ಕಾಂಗ್ರೆಸ್‌ ಸರ್ಕಾರ 5 ವರ್ಷ ಇರಲು ಸಾಧ್ಯವೇ ಇಲ್ಲ: ಈಶ್ವರಪ್ಪ

By Kannadaprabha NewsFirst Published Nov 6, 2023, 4:15 AM IST
Highlights

ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಮಂತ್ರಿಗಳು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ಇದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹಪಾಲಿದೆ ಎಂದು ನೇರ ಆರೋಪ ಮಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ 

ಹಾವೇರಿ(ನ.06):  ಕಾಂಗ್ರೆಸ್‌ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವೇ ಇಲ್ಲ. ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಮಂತ್ರಿಗಳು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ಇದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹಪಾಲಿದೆ ಎಂದು ನೇರ ಆರೋಪ ಮಾಡಿದರು.

ಡಿ.ಕೆ.ಶಿವಕುಮಾರ್ ಮೇಲೆ ಗುತ್ತಿಗೆದಾರರ ಸಂಘದ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಅಂತ ಹೇಳಿದ್ದೆ. ಡಿ.ಕೆ.ಶಿವಕುಮಾರ್‌ ಹೆಸರಲ್ಲಿ ಎಂಜಿನಿಯರ್‌ ಪ್ರಹ್ಲಾದ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಂಥವರು ಹಣ ಕೊಡುತ್ತಿದ್ದಾರೆ ಅಂತ ಹೇಳಿದ ಮೇಲೂ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟ ಹಾಗೆ ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡುವ ವೇಳೆ ಕಿರಿಕ್, ನಿಮಗೊಂದು ಸ್ಕೀಂ ಮಾಡೋ ಚಿಂತನೆ ಇದೆ ಎಂದ ಕುಡುಕ!

ಮುಖ್ಯಮಂತ್ರಿ ಗದ್ದುಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ತಾವೇ ಮುಂದಿನ 5 ವರ್ಷ ಮುಖ್ಯಮಂತ್ರಿ ಅಂದರು. ಅದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಒಂದು ಕಡೆ ಇಷ್ಟು ದಿನ ಸಿದ್ದರಾಮಯ್ಯ ಪರ ಇದ್ದ ಕೆ.ಎನ್.ರಾಜಣ್ಣ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂದರು. ಪ್ರಿಯಾಂಕ್‌ ಖರ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಮುಖ್ಯಮಂತ್ರಿ ಅಂದರು. ಕಾಂಗ್ರೆಸ್‌ನಲ್ಲಿ ಎಷ್ಟು ಗುಂಪಿದೆ ಎಂಬುದೇ ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಎಲ್ಲೇ ಹೋದರೂ ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಳೆ ನಾಶ ಆಗಿದೆ. ಆದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಯಾವುದೇ ಮಂತ್ರಿ ಒಂದು ಹೊಲಕ್ಕೂ ಹೋಗಿಲ್ಲ, ರೈತನ ಬಳಿ ಮಾತಾಡಿಲ್ಲ. ಸರ್ವೇ ಮಾಡುವಲ್ಲೂ ವಿಳಂಬ ಮಾಡಿ, ನಂತರ ಬರ ಘೋಷಣೆಗೂ ತಡ ಮಾಡಿದರು. ಗ್ಯಾರಂಟಿಗಳಿಗೆ ಹಣ ಕೊಡುತ್ತೇವೆ ಎಂದು ಅಲ್ಲೂ ಫೇಲ್ ಆಗಿದ್ದಾರೆ. ರೈತರಿಗೆ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ರೈತರಿಗೆ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

click me!