ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ, ಬೇಜವಾಬ್ದಾರಿ ಮಿನಿಸ್ಟರ್‌ಗಳ ಡಾನ್ಸ್‌ಗೆ ಸಿದ್ದು ಕಿಡಿ

By Girish GoudarFirst Published Sep 10, 2022, 11:45 PM IST
Highlights

ಮಳೆಯಿಂದ ಜನ ಸಾಯ್ತಾ ಇದ್ದಾರೆ, ಮಂತ್ರಿಗಳು ಡ್ಯಾನ್ಸ್ ಮಾಡ್ತಾರೆ ಎಂದ ಸಿದ್ದರಾಮಯ್ಯ 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಸೆ.10): ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ, ಜನ ಪ್ರವಾಹದಿಂದ ಸಾಯ್ತಿದ್ದಾರೆ, ನರಳ್ತಿದ್ದಾರೆ, ಡಾನ್ಸ್ ಮಾಡ್ತಾವೆ ಅವು ಮಿನಿಸ್ಟರ್‌ಗಳು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಗರ ವಿರುದ್ದ ಕೆಂಡಾಮಂಡಲರಾಗಿದ್ದಾರೆ.  ಇಂದು(ಶನಿವಾರ) ಜಿಲ್ಲೆಯ ಬಾದಾಮಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಅವರಿಗೆ ಜನರ ಬಗ್ಗೆ ಸ್ವಲ್ಪವಾದ್ರೂ ಕಾಳಜಿ, ಮಾನ ಮರ್ಯಾದೆ ಇದೆಯಾ, ಸಂತೋಷದ ಕಾಲಾನಾ ಇದು, ಖುಷಿಪಡೋ ಕಾಲಾನಾ ಇದು, ಮೊನ್ನೆಯಷ್ಟೇ ಪಾಪ, ಉಮೇಶ ಕತ್ತಿ ಸತ್ತು ಹೋಗಿದ್ದಾರೆ. ಇವಕ್ಕೆ ಸ್ವಲ್ಪನಾದರೂ ಜವಾಬ್ದಾರಿ ಅನ್ನೋದೆ ಇಲ್ಲ, ಇವರೆಲ್ಲಾ ಬೇಜವಾಬ್ದಾರಿ ಮಂತ್ರಿಗಳು ಎಂದು ಜರಿದರು.

Latest Videos

ಸ್ಮೃತಿ ಇರಾನಿಗೆ ಜವಾಬ್ದಾರಿ ಇಲ್ಲ; ಸಿದ್ದರಾಮಯ್ಯ ವಾಗ್ದಾಳಿ 

ಸ್ಮೃತಿ ಇರಾನಿಗೆ, ಪಾಪ ಜವಾಬ್ದಾರಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಜಿಲ್ಲೆಯ ಚೊಳಚಗುಡ್ಡ ಗ್ರಾಮದ ಸೇತುವೆ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು ರಾಹುಲ್ ಗಾಂಧಿ ದೇಶ ಒಡೆಯುವವರ ಜೊತೆ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆಂಬ ಕೇಂದ್ರ ಸಚಿವೆ ಸ್ಮೃತಿ ಇರಾಣಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ: ವಿಡಿಯೋ ಬಿಟ್ಟ ಕಾಂಗ್ರೆಸ್

ಇಂದು ಜನರನ್ನು ಒಗ್ಗೂಡಿಸುವ ಅಗತ್ಯವಿದೆ. ದೇಶದ ಐಕ್ಯತೆ ಬಹಳ ಮುಖ್ಯ. ಜನಗಳ ಮನಸ್ಸನ್ನು ಒಗ್ಗೂಡಿಸು ವುದು ಬಹಳ ಮುಖ್ಯ ಎಂದರು. ದೇಶದಲ್ಲಿಂದು ಜನಗಳು ಬಹಳ ಆತಂಕದಲ್ಲಿ, ಭಯದಿಂದ ಬದುಕುವ ವಾತವರಣವಿದೆ. ಅದಕ್ಕೆ ಜನರ ಮನಸ್ಸುಗಳನ್ನ ಒಗ್ಗೂಡಿಸುವುದಕ್ಕೆ ನಿಮ್ಮ ಜೊತೆ ನಾವಿದ್ದೇವೆ ಅನ್ನೋದಕ್ಕೆ ಯಾತ್ರೆ ಆರಂಭಿಸಿದ್ದಾರೆ ಎಂದರು. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆ ಇದೆ. ಇದೆಲ್ಲ ಜನರಿಗೆ ಗೊತ್ತಾಗಬೇಕಲ್ಲ,ಜನರಿಗೆ ಜಾಗೃತಿ ಮೂಡಿಸುವುದಕ್ಕೆ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ ಎಂದರು.

