ಪರಿಶಿಷ್ಟರ ಕಲ್ಯಾಣಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಬದ್ಧ- ಸಚಿವ ಜೋಶಿ

By Kannadaprabha NewsFirst Published May 7, 2023, 3:17 PM IST
Highlights

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ವಿಧಾನಸಭಾ ಚುನಾವಣಾ ಅಂಗವಾಗಿ ಶುಕ್ರವಾರ ಸಂಜೆ ಬೆಟಗೇರಿಯ ಅಂಬೇಡ್ಕರ್‌ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗದಗ (ಮೇ.7) : ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ವಿಧಾನಸಭಾ ಚುನಾವಣಾ ಅಂಗವಾಗಿ ಶುಕ್ರವಾರ ಸಂಜೆ ಬೆಟಗೇರಿಯ ಅಂಬೇಡ್ಕರ್‌ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ಯಾತಂತ್ರ್ಯ ಸಿಕ್ಕಿದಾಗಿನಿಂದ ಕಾಂಗ್ರೆಸ್‌ ಪರಿಶಿಷ್ಟ, ಹಿಂದುಳಿದ ವರ್ಗಗಳ ಜನರನ್ನು ತನ್ನ ಮತಬ್ಯಾಂಕ್‌ ಮಾಡಿಕೊಂಡು ಬಂದಿದೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಹಿಂದುಳಿದವರಿಗೆ, ಪರಿಶಿಷ್ಟರಿಗೆ ಕಾಂಗ್ರೆಸ್‌ ಬಗ್ಗೆ ತಿರಸ್ಕೃತ ಭಾವನೆ ಬಂದಿದೆ ಎಂದು ತಿಳಿಸಿದರು.

 

ಮೋದಿ ಹೇಳಿದ ಹಾಗೆ ಕೇಳುವ ಸರ್ಕಾರ ಇರಬೇಕಾ? ರಾಹುಲ್ ಬಾಬಾ ಹೇಳಿದಂತೆ ಕೇಳುವ ಸರ್ಕಾರ?

ಡಬಲ್‌ ಇಂಜಿನ್‌ ಸರ್ಕಾರ ಬಡವರ, ಹಿಂದುಳಿದ ವರ್ಗಗಳ, ಪರಿಶಿಷ್ಟರ, ಮಹಿಳೆಯರ, ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟರ ಕಾಲನಿಗಳ ಅಭಿವೃದ್ಧಿಗೆ ಸಾಕಷ್ಟುನೀಡಲಾಗುತ್ತಿದೆ. ಅಮೃತ ಜ್ಯೋತಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಮಾಸಿಕ 75 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗುತ್ತಿದೆ. ಅದರಂತೆ, ಉತ್ತಮ ರಾಜಕೀಯ ಸ್ಥಾನಮಾನ ಕಲ್ಪಿಸಿ ಕೊಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ 27, ದಲಿತರ 10 ಜನಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದರು.

ಅದರಂತೆ, ರಾಜ್ಯ ಸರ್ಕಾರ ಪರಿಶಿಷ್ಟಜಾತಿಗಿದ್ದ ಮೀಸಲಾತಿ ಪ್ರಮಾಣವನ್ನು ಶೇ. 15ರಷ್ಟಿರುವುದನ್ನ ಶೇ.17ಕ್ಕೆ, ಪರಿಶಿಷ್ಟಪಂಗಡದ ಶೇ. 3ರಷ್ಟಿರುವುದನ್ನ ಶೇ.7ಕ್ಕೆ ಹೆಚ್ಚಿಸಿದೆ. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಡಿ ಕೆಟಗೇರಿಯಲ್ಲಿ ಶೇ. 7ರಷ್ಟುಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಆದರೆ, ಸಾಮಾಜಿಕ ನ್ಯಾಯ ನೀಡಿರುವುದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆಂದು ಹೇಳುತ್ತಿದ್ದು, ಸಾಮಾಜಿಕ ನ್ಯಾಯದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗದಗನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತನೀಡಿ ಗೆಲ್ಲಿಸುವ ಮೂಲಕ ಡಬಲ್‌ ಎಂಜಿನ್‌ ಸರ್ಕಾರಗಳಿಗೆ ಶಕ್ತಿ ನೀಡಬೇಕು ಎಂದು ಪ್ರಹ್ಲಾದ್‌ ಜೋಶಿ ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ : ಪ್ರಲ್ಹಾದ್ ಜೋಶಿ ವಿಶ್ವಾಸ

ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್‌.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಮುಖಂಡರಾದ ರಾಜು ಕುರುಡಗಿ, ಹನುಮಂತಪ್ಪ ಅಳವಂಡಿ, ನಿಂಗಪ್ಪ ದೊಡ್ಡಮನಿ, ಉಡಚಪ್ಪ ಹಳ್ಳಿಕೇರಿ, ಮಂಜುನಾಥ ಕೊಟ್ನಿಕಲ…, ಅಮರನಾಥ ಬೆಟಗೇರಿ, ಸತೀಶ್‌ ಹೂಲಿ, ವೆಂಕಟೇಶ ಬಳ್ಳಾರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

click me!