India Gate: ಹಾರ್ದಿಕ್‌ ಕಾಂಗ್ರೆಸ್‌ ತೊರೆದಿದ್ದು ಯಾಕೆ?

By Prashant NatuFirst Published Jun 10, 2022, 11:52 AM IST
Highlights

ಇತ್ತೀಚಿಗೆ ಕಾಂಗ್ರೆಸ್‌ ಪಕ್ಷ ತೊರೆದಿದ್ದ ಪಾಟೀದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ (Hardik Patel) ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸೈನಿಕನಂತೆ ಕೆಲಸ ಮಾಡುವೆ’ ಎಂದು ಹೇಳಿದ್ದಾರೆ.

India Gate Column by Prashant Natu

ಇತ್ತೀಚಿಗೆ ಕಾಂಗ್ರೆಸ್‌ ಪಕ್ಷ ತೊರೆದಿದ್ದ ಪಾಟೀದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ (Hardik Patel) ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಅವರು, ‘ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಸೈನಿಕನಂತೆ ಕೆಲಸ ಮಾಡುವೆ’ ಎಂದು ಹೇಳಿದ್ದಾರೆ.ಪಕ್ಷದಲ್ಲಿ ತನ್ನ ಅವಕಾಶಗಳನ್ನು ಕಸಿಯುತ್ತಿದ್ದಾರೆ ಎಂದು ಆರೋಪಿಸಿ ಅವರು ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಅವರು ಹೊಗಳಿದ್ದರು.

2015ರಲ್ಲಿ ಪಾಟೀದಾರ್‌ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅವರು ನಡೆಸಿದ ಆಂದೋಲನದಿಂದಾಗಿ ಪ್ರಸಿದ್ಧರಾದರು. ಅಲ್ಲದೇ ಈ ಹಿಂದೆ ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ಆದರೆ ಹಾರ್ದಿಕ್‌ರ ಬಿಜೆಪಿ ಪ್ರವೇಶವು ಗುಜರಾತ್‌ ರಾಜಕೀಯದಲ್ಲಿ ಕೆಲವು ಬದಲಾವಣೆ ಸೃಷ್ಟಿಸುವ ಸಾಧ್ಯತೆ ಇದೆ.

ರಾಜ್ಯಸಭೆ ಟಿಕೆಟ್: ಪ್ರಭಾವಿಗಳಿಗೂ ಮೋದಿ ಅರ್ಧಚಂದ್ರ

‘ನಾನು ಮುಂದಿನ ಚುನಾವಣೆಗೆ ಟಿಕೆಟ್‌ ಆಕಾಂಕ್ಷೆ ಇಲ್ಲದೇ ಪಕ್ಷ ಸೇರಿದ್ದೇನೆ. ನಾನು ಪಕ್ಷದಲ್ಲಿ ಸಾಮಾನ್ಯ ಕೆಲಸಗಾರನಂತೆ ಮತ್ತು ಸೈನಿಕನಂತೆ ಕೆಲಸ ಮಾಡುತ್ತೇನೆ. ಕಾಂಗ್ರೆಸ್‌ ಪಕ್ಷ ಜನರ ಭಾವನೆಗಳಿಗೆ ಗೌರವ ನೀಡುತ್ತಿರಲಿಲ್ಲ. ಹಿಂದುಗಳ ವಿಷಯ ಬಂದಾಗ ಕಾಂಗ್ರೆಸ್‌ ದೂರ ಉಳಿಯುತ್ತಿತ್ತು. ಹಾಗಾಗಿ ನಾನು ಪಕ್ಷ ತೊರೆದೆ. ಆದರೆ ಬಿಜೆಪಿ ರಾಷ್ಟ್ರದ ಹಿತ ಚಿಂತನೆಗಾಗಿ ಕೆಲಸ ಮಾಡುತ್ತದೆ. ಅಲ್ಲದೇ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಲು ಇತರ ಪಕ್ಷಗಳ ನಾಯಕರಿಗೆ ಮನವಿ ಮಾಡುತ್ತೇನೆ’ ಎಂದು ಹಾರ್ದಿಕ್‌ ಹೇಳಿದರು.