ಬಿಜೆಪಿಯವರ ಬ್ಲ್ಯಾಕ್ ಮೇಲ್ ತಂತ್ರ ನಡೆಯಲ್ಲ

ಕಾಂಗ್ರೆಸ್ ಅಧಿಕಾರ ಅವಧಿಯ ಹಗರಣಗಳನ್ನೆಲ್ಲ ಬಯಲಿಗೆಳೆಯುತ್ತೇವೆ ಎಂದ ಬಿಜೆಪಿ ನಾಯಕರ ಹೇಳಿಕೆಗೆ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿಯೇ ತಿರುಗೇಟು ನೀಡಿದರು. ನಾವು ಅವರಿಗೆ 40% ಸರ್ಕಾರ ಅನ್ಲಿಕ್ಕೆ ಶುರುಮಾಡಿದ್ವಲ್ಲ, ಅದಕ್ಕೆ ಇವರೆಲ್ಲ ಹೀಗೆ ಹೇಳೋಕೆ ಶುರು ಮಾಡಿದ್ದಾರೆ.

ಇವರು ಅಧಿಕಾರಕ್ಕೆ ಬಂದು ಎಷ್ಟು ದಿನ ಆಯ್ತು..? ತನಿಖೆ ಮಾಡಬೇಡಿ ಎಂದು ನಾವು ಕೈ ಹಿಡ್ಕೊಂಡಿದ್ವಾ ಇವರನ್ನಾ...?ಯಾರಿಗೆ ಬ್ಲ್ಯಾಕ್ ಮೇಲ್ ಮಾಡ್ತೀರಿ ನೀವು ಎಂದು ಗರಂ ಆಗಿ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು. ಮೂರು ವರ್ಷದಿಂದ ನೀವೇ ಇದ್ರಲ್ಲ ಅಧಿಕಾರದಲ್ಲಿ, ತನಿಖೆ ಮಾಡಿಸಬೇಕಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಜನರನ್ನ ಡೈವರ್ಟ್ ಮಾಡಲು ಬಿಜೆಪಿಯಿಂದ ಅರ್ಕಾವತಿ ಹಗರಣ ಪ್ರಸ್ತಾಪ

ಇನ್ನು ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಿ ಅರ್ಕಾವತಿ ಹಗರಣ ಹಾಗೂ ಸೋಲಾರ್ ಹಗರಣ ಬಯಲಿಗೆಳೆಯುತ್ತೇವೆಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇದು ಜನ್ರ ಮನಸ್ಸನ್ನ ಡೈವರ್ಟ್ ಮಾಡೋಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಚಾಚಾರ ಬಹಳ ವ್ಯಾಪಕವಾಗಿ ಬಿಟ್ಟಿದೆ. ಅದರ ಬಗ್ಗೆ ಧ್ವನಿ ಎತ್ತುತ್ತೇವೆ ಅಂತಾ ನಾವು ಹೇಳಿದ್ದಿವಲ್ಲ ಅದಕ್ಕೆ ಜನ್ರ ಅಟೆನ್ಶನ್ ಡೈವರ್ಟ್ ಮಾಡಲು ಇವೆಲ್ಲ ಹೇಳ್ತಿದ್ದಾರೆ. ನಾವು ಇವರನ್ನ ಹಿಡ್ಕೊಂಡಿದ್ದೀವಾ...? ಸರ್ಕಾರ ಮಾಡ್ತಿರೋರು ಇವರೇ ಅಲ್ವಾ...?ಅರ್ಕಾವತಿದಾದ್ರೂ ಹೇಳಬಹುದು, ಸೋಲಾರ್ ದಾದ್ರೂ ಹೇಳಬಹುದು, ತನಿಖೆ ಮಾಡಿ, ಯಾರ ಬೇಡ ಅಂದೋರು ಎಂದರು.

