
ಹಾಸನ (ಫೆ.28): ಹಾಸನದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ದೇವೇಗೌಡರನ್ನೇ ಮನೆಯಿಂದ ಹಾಗೂ ಜಿಲ್ಲೆಯಿಂದ ಹೊರಗಟ್ಟಿದರು. ಆ ಮುತ್ಸದ್ದಿ ರಾಜಕಾರಣಿ ಈ ವಯಸ್ಸಿನಲ್ಲಿ ಸೋಲನ್ನು ಕಾಣಬೇಕಾಯಿತು.ಇದು ತುಂಬಾ ನೋವಿನ ವಿಷಯ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನದ ಎಂಪಿ ಟಿಕೆಟ್ ಹಂಚಿಕೆ ಬಗ್ಗೆ ಚನ್ನಪಟ್ಟಣದಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಈ ವೇಳೆ ಎಲ್ಲರೂ ಹಾಲಿ ಸಂಸದರ ಹೆಸರು (ದೇವೇಗೌಡರು) ಹೇಳಲು ಮೊದಲೇ ರೆಡಿಯಾಗಿ ಬಂದಿದ್ದರು. ಆದರೆ, ನಾನು ಹೆಸರು ಹೇಳಲಿಲ್ಲ, ಅಲ್ಲೇ ಶುರುವಾಯ್ತು. ತಮ್ಮ ಸ್ವಾರ್ಥಕ್ಕಾಗಿ ದೇವೇಗೌಡರನ್ನೇ ಮನೆಯಿಂದ ಹಾಗೂ ಜಿಲ್ಲೆಯಿಂದ ಹೊರಗಟ್ಟಿದರು. ಆ ಮುತ್ಸದ್ದಿ ರಾಜಕಾರಣಿ ಈ ವಯಸ್ಸಿನಲ್ಲಿ ಸೋಲನ್ನು ಕಾಣಬೇಕಾಯಿತು. ಇದು ತುಂಬಾ ನೋವಿವ ವಿಷಯ. ಅವರನ್ನೇ ಹೊರಗಟ್ಟಿದವರು ಇನ್ನ ನಾವು ಯಾವ ಲೆಕ್ಕಾ ಎಂದು ಕಿಡಿಕಾರಿದರು.
ಹಾಸನ ಜೆಡಿಎಸ್ ಟಿಕೆಟ್ಗೆ ಫೈಟ್: ಭವಾನಿ ಬೆಂಬಲಿಗರ ಬೃಹತ್ ಪ್ರತಿಭಟನೆ
ಸ್ವಾರ್ಥಕ್ಕಾಗಿ ಯಾರನ್ನ ಬೇಕಾದರೂ ಬಲಿ ಕೊಡ್ತಾರೆ: ನನ್ನ ರಾಜಕಾರಣ ಅವಧಿಯಲ್ಲಿ ಪಕ್ಷಕ್ಕಾಗಲಿ ನಾಯಕರಿಗೆ ಆಗಲಿ ಕೆಟ್ಟ ಹೆಸರು ಬರುವಂತೆ ನಡೆದುಕೊಂಡಿಲ್ಲ. ಆಡಳಿತ ಪಕ್ಷ ಇರಲಿ ವಿರೋಧ ಪಕ್ಷ ಇರಲಿ ತಪ್ಪನ್ನ ತಪ್ಪು ಅಂತ ಹೇಳಿಕೊಂಡು ಬಂದಿದ್ದೇನೆ. ಕೆಲವೊಮ್ಮೆ ಸತ್ಯ ಹೇಳಿದಕ್ಕೆ ದಂಡ ತೆರಬೇಕಾಗುತ್ತದೆ. ಸ್ವಾರ್ಥಕ್ಕಾಗಿ ಕೆಲವು ಸತ್ಯವನ್ನು ಸಾಯಿಸುತ್ತಾರೆ. ಯಾರನ್ನು ಬೇಕಾದರೂ ಬಲಿ ಕೊಡ್ತಾರೆ. ಅಂತಹವರನ್ನು ನಂಬಬಾರದು. ಒಂದುವರೆ ವರ್ಷದಿಂದ ಒಬ್ಬರು ನಾನೇ ಜೆಡಿಎಸ್ ಅಭ್ಯರ್ಥಿಯಾಗಿ ಓಡಾಡುತ್ತಿದ್ದಾರೆ. ರೇವಣ್ಣ ಅವರ ಹುಕ್ಕುಂ ಇಲ್ಲದೆ, ಅನುಮತಿ ಇಲ್ಲದೇ ಮಾಡಲು ಆಗುತ್ತಾ. ಶಾಸಕಾಂಗ ಪಕ್ಷದ ಸಭೆ ಬಂದಿಲ್ಲ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಹಾಜರಾತಿ ಪುಸ್ತಕ ತೆಗೆದು ನೋಡಲಿ ಕುಮಾರಸ್ವಾಮಿ ಅವರೇ ಬಂದಿಲ್ಲ ಎಂದು ಹೇಳಿದರು.
