
ಬೆಂಗಳೂರು, (ಡಿ.29): ಮೇಕೆದಾಟು ಯೋಜನೆ (Mekedatu Project) ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ(Congress Padayatre:) ಕೈಗೊಂಡಿದ್ದು, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಫುಲ್ ಗರಂ ಆಗಿದ್ದಾರೆ.
ಕಳೆದ ಒಂದುವಾರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಎಚ್ಡಿಕೆ ಇದೀಗ ಸಿದ್ದರಾಮಯ್ಯ (Siddaramaiah) ತಂಟೆಗೆ ಹೋಗಿದ್ದಾರೆ.
Mekedatu Project: ಮೇಕೆದಾಟು ಮಕ್ಮಲ್ ಟೋಪಿ, ಕಾಂಗ್ರೆಸ್ ವಿರುದ್ಧ ಎಚ್ಡಿಕೆ ವಾಗ್ದಾಳಿ
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವು ಡಿಪಿಆರ್ಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ನನ್ನನ್ನು ಉದ್ದೇಶಿಸಿ ಹೇಳಿದ್ದಾರೆ.
ಆದರೆ, ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಅವರೇಕೆ ಹೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಪಾದಯಾತ್ರೆ ಮಾಡಿದರೆ ಡಿಪಿಆರ್ಗೆ ಜಲ ಆಯೋಗ ಒಪ್ಪಿಗೆ ನೀಡುತ್ತಾ? ಈ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ ಎಂಬ ಅರಿವು ಪ್ರತಿಪಕ್ಷ ನಾಯಕರಿಗೆ ಇದೆಯಾ? ತಮಿಳುನಾಡು ಒಪ್ಪಿಗೆ ಪಡೆಯಿರಿ ಎಂದು ಸ್ವತಃ ಕೇಂದ್ರ ಸರಕಾರವೇ ರಾಜ್ಯಕ್ಕೆ ಸ್ಪಷ್ಟವಾಗಿ ಹೇಳಿದೆ. ಹಾಗಾದರೆ, ಪಾದಯಾತ್ರೆಯಿಂದ ಡಿಪಿಆರ್ಗೆ ಒಪ್ಪಿಗೆ ಹೇಗೆ ಸಿಗುತ್ತದೆ?.
ಪಾದಯಾತ್ರೆ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಿ ತಮಿಳುನಾಡು ರಾಜ್ಯದ ಮನವೊಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸರಕಾರಕ್ಕೆ ಹೇಳಿ. ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಒತ್ತಾಯ ಮಾಡಿ. ಜತೆಯಲ್ಲಿ ನಾವೂ ಬರುತ್ತೇವೆ. ಐದು ವರ್ಷ ಸಿಎಂ ಆಗಿದ್ದರು. ಹಣಕಾಸು ಮಂತ್ರಿಯೂ ಆಗಿದ್ದರು. ಈಗ ಪ್ರತಿಪಕ್ಷ ನಾಯಕರು ಆಗಿದ್ದಾರೆ. ಆದರೆ, ಡಿಪಿಆರ್ಗೆ ಜಲ ಆಯೋಗ ಒಪ್ಪಿಗೆ ಕೊಡುವ ಮಾನದಂಡ ಏನು ಎನ್ನುವ ತಿಳಿವಳಿಕೆ ಅವರಿಗೆ ಇಲ್ಲವೆ? ತಾಂತ್ರಿಕ, ಕಾನೂನಾತ್ಮಕ ಅಂಶಗಳಿಂದ ನೆನೆಗುದಿಗೆ ಬಿದ್ದ ಡಿಪಿಆರ್ಗೆ ಪಾದಯಾತ್ರೆಯಿಂದ ಮೋಕ್ಷ ಸಿಗುತ್ತಾ?
ಮೈತ್ರಿ ಸರಕಾರದಲ್ಲಿ ನಾನು ಸಿಎಂ ಆಗಿದ್ದಾಗ ಮೇಕೆದಾಟು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಯಿತು. ಕೂಡಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಆಗ ಕೇಂದ್ರ ಸರಕಾರವು ತಮಿಳುನಾಡಿನ ಒತ್ತಾಯಕ್ಕೆ ಮಣಿದು, ನೆರೆ ರಾಜ್ಯದ ಸಹಮತ ಪಡೆಯುವಂತೆ ನಮ್ಮ ರಾಜ್ಯಕ್ಕೆ ಸೂಚಿಸಿತ್ತು.
ಈ ಅಡೆತಡೆಗಳನ್ನು ನಿವಾರಿಸಲು ಹಲವು ಬಾರಿ ಪ್ರಧಾನಿಗಳನ್ನು, ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಆದರೆ, ದಿಲ್ಲಿಯಲ್ಲಿ ಕೊಳೆಬಿದ್ದಿರುವ ಡಿಪಿಆರ್ ಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಏನು ಮಾಡಿದೆ? ಎಲ್ಲಿ ಹೋರಾಟ ಎನ್ನುವುದನ್ನು ಪ್ರತಿಪಕ್ಷ ನಾಯಕರು ಜನರಿಗೆ ಹೇಳಬೇಕು.
ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರು ನಿರಾಕರಿಸಿದ್ದ ಕಾಂಗ್ರೆಸ್, ಈಗ ಅದೇ ನಗರದಲ್ಲಿ 4 ದಿನ ಪಾದಯಾತ್ರೆ ಮಾಡುತ್ತಿದೆ! ಕೋವಿಡ್ ವೇಳೆ ಜನರಿಗೆ ತೊಂದರೆ ಕೊಡಲು ಈ ಹೊಸ ನಾಟಕ ಏಕೆ? ಮೊದಲು ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಿ. ಆಮೇಲೆ ಪಾದಯಾತ್ರೆ ಮಾಡಿ, ನನ್ನದೇನೂ ತಕರಾರಿಲ್ಲ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.