
ಚಿತ್ರದುರ್ಗ (ಜು.9): ಕೆಲವರು ನನ್ನನ್ನು ಭಾವಿ ಮುಖ್ಯಮಂತ್ರಿ ಅಂತ ಕರೆಯುತ್ತಿರುವುದೇ ನನಗೆ ಸಮಸ್ಯೆಯಾಗಿದೆ. ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯವಲ್ಲ, ಮುಖಂಡರು ಜನರಿಗೆ ಹತ್ತಿರವಾದಾಗ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ನಡೆದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅವರು ತಮ್ಮ ಭಾಷಣದಲ್ಲಿ ಭಾವಿ ಸಿಎಂ ವಿಜಯೇಂದ್ರ ಎಂದು ಉಲ್ಲೇಖಿಸಿದರು. ಈ ಸಂಗತಿಯನ್ನು ಆ ಬಳಿಕ ಮಾತನಾಡಿದ ವಿಜಯೇಂದ್ರ ಅವರು ಪ್ರಸ್ತಾಪಿಸಿ, ‘ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯ ಅಲ್ಲ. ಮತದಾರರಿಗೆ ನಮ್ಮ ಮೇಲೆ ವಿಶ್ವಾಸ ಮೂಡುವಂತಹ ಕೆಲಸದ ಕಡೆ ಗಮನ ಹರಿಸಬೇಕು. ಕಾರ್ಯಕರ್ತರು ಹಾಗೂ ಮುಖಂಡರು ಜನರಿಗೆ ಹತ್ತಿರ ಆಗಬೇಕು. ಆಗ ಮಾತ್ರ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದ ಮೇಲಷ್ಟೆ ಉಳಿದವು ಚರ್ಚೆಯಾಗುತ್ತವೆ’ ಎಂದು ಹೇಳಿದರು.
ಈ ಹಿಂದೆ ವಿಧಾನ ಪರಿಷತ್ಗೆ ಚುನಾವಣೆ ನಡೆದಾಗ ವಾಗ್ಮಿಗಳು, ಚಿಂತಕರು, ಸಮಾಜ ಸೇವಕರು ಪ್ರವೇಶ ಮಾಡುತ್ತಿದ್ದರು. ಈಗ ಅದು ಹಣವಂತರ ಚಾವಡಿಯಾಗಿದೆ. ವಿಧಾನ ಸಭೆಯಲ್ಲಿ ಶಾಸಕರು ಮಾಡಿದ ಕಾನೂನು, ನಿರ್ಣಯಗಳನ್ನು ವಿಧಾನ ಪರಿಷತ್ಗೆ ಕಳುಹಿಸಲಾಗುತ್ತದೆ. ಅದನ್ನು ಅವರು ಸರಿಯಾಗಿ ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸುತ್ತಿದ್ದರು. ಇದು ರಾಜ್ಯಕ್ಕೆ ಅಗತ್ಯವೇ ಎಂದು ಚರ್ಚೆಯನ್ನು ಮಾಡುವುದರ ಮೂಲಕ ಪಾಸಾಗುತ್ತಿತ್ತು. ಆದರೆ, ಈಗ ಚರ್ಚೆಯ ಸ್ವರೂಪ ಬದಲಾಗಿದೆ. ವಿಧಾನ ಪರಿಷತ್ ಎಂದರೆ ಹಣವಂತರ ಚಾವಡಿಯಾಗಿದೆ. ಹಣ ಇದ್ದವರು ಇಲ್ಲಿಗೆ ಬಂದು ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಆಗ್ನೇಯ ಕ್ಷೇತ್ರದಲ್ಲಿ 8 ಬಾರಿ ಗೆಲುವು:
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜನಸಂಘ ಹಾಗೂ ಬಿಜೆಪಿ 8 ಬಾರಿ ಗೆಲುವನ್ನು ಸಾಧಿಸಿದೆ. ವಿಧಾನ ಪರಿಷತ್ನಲ್ಲಿ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಬುದ್ಧಿವಂತರು ಇರಬೇಕಾಗಿದೆ. ಬಿಜೆಪಿ ತನ್ನ ಕಾರ್ಯಕರ್ತ ಕೆ.ಎಂ.ಸುರೇಶ್ ಅವರನ್ನು ಅಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆ 5 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯವನ್ನು ಸಾಧಿಸಿದೆ ಎಂದರು.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಗೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೊರಲಾಗಿದ್ದು, ಅವರಿಂದ ಪೂರಕ ಪ್ರತಿಕ್ರಿಯೆ ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮುಂದಿನ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಪಕ್ಷದ ನಾಯಕರ ಮೇಲೆ ವಿಶ್ವಾಸ, ನಂಬಿಕೆ ಇಡಬೇಕಿದೆ ಎಂದು ಹೇಳಿದರು.
ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಶಿವಯೋಗಿಸ್ವಾಮಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.