ಮಂತ್ರಿ ಆಗಿರಬೇಕು ಎಂದಿದ್ದವರು ಟಿಕೆಟ್ ಕೊಡಲ್ಲ ಎಂದರು: ಈ ಹಿಂದೆ ರೇವಣ್ಣ ಅವರು, ಸಂಸದರ ಹೇಳಿಕೆಯಿಂದ ಬೇಸರ ಮಾಡ್ಕೋಬೇಡಿ. ನೀವು ಹಿರಿಯರು, ದೇವೇಗೌಡರಂತವರು, ನಿಮ್ಮ ತೂಕ ನಿಮಗೆ ಗೊತ್ತಿಲ್ಲ ಅಂದರು. ಎ.ಟಿ.ರಾಮಸ್ವಾಮಿ ಖಾಯಂ ಆಗಿ ಮಂತ್ರಿಯಾಗಿ ಇರಬೇಕು ಅಂತ ಅಭಯ್ ಪಾಟೀಲ್ ಹೇಳಿದರು. ಆಗ ರೇವಣ್ಣ ಅವರು ನಾವೇ ಮಂತ್ರಿ ಮಾಡ್ತಿವಿ ಎಂದರು. ಹಿರಿಯರು, ಸಜ್ಜನರು, ಬುದ್ದಿವಂತರು ಮಾರ್ಗದರ್ಶಕರು ಇರುವ ಮನೆ ಮೇಲ್ಮನೆ ಆಗಿದೆ. ಅದರಲ್ಲಿ ಹಾನಸದಿಂದ ಸದಸ್ಯರಾಗಿದ್ದ ರಾಮಸ್ವಾಮಿ ಅವರುಗೆ ಟಿಕೆಟ್ ಕೊಡಲ್ಲ ಅಂತ ಬೆಳಗಾವಿಯಲ್ಲಿ ಒಂದುವರೆ ವರ್ಷದ ಹಿಂದೆ ಹೇಳಿದರು. ಈ ಹೇಳಿಕೆಯನ್ನು ಮನೆಯಲ್ಲಿ ಚರ್ಚೆ ಮಾಡದೆ ಮಾತನಾಡುತ್ತಾರಾ? ನಾನೇನು ಹೇಯ ಕೃತ್ಯ, ಮೋಸ, ಕೋಟಿ ಕೋಟಿ ಭ್ರಷ್ಟಾಚಾರ, ಅಪರಾಧ ಮಾಡಿದ್ದೆ. ಅದಕ್ಕಾಗಿ ಹೀಗೇ ಹೇಳಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್ಗೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ?
ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡ ಸ್ವರೂಪ್ಗೆ ಅನ್ಯಾಯ: ಹಾಸನದಲ್ಲಿ ಸ್ವರೂಪ್ ನೀವೇ ಅಭ್ಯರ್ಥಿ ಅಂತ ಹೇಳಿದರು. ಈಗ ಏನು ನಡೀತಿದೆ ನೋಡಿ. ಹಾಸನ ಜಿಲ್ಲೆಯ ರಾಜಕಾರಣ ಎಲ್ಲಿಗೆ ಬಂದಿದೆ. ಜೆ.ಪಿ. ಭವನದಲ್ಲಿ ಸಭೆ ಕರೆದಿದ್ದರು ಅದು ರದ್ದಾಯ್ತು. ಕುಮಾರಸ್ವಾಮಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲಾ ಅಂತಾರೆ. ಈಗ ಸ್ವರೂಪ್ ಹಾಗೂ ರೇವಣ್ಣ ಕುಟುಂಬದವರು ಬೇರೆ ಬೇರೆ ಕ್ಯಾನ್ವಾಸ್ ಮಾಡುತ್ತಿದ್ದಾರೆ. ಇವರು ಪಕ್ಷ ಉಳಿಸುತ್ತಾರಾ. ಸ್ವರೂಪ್ ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡರು ಅವರು ಪಕ್ಷಕ್ಕೆ ನಿಷ್ಠರಾಗಿದ್ದರು. ಇಂತಹ ಕಷ್ಟದಲ್ಲೂ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಸಾಲ, ಸೋಲ ಮಾಡಿಕೊಂಡ ಓಡಾಡುತ್ತಿದ್ದಾರೆ. ಅಂತಹ ಯುವಕನ ರಾಜಕೀಯ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಬೇರೆ ಯಾರಾದರು ಮಾಡಿದ್ರೆ ಸುಮ್ಮನೆ ಬಿಡುತ್ತಿದ್ದರಾ.? ಎಚ್.ಪಿ.ಸ್ವರೂಪ್ ಅನುಕಂಪದ ಮಾತನಾಡಿ ರೇವಣ್ಣ ಕುಟುಂಬದ ವಿರುದ್ಧ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.