ಅಡಬಿಟ್ಟಿ ಮತ್ತು ಲಂಚದ ಹಣದಲ್ಲಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ: ಗುಡುಗಿದ ಸಿದ್ದು

ಬಿಜೆಪಿಗರಿಗೆ ಸಿದ್ದರಾಮಯ್ಯ ನೇರ ಸವಾಲ್

ಇನ್ನು 2006 ರಿಂದ ಇವರೇ ಅಧಿಕಾರದಲ್ಲಿರೋದು, ನಾವು ಐದು ವರ್ಷ ಮಾತ್ರ ಇದ್ವಿ, ಹೀಗಾಗಿ 2006 ರಿಂದ ಇಲ್ಲಿವರೆಗೂ ಎಲ್ಲವನ್ನು ತನಿಖೆ ಮಾಡಿಸೋಣ, ಇವರು ಯಾವಾಗಿಂದ ಅಧಿಕಾರಕ್ಕೆ ಬಂದ್ರೋ ಅವಾಗಿಂದ ತನಿಖೆ ಮಾಡಿಸೋಣ. ರಾಜ್ಯದ ಜನ್ರಿಗೆ ಸತ್ಯ ಗೊತ್ತಾಗಲಿ ಎಂದ ಅವರು, 2006 ರಿಂದ ಇವರು 16 ವರ್ಷ ಅಧಿಕಾರದಲ್ಲಿ ಇದ್ದಾರೆ. ಮಧ್ಯ ನಾವು‌ ಐದು ವರ್ಷ ಅಧಿಕಾರದಲ್ಲಿ ಇದ್ದೇವು. ಎಲ್ಲವೂ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು.

ಮತ್ತೇ ಸಿಎಂ ಆಸೆ ಬಿಚ್ಚಿಟ್ಟ ಸಿದ್ದು

ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರದ ಪ್ರವಾಸದ ವೇಳೆ ಕೆಲವರು ಮನೆಗಳನ್ನು ನೀಡಿ ಶಾಶ್ವತವಾಗಿ ಗ್ರಾಮ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜನರಿಗೆ ಮಾತನಾಡುತ್ತಾ ಸಿದ್ದರಾಮಯ್ಯ, ಈ ಸರ್ಕಾರದಲ್ಲಿ ದುಡ್ಡಿಲ್ಲ, ಇನ್ನು ಆರೇಳು ತಿಂಗಳಾದ್ರೆ ನಮ್ಮದೇ ಸರ್ಕಾರ ಬರುತ್ತೆ, ಆಗ ನಿಮ್ಮ ಕೆಲಸ ಮಾಡೋಣ ಎನ್ನುವ ಮೂಲಕ ಮತ್ತೇ ಸಿಎಂ ಕನಸಿನ ಮಾತುಗಳನ್ನಾಡಿದರು, ಇವುಗಳ ಮಧ್ಯೆ ಅಭಿಮಾನಿಯೊಬ್ಬ ಸಿದ್ದರಾಮಯ್ಯನವರು ಸಿಎಂ ಆದ್ರೆ ಗ್ರಾಮ ಸಂಪೂರ್ಣ ಶಿಫ್ಟ್ ಮಾಡ್ತಾರೆ, ಇದಕ್ಕೆ ನಸುನಕ್ಕ ಸಿದ್ದು, ಹೌದು ಮಾಡಿಕೊಡತೀನಿ ಎನ್ನುವ ಮೂಲಕ ಮತ್ತೇ ಸಿಎಂ ಆಗುವ ಮಾತಿಗೆ ಪುಷ್ಟಿ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ & ಪರಿಶೀಲನೆ 

ಇನ್ನು ಎರಡು ದಿನಗಳ ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲ ದಿನ ಬಾದಾಮಿ ತಾಲೂಕಿನಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿದರು. ಗೋವನಕೊಪ್ಪ, ಕಿತ್ತಲಿ, ಹೆಬ್ಬಳ್ಳಿ, ಚೊಳಚಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಜಲಾವೃತ ಬೆಳೆಗಳು ಹಾಗೂ ಮನೆಗಳ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು, ಶೀಘ್ರ ಪರಿಹಾರ ನೀಡುವಂತೆ ಸೂಚಿಸಿದರು.
 

click me!