ಅಲ್ಲದೆ, ದೇಶದ್ರೋಹ ಕೇಸು ರದ್ದುಗೊಳಿಸಲು ಬಿಜೆಪಿ ಸೇರಿರುವುದಾಗಿ ಕೇಳಿಬರ್ತುತಿರುವ ವದಂತಿಗಳನ್ನು ತಿರಸ್ಕರಿಸಿದ ಅವರು, ‘ನಾನು ನಿಜವಾದ ದೇಶಭಕ್ತ. ದೇಶದ್ರೋಹ ಕೇಸನ್ನು ಕೋರ್ಟಿನಲ್ಲೇ ಹೋರಾಡುವೆ’ ಎಂದು ಸ್ಪಷ್ಟಪಡಿಸಿದರು.

2020ರಲ್ಲಿ ಕೊರೋನಾ ಕಾಲದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಾರ್ದಿಕ್‌ ಪಟೇಲ್‌ ತಂದೆ ತೀರಿಕೊಂಡಿದ್ದರು. ಆಗ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡಿ, ಸ್ಥಳೀಯ ರಾಜ್ಯ ನಾಯಕರೂ ಭೇಟಿ ಕೊಡೋದು ಬೇಡ, ಒಂದು ಫೋನ್‌ ಮಾಡಿ ಕೂಡ ಸಾಂತ್ವನ ಹೇಳಲಿಲ್ಲವಂತೆ. ಆದರೆ ಅದೇ ಸಮಯದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ (Amit Shah) ಅನಂದಿ ಬೆನ್‌ ಪಟೇಲ್‌, ಪುರುಷೋತ್ತಮ್‌ ರೂಪಾಲಾ ಎಲ್ಲರೂ ಫೋನ್‌ ಮಾಡಿ ಸಾಂತ್ವನ ಹೇಳಿದ್ದರಂತೆ. ಆಗಲೇ ಹಾರ್ದಿಕ್‌ಗೆ ಕಾಂಗ್ರೆಸ್‌ ಸಹವಾಸ ಸಾಕು ಅನ್ನಿಸಿತ್ತಂತೆ.

ರಾಜ್ಯಸಭೆ ಚುನಾವಣೆ: ಸಿದ್ದು ಲೆಕ್ಕಾಚಾರದಲ್ಲಡಗಿದೆ 2023 ರ ತಂತ್ರ!

ಇನ್ನು ಕಳೆದ ವರ್ಷ ಹಾರ್ದಿಕ್‌ ಪಾಟಿದಾರ ಆಂದೋಲನದಲ್ಲಿ ತನ್ನ ಜೊತೆಗಿದ್ದವರಿಗೆ ಕಾಂಗ್ರೆಸ್‌ ಪದಾಧಿಕಾರಿ ಮಾಡಿ ಎಂದು ಪಟ್ಟಿಕೊಟ್ಟರೆ, ಒಬ್ಬರಿಗೂ ಕೂಡ ಜಾಗ ಕೊಡಲಿಲ್ಲವಂತೆ. ಹೀಗಾಗಿ ಹಾರ್ದಿಕ್‌ ಕಾಂಗ್ರೆಸ್‌ನ ಸಹವಾಸ ಸಾಕು ಎಂದು ಹೊರಗೆ ಬರುವ ತೀರ್ಮಾನ ತೆಗೆದುಕೊಂಡರಂತೆ. ಇದರಲ್ಲಿ ಎರಡು ವಿಷಯಗಳಿವೆ. ಹಾರ್ದಿಕ್‌ ಪಟೇಲ್‌ಗೆ ಭಾಷಣದ ಕಲೆ, ಸೆಳೆಯುವ ಶಕ್ತಿ, ಸಂಘಟನಾ ಕೌಶಲ್ಯದ ಜೊತೆಗೆ ಅತಿಯಾದ ಮಹತ್ವಾಕಾಂಕ್ಷೆ ಇದೆ. ಹೀಗಾಗಿ ತಾಳ್ಮೆ ಇಲ್ಲವೇ ಇಲ್ಲ. ಜೊತೆಗೆ ಮೊದಲೇ ಕಷ್ಟದಲ್ಲಿರುವ ಕಾಂಗ್ರೆಸ್‌ಗೆ ಹೊಸ ಪ್ರತಿಭೆಗಳನ್ನು ಪಳಗಿಸಿ ಉಳಿಸಿ ಬೆಳೆಸುವ ಜಾಣ್ಮೆಯೂ ಇಲ್ಲ, ತಾಳ್ಮೆಯೂ ಇಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!