯಲ್ಲಿ ಸದಾ ಮುಂದು: ವಿಜಯನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಸದಾ ಮುಂದಿದೆ. ಒಂದು ಕೆಲಸವಾಗಬೇಕಾದರೆ ವಿಳಂಬವಾಗುತ್ತದೆ. ಕಚೇರಿಗಳ ಕಟ್ಟಡ ಕಟ್ಟಲು ದಶಕಗಳೇ ಹಿಡಿಯುತ್ತದೆ. ಆದರೆ, ವಿಜಯನಗರ ಜಿಲ್ಲೆಯ ವಿಷಯದಲ್ಲಿ ಹಾಗೇ ಆಗುತ್ತಿಲ್ಲ. ದೇಶದಲ್ಲೇ ಅಭಿವೃದ್ಧಿ ವೇಗದಲ್ಲಿ ಜಿಲ್ಲೆ ಮುಂದಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೂಮಿಪೂಜೆ ನೆರವೇರಿಸಿ, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡ ಅವಶ್ಯವಿದೆ. .4.5 ಕೋಟಿ ವೆಚ್ಚದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ.
ವಿಜಯನಗರ ಉಸ್ತುವಾರಿ ಅದಲು ಬದಲು ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಈ ಕಟ್ಟಡ ಅದ್ಭುತವಾಗಿ ಮೂಡಿಬರಲಿದೆ. ಜಿಲ್ಲೆಯ ಎಲ್ಲ ಇಲಾಖೆಗಳ ಕಚೇರಿಗಳು ಒಂದೇ ಕಡೆ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು. ಶಾಸಕ ಪಿ.ಟಿ.ಪರಮೇಶ್ವರ, ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಎಸ್ಪಿ ಡಾ. ಅರುಣ್ ಕೆ. ಮಾತನಾಡಿದರು. ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಜಿಪಂ ಸಿಇಒ ಹರ್ಷಲ್ ಬೋಯರ್, ನಗರಸಭೆ ಸದಸ್ಯ ಹನುಮಂತಪ್ಪ (ಬುಜ್ಜಿ) ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.