
ಚನ್ನಮ್ಮನ ಕಿತ್ತೂರು(ಮೇ.07): ಕಿತ್ತೂರು ತಾಲೂಕು ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದರೂ ಮುತುವರ್ಜಿ ವಹಿಸಿ, ಶರಾ ಬರೆಯುವ ಮೂಲಕ ಕಿತ್ತೂರನ್ನು ತಾಲೂಕಾಗಿ ಘೊಷಿಸಬೇಕೆಂದು ಅಧಿಕಾರಿಗಳಿಗೆ ನಾನು ಸಿಎಂ ಇದ್ದಾಗ ಸೂಚನೆ ನೀಡಿದ್ದೆ. ರಾಜ್ಯದಲ್ಲಿಯೇ ಏಕೈಕ ತಾಲೂಕು ಘೋಷಣೆಗೊಳಿಸಿದ್ದೆ. ಕಿತ್ತೂರು ಪಟ್ಟಣ ತಾಲೂಕು ಕೇಂದ್ರವಾಗಲು ಅಂದಿನ ಶಾಸಕರಾಗಿದ್ದ ಸುರೇಶ ಮಾರಿಹಾಳ ಅಪಾರ ಶ್ರಮವಹಿಸಿದ್ದಾರೆ ಎಂದು ಮಾಜಿ ಸಿಎಂ, ಹುಬ್ಬಳ್ಳಿ ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದಲ್ಲಿ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಪಾಟೀಲ ಪರ ಗುರುವಾರ ನಡೆದ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐತಿಹಾಸಿಕ ಕಿತ್ತೂರಿನ ಮೇಲೆ ನನಗೆ ಗೌರವದ ಜೊತೆಗೆ ಪ್ರೀತಿಯೂ ಇದೆ. ಕಿತ್ತೂರಿಗೆ ಬಿಜೆಪಿ ನಾಯಕನಾಗಿ ಈ ಹಿಂದೆ ಬಂದಿದ್ದೆ, ಕಾಲಾನುಸಾರ ಇಂದು ಕಾಂಗ್ರೆಸ್ ನಾಯಕನಾಗಿ ಬಂದಿದ್ದೇನೆ. ಬಿಜೆಪಿ ಪಕ್ಷ ಕೆಲವರ ಕೈಗೊಂಬೆಯಾಗಿ ವರ್ತಿಸಿಸುತ್ತಿದ್ದು, ನನ್ನನ್ನು ಪಕ್ಷದಲ್ಲಿ ಹತ್ತಿಕ್ಕುವ ಎಲ್ಲ ಷಡ್ಯಂತ್ರ ಬಿಜೆಪಿ ಪಕ್ಷದಲ್ಲಿ ನಡೆದಿತ್ತು ಎಂದು ದೂರಿದರು.
ರಾಜ ವ್ಯಾಪಾರಿಯಾದರೇ ಪ್ರಜೆಗಳು ಭಿಕ್ಷುಕರು: ಬಿಜೆಪಿ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ
ನನ್ನ ತಂದೆಯ ಕಾಲದಿಂದಲೂ ಸಹ ಬಿಜೆಪಿ ಕಟ್ಟಿದುಡಿದ ವ್ಯಕ್ತಿ ನಾನು. ನನಗೆ ಯಾವುದೇ ಮಂತ್ರಿ ಸ್ಥಾನದ ಮೇಲೆ ವ್ಯಾಮೋಹವಿರಲಿಲ್ಲ. ಕೇವಲ ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ. ಅವಕಾಶ ನೀಡಿ ಎಂದರೂ ಬಿಜೆಪಿ ಟಿಕೆಟ್ ನೀಡಲಿಲ್ಲ. ಇದರಿಂದ ನನ್ನ ಹಾಗೂ ನನ್ನ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದ್ದು ನಾನು ಪಕ್ಷ ತೊರೆದು ಹೊರ ಬಂದೆ ಎಂದರು.
