
ಮಂಗಳೂರು(ಸೆ.2): ಆಹಾರ ಸುರಕ್ಷತೆ, ಔಷಧ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಈ ವಿಚಾರದಲ್ಲಿ ಯಾರೇ ಸಿಕ್ಕಿಬಿದ್ದರೂ, ಅವರು ನನ್ನ ಆತ್ಮೀಯರೇ ಇದ್ದರೂ ನಾನು ಬಿಡೋದಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಸಿದರು.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಹಲವೆಡೆ ದಾಳಿಯಾಗಿದೆ. ನಾವು ದಾಳಿ ಮಾಡಿ ತಪಾಸಣೆ ಮಾಡೋದು ಅವರ ವ್ಯಾಪಾರ ಬಂದ್ ಮಾಡಲು ಅಲ್ಲ, ಜನರಿಗೆ ಉತ್ತಮ ಆಹಾರ ಕೊಡಿ ಎನ್ನುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಬಾರ್ ಕೋಡ್ ದೂರಿನ ಹಿನ್ನೆಲೆಯಲ್ಲಿ ಎರಡು ತಪಾಸಣೆ ಆಗಿದೆ. ಅಲ್ಲಿ ಊಟ ಮಾಡಲು ಬರೋರು ಕೂಡ ನನ್ನ ಆತ್ಮೀಯರೇ ಆಗಿದ್ದಾರೆ. ಹೀಗಾಗಿ ಸ್ವಚ್ಛತೆ, ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇದಲ್ಲದೆ ಪಿಜಿ ನಡೆಸುವವರು ಕೂಡ ಪಿಜಿಗೆ ಸೇರಿದವರನ್ನ ಸ್ವಂತ ಮಕ್ಕಳಂತೆ ಕಾಣಬೇಕು. ಉತ್ತಮ ಆಹಾರ ನೀಡಬೇಕು. ಹೋಟೆಲ್ಗಳಲ್ಲಿ ಬಾರ್ ಕೋಡ್ ಮಾತ್ರವಲ್ಲ ಆರೋಗ್ಯ ಕಾಪಾಡಲು ಸಲಹೆ ಕೂಡ ಪ್ರಕಟಿಸಲಾಗಿದೆ. ಕ್ಯೂಆರ್ ಕೋಡ್ ಮೂಲಕ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವರು, ದೂರು ಬಂದ ಹಿನ್ನೆಲೆ ಕೆಎಫ್ಸಿ ಮೇಲೆ ದಾಳಿ ನಡೆಸಿ ನೋಟಿಸ್ ನೀಡಲಾಗಿದೆ ಎಂದರು.
ಇನ್ನು ಇಸ್ಲಾಂ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಸವರಾಜ ರಾಯರೆಡ್ಡಿ ಹಿರಿಯರು, ಜ್ಞಾನವುಳ್ಳ, ಪ್ರಾಮಾಣಿಕ ಶಾಸಕರು. ಅವರು ನನ್ನ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅಂಥ ವ್ಯಕ್ತಿತ್ವಕ್ಕೆ ನಾವು ಗೌರವ ಕೊಡಬೇಕು. ಅವರು ಯಾವುದೇ ಪಕ್ಷದಲ್ಲಿದ್ದರೂ ಗೌರವಿಸಬೇಕು ಎಂದರು.
ಅವರು ಈದ್ ಕಾರ್ಯಕ್ರಮಕ್ಕೆ ಹೋದಾಗ ಆ ಮಾತು ಆಡಿದ್ದಾರೆ. ಯಾರನ್ನೋ ನೋಯಿಸಲು ಅಲ್ಲ. ಅವರು ಮುಸ್ಲಿಂ ಧರ್ಮ ಶ್ರೇಷ್ಠ ಎಂದರೂ ಹಿಂದೂ ಧರ್ಮವನ್ನು ಉತ್ತಮವಾಗಿ ಪಾಲಿಸುತ್ತಿದ್ದಾರೆ. ಸಾಮಾನ್ಯವಾಗಿ ಮುಕ್ತ ಮನಸಿನಿಂದ ಸೌಹಾರ್ದತೆಯಿಂದ ಆ ಮಾತು ಹೇಳಿದ್ದಾರೆ. ಅದನ್ನು ವಿರೋಧಿಸುವ ನೀಚ ಮನಸ್ಥಿತಿ ಯಾಕೆ ಬಂತೋ, ಅದೆಲ್ಲ ಬೇಕಿತ್ತಾ? ಜನರ ಮಧ್ಯೆ ಗೊಂದಲ ಸೃಷ್ಟಿಸೋದು ರಾಜಕೀಯ ಮಾಡೋದು ಸರಿಯಲ್ಲ. ಇಂಥ ರಾಜಕೀಯ ಮಾಡೋರು ದೇಶಪ್ರೇಮಿಗಳಲ್ಲ. ಜನರ ಮಧ್ಯೆ ಗೊಂದಲ ಸೃಷ್ಟಿಸೋದು ರಾಜಕೀಯ ಮಾಡೋದು ಸರಿಯಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.