ಜೆಡಿಎಸ್‌ಗೆ 5 ವರ್ಷ ಅವಕಾಶ ನೀಡಿ, ರಾಜ್ಯಕ್ಕೆ ಹಿಡಿದ ಕಾಂಗ್ರೆಸ್ ಗ್ರಹಣ ಬಿಡಿಸುವೆ : ಹೆಚ್‌ಡಿಕೆ

Kannadaprabha News   | Kannada Prabha
Published : Apr 12, 2026, 05:06 AM IST
HD Kumaraswamy Speech at JDS Rajata Mahotsava in Bengaluru

ಸಾರಾಂಶ

ಜೆಡಿಎಸ್ ಜನತಾ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಕ್ಕೆ ಹಿಡಿದಿರುವ ಕಾಂಗ್ರೆಸ್ ಗ್ರಹಣವನ್ನು ಬಿಡಿಸಲು ತಮ್ಮ ಪಕ್ಷಕ್ಕೆ ಐದು ವರ್ಷಗಳ ಸಂಪೂರ್ಣ ಅವಕಾಶ ನೀಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಪೂರ್ಣ ಬಹುಮತ ಸಿಕ್ಕರೆ ಎಲ್ಲ ಸಮಸ್ಯೆಗಳನ್ನ ಬಗೆಹರಿಸುವೆ ಎಂದರು..

ಬೆಂಗಳೂರು (ಏ.12): ಜೆಡಿಎಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಒಂದೇ ಒಂದು ಬಾರಿ ಅವಕಾಶ ನೀಡಿ. ಈ ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನು ಸಂಪೂರ್ಣವಾಗಿ ಬಿಡಿಸುತ್ತೇನೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನಗರದ ಹೊರವಲಯದ ಕೊಮ್ಮಘಟ್ಟ ನೈಸ್‌ ಮೈದಾನದಲ್ಲಿ ಶನಿವಾರ ನಡೆದ ಜೆಡಿಎಸ್ ಜನತಾ ಸಮಾವೇಶ-ಬೆಳ್ಳಿಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ನನಗೆ ಒಮ್ಮೆ ಅವಕಾಶ ಕೊಟ್ಟು ನೋಡಿ, ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಹಿಡಿದಿರುವ ಗ್ರಹಣ‌‌ಕ್ಕೆ ಮುಕ್ತಿ ಹಾಡುತ್ತೇನೆ. ಇವರು ಮಾಡಿರುವ ಕೊಳಕನ್ನೆಲ್ಲಾ ಸ್ವಚ್ಛ ಮಾಡುತ್ತೇನೆ ಎಂದು ಹೇಳಿದರು.

ಎರಡು ಬಾರಿ ಹಂಗಿನ ಸರ್ಕಾರ:

ನಾನು ಎರಡು ಬಾರಿ ಸಿಎಂ ಆಗಿದ್ದೆ. ಆದರೆ, ನನ್ನದು ಬಹುಮತದ ಸ್ವತಂತ್ರ ಸರ್ಕಾರ ಆಗಿರಲಿಲ್ಲ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದ್ದೆ. ಹೀಗಾಗಿ ನನಗೆ ಒಮ್ಮೆ ಪೂರ್ಣ ಪ್ರಮಾಣದ ಸರ್ಕಾರ ಕೊಟ್ಟು ನೋಡಿ. ರಾಜ್ಯ ಯಾವ ಸ್ಥಿತಿಗೆ ಹೋಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದೀರಿ. ಹಾಗೆಯೇ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಕೆಂಪೇಗೌಡರು ಕಟ್ಟಿದ ಈ ಮಹಾನಗರವನ್ನು ಇಂತಹ ದುಸ್ಥಿತಿಗೆ ತಂದ ವ್ಯಕ್ತಿಗಳಿಗೆ ಪಾಠ ಕಲಿಸಬೇಕು. ಜತೆಗೆ ನಗರಕ್ಕೆ ಮರುವೈಭವ ತಂದುಕೊಡಬೇಕಿದೆ ಎಂದರು.