ಬಿಜೆಪಿಯಲ್ಲಿ ಸಿಡಿ ಪ್ರಕರಣದಲ್ಲಿರುವ 6 ಜನರಿಗೆ ಪಕ್ಷ ಟಿಕೆಟ್ ನೀಡಿತ್ತು. ಆದರೆ, ಯಾವುದೇ ಕಳಂಕ ಇಲ್ಲದೇ ದುಡಿದ ನನನ್ನು ಪಕ್ಷ ಕೈಬಿಟ್ಟಿತು ಇದರಿಂದ ಮನನೊಂದು ಹೊರಬಂದಿರುವೆ. ಬಿಜೆಪಿ ಇಷ್ಟೆಲ್ಲಾ ಮಾಡಿದರೂ ಇಲ್ಲಿ ಇದ್ದರೂ ಸಹ ಸತ್ತಂತೆ ಎಂದು ತಿಳಿದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ನಾನು ಸೇರ್ಪಡೆಗೊಂಡೆ ಎಂದು ತಿಳಿಸಿದರು.
ಧಾರವಾಡ ಗ್ರಾಮೀಣ ಕ್ಷೇತ್ರದದ ಅಭ್ಯರ್ಥಿ, ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಾರು ಜನಪರ ಯೋಜನೆ ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಬಿಜೆಪಿ ಇಲ್ಲ ಸಲ್ಲದ ಕೋಮುವಾದದ ಗದ್ದಲ ಎಬ್ಬಿಸುವ ಮೂಲಕ ಜನರಿಗೆ ಮಂಕುಬೂದಿ ಎರೆಚುತ್ತಿದೆ. ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ಯಾವ ಜನಪರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ?. ಅಭಿವೃದ್ಧಿಯ ಕುರಿತು ಚರ್ಚೆಗೆ ಬಂದರೆ ಸ್ವಾಗತ ಎಂದು ಸವಾಲ ಹಾಕಿದರು.
ಕಿತ್ತೂರು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಪಾಟೀಲ ಮಾತನಾಡಿ, ಕಿತ್ತೂರು ಅಭಿವೃದ್ಧಿಯ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದು ಬಾರಿ ಅವಕಾಶ ನೀಡಿದ್ದಲ್ಲಿ ಕಿತ್ತೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತೇನೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತದೆ ಎಂದರು.
ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕ್ಷೇತ್ರದ ವೀಕ್ಷಕ ರವಿ ಮಲ್ಲೂರು, ಮುಖಂಡರಾದ ಶಂಕರ ಹೊಳಿ, ವಿರುಪಾಕ್ಷ ಮಾರಿಹಾಳ, ರಾಜಾಸಲೀಂ ಕಾಶೀಂನವರ, ಮಾಜಿ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಪಪಂ ಮಾಜಿ ಅಧ್ಯಕ್ಷ ಹನೀಫ ಸುತಗಟ್ಟಿಸೇರಿದಂತೆ ಇತರರು ವೇದಿಕೆಯ ಮೇಲಿದ್ದರು. ಇದಕ್ಕೂ ಮೊದಲು ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಬಾಬಾಸಾಹೇಬ್ ಪಾಟೀಲ ಹಾಗೂ ಮುಖಂಡರು ಸತ್ಕರಿಸಿದರು.
ಜಾರಕಿಹೊಳಿ ಸಾಹೇಬ್ರು ಜನರ ಕೈಗೆ ಸಿಗುವುದು ವಿರಳ : ಅಮಿತ್ ಶಾ ಲೇವಡಿ
ಮತದಾರರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಅವಶ್ಯಕತೆ ಇದೆ. ಚಾಲೆಂಜ್ ಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ. ಕಿತ್ತೂರು ಕಾಂಗ್ರೆಸ್ ಅಭ್ಯರ್ಥಿಯಾದ ಬಾಬಾಸಾಹೇಬ್ ಪಾಟೀಲ ಅವರಿಗೆ ತಮ್ಮ ಮತಗಳನ್ನು ನೀಡುವ ಮೂಲಕ ಬಹುಮತದ ಕಾಂಗ್ರೆಸ್ ಸರ್ಕಾರ ರಚಿಸಲು ಮತದಾರರು ಆಶೀರ್ವದಿಸಬೇಕು ಅಂತ ಹುಬ್ಬಳ್ಳಿ ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಕಿತ್ತೂರು ಅಭಿವೃದ್ಧಿಯ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದು ಬಾರಿ ಅವಕಾಶ ನೀಡಿದ್ದಲ್ಲಿ ಕಿತ್ತೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತೇನೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತದೆ ಅಂತ ಕಿತ್ತೂರು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಪಾಟೀಲ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.