ರಾಜ್ಯದಲ್ಲಿ ಕಾಂಗ್ರೆಸ್‌ ಅವಸಾನದತ್ತ ಸಾಗಿದೆ: ರಮೇಶ ಜಾರಕಿಹೊಳಿ

By Kannadaprabha NewsFirst Published Mar 26, 2023, 8:32 PM IST
Highlights

ದಲಿತ ಸಮುದಾಯವನ್ನು ಮತಬ್ಯಾಂಕ್‌ ಆಗಿಸಿಕೊಂಡ ಕಾಂಗ್ರೆಸ್‌ ಪಕ್ಷ ಈ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿಲ್ಲ. ನಾಯಕರು ಬೆಳೆಯಲು ಅವಕಾಶ ಕೊಡದೆ, ಕೆಲವರ ಕಪಿಮುಷ್ಠಿಯಲ್ಲಿ ಪಕ್ಷವನ್ನು ಸಿಲುಕಿಸಿ ನಿರ್ನಾಮ ಮಾಡುತ್ತಿದ್ದಾರೆ ಎಂದ ರಮೇಶ ಜಾರಕಿಹೊಳಿ. 

ಗೋಕಾಕ(ಮಾ.26): ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸೋಲಿಸಿದ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಕರೆ ನೀಡಿದರು. ಶನಿವಾರ, ನಗರದ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಡೆದ ದಲಿತ ಸಮಾವೇಶ ಉದ್ಘಾಟಿಸಿ ಮಾತನಾಡಿ, ದಲಿತ ಸಮುದಾಯವನ್ನು ಮತಬ್ಯಾಂಕ್‌ ಆಗಿಸಿಕೊಂಡ ಕಾಂಗ್ರೆಸ್‌ ಪಕ್ಷ ಈ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿಲ್ಲ. ನಾಯಕರು ಬೆಳೆಯಲು ಅವಕಾಶ ಕೊಡದೆ, ಕೆಲವರ ಕಪಿಮುಷ್ಠಿಯಲ್ಲಿ ಪಕ್ಷವನ್ನು ಸಿಲುಕಿಸಿ ನಿರ್ನಾಮ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅವಸಾನದತ್ತ ಸಾಗಿದ್ದು, ಇದಕ್ಕೆ ಕಾರಣ ಡಿ.ಕೆ.ಶಿವಕುಮಾರ ಕಾರಣ. ಡಿಕೆಶಿ ತಮ್ಮ ಕ್ಷೇತ್ರದಲ್ಲಿ ಮಾತ್ರ ಪ್ರಭಾವ ಹೊಂದಿದ್ದು, ರಾಜ್ಯದಲ್ಲೆಲ್ಲೂ ಪ್ರಭಾವವಿಲ್ಲ. ದೇವರ ಆಶೀರ್ವಾದ, ನಿಮ್ಮೆಲ್ಲರ ಶಕ್ತಿಯಿಂದ ಇಂದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನನಗೆ ಶಕ್ತಿ ಬಂದಿದೆ. ಅರಭಾಂವಿ ಮತ್ತು ಗೋಕಾಕ್‌ ಕ್ಷೇತ್ರಗಳು ಜಾತ್ಯಾತೀತ ಕ್ಷೇತ್ರಗಳಾಗಿದ್ದು, ಎಲ್ಲ ಸಮುದಾಯದವರೂ ಆಶೀರ್ವದಿಸುತ್ತಿದ್ದಾರೆ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲೆಂದು ಮನವಿ ಮಾಡಿದರು.

ರಾಜಕಾರಣದಲ್ಲಿ ಹಿಂದೂಗಳ ಅವಹೇಳನ ಒಂದು ಫ್ಯಾಶನ್‌: ಯತ್ನಾಳ್‌

ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ಬಿಜೆಪಿ ಜಗತ್ತಿನಲ್ಲೇ ಬಲಿಷ್ಠವಾಗುತ್ತಿದೆ. ಎಲ್ಲ ಸಮುದಾಯಗಳ ಅಭಿವೃದ್ಧಿಪರ ಯೋಜನೆಗಳೊಂದಿಗೆ ಮೋದಿಯವರು ಶ್ರಮಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಒಳಮೀಸಲಾತಿ ನೀಡಿ ದಲಿತರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಎಲ್ಲರೂ ಬೆಂಬಲಿಸುವಂತೆ ವಿನಂತಿಸಿದರು.