ರೈತರನ್ನು ಜೆಡಿಎಸ್‌ ನಿರ್ಲಕ್ಷಿಸಿಲ್ಲ:

ಜೆಡಿಎಸ್ ಕೇವಲ ರೈತರಿಗೆ ಸೀಮಿತವಾದ ಪಕ್ಷವಲ್ಲ. ಹಾಗೆಂದು ನಾವು ರೈತರನ್ನು ಎಂದು ನಿರ್ಲಕ್ಷ್ಯ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಕೆಂಪೇಗೌಡರು ಕಟ್ಟಿದ ಮಹಾನಗರದಲ್ಲಿ ಎಷ್ಟು ರೈತರ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ, ಅವರ ಕ್ಷೇಮದ ಮುಂದಾಲೋಚನೆ ಇಟ್ಟುಕೊಂಡು ನಾನು ಮತ್ತು ದೇವೇಗೌಡರು ಕೆಲಸ ಮಾಡಿದ್ದೇವೆ. ಆದರೆ ಈಗ ಏನಾಗುತ್ತಿದೆ? ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಲೂಟಿಯ ಮೇಲೆ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ಶಿಕ್ಷಣ ವ್ಯವಸ್ಥೆ ಹಾಳಾಗಿದೆ:

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡದೆ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುತ್ತಿದ್ದಾರೆ. 70 ಸಾವಿರ ಶಿಕ್ಷಕರನ್ನು ನೇಮಿಸಲು ಇವರಿಂದ ಸಾಧ್ಯವಾಗಿಲ್ಲ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಬಂದು ಹೋರಾಟ ನಡೆಸಿದರು. ಒಳ ಮೀಸಲಾತಿ ವಿಷಯ ಏನಾಗಿದೆ ಎಂದು ಸಿದ್ದರಾಮಯ್ಯ ಹೇಳಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗಳಿಂದ ಜನರ ಬದುಕು ಹಸನಾಗಲ್ಲ:

ನಾನು ಆರೂವರೆ ಕೋಟಿ ಕನ್ನಡಿಗರ ಆಶೀರ್ವಾದದಿಂದ ಸಿಎಂ ಆಗಲಿಲ್ಲ. ಆದರೆ ಕನ್ನಡಿಗರು ಯಾವತ್ತೂ ತಲೆತಗ್ಗಿಸುವಂತೆ ಆಡಳಿತ ನಡೆಸಲಿಲ್ಲ. ಅನುದಾನ ಬರಲಿಲ್ಲ ಎಂದು ಕೇಂದ್ರ ಜೊತೆ ಕಾಲು ಕೆರೆದು ಜಗಳಕ್ಕೆ ಹೋಗಲಿಲ್ಲ. ನಿಮ್ಮನ್ನು ಎದುರು ಹಾಕಿಕೊಂಡೆ ರೈತರ ಸಾಲ ಮನ್ನಾ ಮಾಡಿದೆ. ಕೇವಲ ಗ್ಯಾರಂಟಿಗಳಿಂದ ಜನರ ಬದುಕು ಸರಿ ಹೋಗುವುದಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಯುವ ಜನತಾದಳ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ಎಸ್.ಎಲ್.ಭೋಜೇಗೌಡ, ಮಂಜೇಗೌಡ, ಶಾಸಕಿ ಕರೆಮ್ಮ ನಾಯಕ್, ವಿವೇಕಾನಂದ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ವೆಂಕಟರಾವ್ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.

-ಕೋಟ್‌-ಪಕ್ಷ ಉಳಿಸುವುದು ನನ್ನ ಹೊಣೆ

ನಾವು ಬಿಜೆಪಿ ಮೈತ್ರಿಯಲ್ಲಿದ್ದೇವೆ. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿದೆ. ಮೈತ್ರಿ ಧರ್ಮಕ್ಕೆ ನಾವು ಸದಾ ಬದ್ಧರು. ಅದರ ಬಗ್ಗೆ ಚರ್ಚೆ ಮಾಡಲು ನನಗೆ ಬಿಡಿ. ಹಾದಿಬೀದಿಯಲ್ಲಿ ಯಾರೂ ಮಾತನಾಡುವುದು ಬೇಡ. ಪಕ್ಷವನ್ನು ಉಳಿಸಿಕೊಳ್ಳುವುದು ನನ್ನ ಹೊಣೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Davanagere By-election 2026: ದಾವಣಗೆರೇಲಿ ಪಕ್ಷ ವಿರೋಧಿ ನಡೆಗೆ ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ತಲೆದಂಡ,
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ; 'ಮಾಡಿದ್ದುಣ್ಣೋ ಮಾರಾಯ' ಎಂದ ಮುಖಂಡ ಚಮನ್ ಸಾಬ್