ಮೋದಿಗೆ ಠಕ್ಕರ್, ಗುಜರಾತ್ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಆಪ್!

By Suvarna NewsFirst Published Aug 2, 2022, 2:19 PM IST
Highlights

ಬಿಜೆಪಿ ಭದ್ರಕೋಟೆ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆಯಲು ಕಳೆದ ಹಲವು ತಿಂಗಳಿನಿಂದ ರಣತಂತ್ರರೂಪಿಸುತ್ತಿದೆ. ಇದೀಗ ಆಮ್ ಆದ್ಮಿ ಪಾರ್ಟಿ ಗುಜರಾತ್ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.

ಗುಜರಾತ್(ಆ.02): ದೆಹಲಿ, ಪಂಜಾಬ್ ಬಳಿಕ ಇದೀಗ ಹಿಮಾಚಲ ಪ್ರದೇಶ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಆಮ್ ಆದ್ಮಿ ಪಾರ್ಟಿ ಹೊಸ ರಣತಂತ್ರ ರೂಪಿಸಿದೆ. ಗುಜರಾತ್ ವಿಧಾಸನಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಆಮ್ ಆದ್ಮಿ ಪಾರ್ಟಿ ಇತರ ಎಲ್ಲಾ ಪಕ್ಷಕ್ಕಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ತನ್ನ ಮೊದಲ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಇಂದಿನಿಂದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಹಾಗೂ ತಂತ್ರಗಾರಿಕೆ ಆರಂಭಿಸಲಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅವರ ಭದ್ರಕೋಟೆಯಲ್ಲಿ ಠಕ್ಕರ್ ನೀಡಿದೆ. ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. 

ಗುಜರಾತ್‌ನ ಧಿಯೋದರ್ ಕ್ಷೇತ್ರದಿಂದ ಭೀಮಾಭಾಯಿ ಚೌಧರಿ ಸ್ಪರ್ಧಿಸಲಿದ್ದಾರೆ. ಇನ್ನು ಸೋಮನಾಥ್ ಕ್ಷೇತ್ರದಿಂದ ಜಗಮ್ಮಾಲ್ ವಾಲಾ ಕಣಕ್ಕಿಳಿಯಲಿದ್ದಾರೆ. ಇನ್ನು ಚೋಟಾ ಉದಯಪುರ ಅರ್ಜುನ್ ರಾಥ್ವಾಗೆ ಆಪ್ ಟಿಕೆಟ್ ನೀಡಿದೆ. ಬೆಚಾರ್ಜಿ ಕ್ಷೇತ್ರದಿಂದ ಸಾಗರ್ ರಾಬ್ರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ರಾಜಕೋಟ್ ಗ್ರಾಮೀಣ ಕ್ಷೇತ್ರದಿಂದ ವಾಶ್ರಮ ಸಗಾತಿಯಾ ಸ್ಪರ್ಧಿಸಲಿದ್ದಾರೆ. ಕಾಮ್ರೆಜ್ ಕ್ಷೇತ್ರದಿಂದ ರಾಮ್ ಧಾದುಕ್ ಆಮ್ ಆದ್ಮಿ ಪಾರ್ಟಿಯಿಂದ ಕಣಕ್ಕಿಳಿದಿದ್ದಾರೆ. ದಕ್ಷಿಣ ರಾಜ್‌ಕೋಟ್‌ ಕ್ಷೇತ್ರದಿಂದ ಶಿವಲಾಲ್ ಬರಾಸಿಯಾ ಸ್ಪರ್ಧಿಸಲಿದ್ದಾರೆ. ಗರಿಯಾಧರ್ ವಿಧಾನಸಭಾ ಕ್ಷೇತ್ರದಿಂದ ಸುಧೀರ್ ವಗಾನಿ ಆಪ್ ಟಿಕೆಟ್ ಪಡೆದಿದ್ದಾರೆ. ಬರ್ದೋಲಿ ವಿಧಾನಸಭಾ ಕ್ಷೇತ್ರದಿಂದ ರಾಜೇಂದ್ರ ಸೊಲಂಕಿ ಸ್ಪರ್ಧಿಸಿದರೆ, ನರೋದಾ ಕ್ಷೇತ್ರದಿಂದ ಒಮ್ ಪ್ರಕಾಶ್ ತಿವಾರಿಗೆ ಆಪ್ ಟಿಕೆಟ್ ನೀಡಿದೆ.

 

ಹಿಮಾಚಲ, ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿನ ಭವಿಷ್ಯ: ಪ್ರಶಾಂತ್ ಕಿಶೋರ್ ಟ್ವೀಟ್‌ನಲ್ಲಿ ಅಚ್ಚರಿಯ ವಿಚಾರ!
 
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಸ್ಥಾನದಿಂದ ಪ್ರಧಾನಿ ಸ್ಥಾನ ಅಲಂಕರಿಸಿದ ಬಳಿಕ ಗುಜರಾತ್‌ನಲ್ಲಿ ಬಿಜೆಪಿ ಭದ್ರಕೋಟೆ ಭೇದಿಸಲು ಕಾಂಗ್ರಸ್ ಹಾಗೂ ಆಮ್ ಆದ್ಮಿ ಪಾರ್ಟಿ ಸತತ ಪ್ರಯತ್ನ ಮಾಡುತ್ತಿದೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ವಿಜಯ್ ರೂಪಾನಿ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಹೈಕಮಾಂಡ್ ವಿಜಯ್ ರೂಪಾನಿ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಆಯ್ಕೆ ಮಾಡಲಾಯಿತು. ಸದ್ಯ ಭೂಪೇಂದ್ರ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿದ್ದಾರೆ. 

ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರಾನೇರ ಸ್ಪರ್ಧೆ ಇತ್ತು. ಈ ಬಾರಿ ಆಮ್ ಆದ್ಮಿ ಪಾರ್ಟಿ ಕೂಡ ಸೇರಿಕೊಂಡಿದೆ. ಗುಜರಾತ್‌ನಲ್ಲಿ ಹೊಸ ದಾಖಲೆ ಬರೆಯಲು ಆಮ್ ಆದ್ಮಿ ಪಾರ್ಟಿ ಮುಂದಾಗಿದೆ.  ಈಗಾಗಲೇ ಭಾರತೀಯ ಟ್ರೈಬಲ್ ಪಾರ್ಟಿ ಆಪ್‌ಗೆ ಬೆಂಬಲ ಸೂಚಿಸಿದೆ.

 

AAP Rally ಗುಜರಾತ್ ಮೇಲೆ ಆಪ್ ಕಣ್ಣು,ಏ.2ಕ್ಕೆ ಅಹಮದಾಬಾದಲ್ಲಿ ರಾರ‍ಯಲಿ!

ಗುಜರಾತ್‌: ಆಪ್‌ ಅಧಿಕಾರಕ್ಕೆ ಬಂದರೆ 3000 ರು. ನಿರುದ್ಯೋಗ ಭತ್ಯೆ ಭರವಸೆ
 300 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿದ್ದ 1 ದಿನದ ತರುವಾಯ, ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರು. ಭತ್ಯೆ ಮತ್ತು ಎಲ್ಲಾ ಯುವಕರಿಗೂ ಉದ್ಯೋಗ ನೀಡುವುದಾಗಿ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ಸೋಮವಾರ ಭರವಸೆ ನೀಡಿದ್ದಾರೆ.

click me!