
ಮೈಸೂರು (ಜ.05): ಜಿ.ಟಿ.ದೇವೇಗೌಡರು ಯಾವ ಪಕ್ಷಕ್ಕೂ ಹೋಗಲ್ಲ, ನಮ್ಮಲ್ಲಿ ನಮ್ಮ ಜೊತೆಯೇ ಇದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜೆಡಿಎಸ್ ಜೊತೆ ಜಿಟಿಡಿ ಮುನಿಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನತಾದಳಕ್ಕೂ ಜಿಟಿಡಿಗೂ ಗಂಡ- ಹೆಂಡತಿ ಸಂಬಂಧ ಇದ್ದ ರೀತಿ ಜಗಳ ಮುನಿಸುಗಳು ನಡೆಯುತ್ತವೆ. ಸಂಬಂಧವೇನೂ ಮುರಿಯುವುದಿಲ್ಲ. ಆಯಾ ಸಂದರ್ಭಕ್ಕೆ ಜಿಟಿಡಿ ಅನ್ನಿಸಿದ್ದನ್ನು ಹೇಳು ತ್ತಾರೆ. ಅಷ್ಟಕ್ಕೆ ನಮ್ಮ ಅವರ ಸಂಬಂಧ ಮುಗಿಯಿತು ಅಂತಾ ಅರ್ಥ ಅಲ್ಲ ಎಂದು ಹೇಳಿದರು.
ಎಚಿಕೆ-ಜಿಟಿಡಿ ಮತ್ತೆ ಅಂತರ: ನಗರದಲ್ಲಿ ಶನಿವಾರ ನಡೆದ ದಿಶಾ ಸಮಿತಿ ಸಭೆ ಹಾಗೂ ಜೆಡಿಎಸ್ ಸಭೆಗೆ ಶಾಸಕ ಜಿ.ಟಿ. ದೇವೇಗೌಡ ಗೈರು ಹಾಜರಾದರು. ಕುಮಾರಸ್ವಾಮಿ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಗೂ ಅವರು ಹಾಜರಾಗಲಿಲ್ಲ. ದಟ್ಟಗಳ್ಳಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಗೂ ಅವರು ಆಗಮಿಸಲಿಲ್ಲ.
ರಸ್ತೆಗಲ್ಲ, ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಹೆಸರಿಡಿ: ಎಚ್.ಡಿ.ಕುಮಾರಸ್ವಾಮಿ ಲೇವಡಿ
ಸವಲತ್ತು ಸಿಗುವಂತೆ ಮಾಡಿ: ಪಿಎಂ ವಿಶ್ವಕರ್ಮ, ಮುದ್ರಾ ಸೇರಿದಂತೆ ಅನೇಕ ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು, ಸವಲತ್ತು ಸಿಗುವಂತೆ ಮಾಡಬೇಕು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ದಿಶಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ದೇಶದ ಪ್ರಗತಿಗೆ, ಬಡವರ ಉದ್ಧಾರಕ್ಕೆ ಪೂರಕವಾದ ಅನೇಕ ಯೋಜನೆಗಳನ್ನು ನೀಡಿದೆ. ವೈಯಕ್ತಿಕವಾಗಿ ಬಡ ಕುಟುಂಬಗಳ ಆರ್ಥಿಕ ಬೆಳವಣಿಗೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಕೇಂದ್ರದ ಕೆಲವು ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗುರಿಯ ಜೊತೆಗೆ ಅರ್ಜಿ ಹಾಕಿದವರು ಅರ್ಹರಿದ್ದರೆ ಪರಿಗಣಿಸಿ. ಕ್ಲಸ್ಟರ್ ಗ್ರೂಪ್ ಗಳನ್ನು ಮಾಡಿಕೊಂಡು ಅನುದಾನ ಪಡೆಯುವಂತೆ ಮಾಡಬೇಕು. ಮುದ್ರಾ ಪಿಎಂ, ವಿಶ್ವಕರ್ಮ ಮನವರಿಕೆ ಮಾಡಿಕೊಡಬೇಕು. ಬಡ ಹೆಣ್ಣು ಮಕ್ಕಳು ಹಾಗೂ ಯುವಕರನ್ನು ಆರ್ಥಿಕವಾಗಿ ಸದೃಢವಾಗಿಸಲು ಅವಕಾಶ ಇದೆ ಎಂದು ಅವರು ತಿಳಿಸಿದರು. ಆದಿವಾಸಿಗಳಿಗೂ ಹಲವು ಕಾರ್ಯಕ್ರಮಗಳಿವೆ. ಅವುಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು. ನಿತ್ಯವೂ ಕೆಲವರಿಗೆ ಒಳ್ಳೆಯದು ಮಾಡಬೇಕು ಎಂಬ ಮನೋಭಾವ ಅಧಿಕಾರಿಗಳಿಗಿರಲಿ. ಯುವಕರು ದಾರಿ ತಪ್ಪುತ್ತಿದ್ದಾರೆ. ಉದ್ಯೋಗವನ್ನು ಎಲ್ಲರಿಗೂ ಕೊಡುವುದು ಕಷ್ಟ. ಕೆಲಸ ಕೊಡುವುದೇ ದೊಡ್ಡ ಸವಾಲಾಗಿದೆ. ಆದ್ದರಿಂದ ಯುವಜನರಿಗೆ ಸ್ವಂತ ಉದ್ಯೋಗ ಮಾಡಲು ತರಬೇತಿ ನೀಡಬೇಕು. ಈನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಶಾಸಕರನ್ನು ಸೆಳೆಯುವ ಷಡ್ಯಂತ್ರ: ಎಚ್ಡಿಕೆ
ಕೇಂದ್ರ ಸರ್ಕಾರದ ಆರ್ಥಿಕ ನೆರವು ಬಳಕೆ ಆಗುವಂತೆ ಮಾಡಬೇಕು. ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಪರಿಹರಿಸಲು ಸಹಕಾರ ಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು. ಜಲ ಜೀವನ್ ಮಿಷನ್ ಯೋಜನೆಯು ಪ್ರತಿ ಮನೆಗೂ ನಲ್ಲಿಯ ಮೂಲಕ ನೀರನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಎಲ್ಲಾ ಹಳ್ಳಿಗಳಿಗೂ ನೀರು ಒದಗಿಸಿ. ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಮೃತ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅನುದಾನ ಬಿಡುಗಡೆ ಆಗಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರಿನ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಉತ್ಪಾದನೆ, ವ್ಯಾಪಾರ ಸೇವೆ ಹಾಗೂ ಕೃಷಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಜಿಲ್ಲೆಗೆ ಈ ವರ್ಷ 2902 ಕೋಟಿ ರು. ಸಾಲ ನೀಡಿರುವ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿ ಪಡೆದ ಅವರು, ಈ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.