ನನ್ನ ಅಧಿಕಾರಿ ಅವಧಿಯಲ್ಲಿ ಅರಭಾಂವಿ, ಗೋಕಾಕ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ರಾಜ್ಯಾದ್ಯಂತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರೈಸಿ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಶ್ರಮಿಸಿದ್ದು ಮುಂದಿನ ದಿನಗಳಲ್ಲೂ ಉಳಿದ ಯೋಜನೆಗಳನ್ನು ಕಾರ್ಯಗತ ಮಾಡಿ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದು ಹೇಳಿದರು.

ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನನ್ನ ಹಾಗೂ ಸಹೋದರ ಬಾಲಚಂದ್ರ ಅವರ ಪಾತ್ರ ಮಹತ್ವದ್ದಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ನಮಗೆ ಆಶೀರ್ವದಿಸಿ ಶಕ್ತಿ ನೀಡುವಂತೆ ಮನವಿ ಮಾಡಿದರು.

ಶಿಷ್ಯ ಮಹೇಶ್‌ ಕುಮಟಳ್ಳಿಗೆ ಅಥಣಿ ಟಿಕೆಟ್ ಕೊಡಿಸಲು ಜಾರಕಿಹೊಳಿ ಶತಪ್ರಯತ್ನ!

ದಲಿತ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಅಶೋಕ ಅಸೂದೆ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್‌ ಅವರು ಸಮುದಾಯಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಮಾರ್ಗದಲ್ಲಯೇ ರಮೇಶ ಜಾರಕಿಹೊಳಿ ಸಹ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನಸ್ನೇಹಿ ಆಗಿರುವ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಆರಿಸಿ ಅವರ ಶಕ್ತಿ ಹೆಚ್ಚಿಸುವಂತೆ ಕರೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೀರಭದ್ರ ಗಂಡವ್ವಗೋಳ, ಮಂಜುನಾಥ ಮಾವರಕರ, ತಳದಪ್ಪ ಅಮ್ಮನಗಿ, ಎಂ.ಆರ್‌.ಭಜಂತ್ರಿ, ನಿವೃತ್ತ ಪೊಲೀಸ್‌ ಅಧಿಕಾರಿ ಶಿಂಗ್ಯಾಗೋಳ, ಸುಧೀರ ಜೊಡಟ್ಟಿ, ಹನಮಂತ ಗಾಡಿವಡ್ಡರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಹನಮಂತ ಕವಲಗಿ, ಸುಂದ್ರವ್ವ ಕಟ್ಟಿಮನಿ, ಅಜೀತ ಹರಿಜನ, ನಟರಾಜ ಶೆಟ್ಟೆನ್ನವರ, ಭರಮಣ್ಣ ಮುತ್ತೆನ್ನವರ, ಮಹಾದೇವ ಜಟ್ಟೆಪ್ಪನವರ, ಮಲ್ಲಪ್ಪ ಕಾಂಬಳೆ, ಮಯೂರ ತಳವಾರ, ವೀರಭದ್ರ ಮೈಲನ್ನವರ, ವಿಠ್ಠಲ ಸಣ್ಣಕ್ಕಿ, ಅಶೋಕ ಮೇಸ್ತ್ರಿ, ಕಾಡಪ್ಪ ಮೇಸ್ತ್ರಿ, ರಾಮಕೃಷ್ಣ ಮನ್ನಿಕೇರಿ, ಲಕ್ಷ್ಮಣ ಕಡೆಪ್ಪಗೊಳ, ದಯಾನಂದ ಗುಡಾಜ, ಸಂತೋಷ ಬೂದಿಹಾಳ, ಎಲ್‌.ಸಿ.ಗಾಡಿವಡ್ಡರ, ಮಂಜುನಾಥ ಅಮ್ಮಣಗಿ ಇದ್ದರು.

click me!