
ಕಲಬುರಗಿ(ಡಿ.07): ಸ್ವಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡುವುದನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಶಕಕ್ಕೂ ಹೆಚ್ಚು ಕಾಲ ಸೈಕಲ್ ತುಳಿಯುವ ಮೂಲಕ ಪಕ್ಷ ಕಟ್ಟಿ ಬೆಳೆಸಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ವಿರುದ್ಧ ಧ್ವನಿ ಎತ್ತುವುದು ಸರಿಯಲ್ಲ. ನಾವು ಹೋರಾಟ ಯಾರ ವಿರುದ್ಧ ಮಾಡಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಮಾತೆತ್ತಿದ್ದರೇ ಹಿಂದುತ್ವದ ಬಗ್ಗೆ ಮಾತನಾಡುವವರು ತಾವು ಯಾವ ಪಕ್ಕದಲ್ಲಿ ಇದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಚುನಾವಣೆ: ರೇಣುಕಾಚಾರ್ಯ
ಕೆಲವು ವಿಷಯಗಳ ಕುರಿತು ಚರ್ಚಿಸಲು ದೆಹಲಿ ಯತ್ತ ಹೋಗುತ್ತೇವೆ, ಕಾದು ನೋಡಿ. ಈಗಲೇ ಎಲ್ಲವನ್ನು ಬಹಿರಂಗಪ ಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ನೀತಿ ಗಳ ವಿರುದ್ಧ ಒಂದಾಗಿ ಹೋರಾಟ ಮಾಡಿ ಬಿಜೆಪಿ ಜೊತೆ ಇರಬೇಕಾದವರು, ಅವರದ್ದೇ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಸುತ್ತಾಡುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಕ್ಫ್ ವಿರುದ್ಧ ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ವಿಜಯೇಂದ್ರ ವ್ಯಕ್ತಿಯಲ್ಲ. ಬದಲಾಗಿ ಅವರು ನಮ್ಮ ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕಾದರೆ ಯತ್ನಾಳ್ ಅವರು ನಡುವಳಿಕೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ದೀನ ದಲಿತರ, ರೈತರ, ಮಠ ಮಾನ್ಯಗಳ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದೆ. ನಮ್ಮ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಇಲ್ಲಿ ಆಗುತ್ತಿರುವ ವಾಸ್ತವಾಂಶವನ್ನು ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಜಾರಕಿಹೊಳಿ ವೈಲೆಂಟ್, ನಾನು ಸೈಲೆಂಟ್: ಯತ್ನಾಳ್
ಹುಬ್ಬಳ್ಳಿ: ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಯನ್ನು ಪರ್ಮನೆಂಟ್ ಆಗಿ ನಿಲ್ಲಿಸಿ ಎಂದು ದೆಹಲಿ ನಾಯಕರಿಂದ ಸೂಚನೆ ಪಡೆದು ಬಂದಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಚುಕ್ಕಾಣಿಯನ್ನು ಹಸ್ತಾಂತರ ಮಾಡುವ ಸುಳಿವು ನೀಡಿದ್ದಾರೆ. 'ಇನ್ಮೇಲೆ ನಾನು ಸೈಲೆಂಟ್ ಆಗುತ್ತೇನೆ, ಶಾಸಕ ರಮೇಶ್ ಜಾರಕಿಹೊಳಿ ವೈಲೆಂಟ್ ಆಗುತ್ತಾರೆ' ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಕೇಂದ್ರ ಬರೆಯುತ್ತೇವೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೀತಿವಿ, ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲವೇ ಅಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವುದೇ ನಮ್ಮ ಟಾರ್ಗೆಟ್. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡುವ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.
ಶಿಗ್ಗಾಂವಿ ಸೋಲಿಗೆ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ: ಮಾಜಿ ಸಚಿವ ರೇಣುಕಾಚಾರ್ಯ
ದೆಹಲಿಯಿಂದ ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಯತ್ನಾಳ್, ಸುದ್ದಿಗಾರರ ಜೊತೆ ಮಾತನಾಡಿದರು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಒಪ್ಪಲ್ಲ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, 'ಇನ್ನು ಮುಂದೆ ನಾನು ಸೈಲೆಂಟ್ ಆಗಿ ಇರುತ್ತೇನೆ. ರಮೇಶ್ ಜಾರಕಿಹೊಳಿಯವರು ವೈಲೆಂಟ್ ಆಗುತ್ತಾರೆ' ಎಂದರು. ನಮ್ಮ ಮುಂದಿನ ಹೋರಾಟ ಕುರಿತು ನಾವು ಪ್ಲಾನ್ ಮಾಡಿದ್ದೇವೆ. ಅದರಂತೆ ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ನಾವು ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ ಎಂದರು.
ನನ್ನ ಮೇಲೆ ಪ್ರೀತಿ ಇದೆ:
ನನ್ನ ಮೇಲೆ ಹೈಕಮಾಂಡ್ ಗೆ ಯಾವಾಗಲೂ ಪ್ರೀತಿ ಇದ್ದೇ ಇದೆ. ಯತ್ನಾಳ್ ನನ್ನು ಮುಗಿಸುತ್ತೇವೆ ಎನ್ನುವವರಿಂದ ಏನೂ ಆಗಲ್ಲ.ಯಾರಿಂದಲೂ ನನಗೆ ಏನೂ ಮಾಡಲು ಆಗುವುದಿಲ್ಲ. ಯಾರಾರು ಉತ್ತರ ಕೊಡುತ್ತಾರೋ ನೋಡೋಣ. ಅವರೆಲ್ಲರಿಗೂ ಉತ್ತರ ಕೊಡಲು ನಾನು ಸಿದ್ದ. ನನಗೆ ಅಂಜಿಕೆಯಿಲ್ಲ, ಅಳುಕಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.