ಕುತ್ತಿಗೆ ಕೊಯ್ದು ಹೋದವ ನೀನು: ಸಚಿವ ನಾರಾಯಣಗೌಡ ವಿರುದ್ಧ ಎಚ್‌ಡಿಕೆ ಆಕ್ರೋಶ

By Govindaraj SFirst Published Apr 2, 2023, 4:20 AM IST
Highlights

‘ಕುತ್ತಿಗೆ ಕೊಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯಬೇಕಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ರೀಡಾ ಸಚಿವ ನಾರಾಯಣಗೌಡ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ. 

ಬೆಂಗಳೂರು (ಏ.02): ‘ಕುತ್ತಿಗೆ ಕೊಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯಬೇಕಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ರೀಡಾ ಸಚಿವ ನಾರಾಯಣಗೌಡ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರನ್ನು ಬೆಳೆಸಲು ನಾವು ನಮ್ಮ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕೆ? ಇವರನ್ನು ಬೆಳೆಸಲು ನಾನು ನಮ್ಮ ಅಭ್ಯರ್ಥಿ ಹಾಕಬಾರದೆ? ನಿನ್ನ ನಡವಳಿಕೆ ನೋಡಿ ಎರಡನೇ ಬಾರಿ ಟಿಕೆಟ್‌ ಕೊಡಬಾರದಿತ್ತು. ಆದರೂ ಟಿಕೆಟ್‌ ಕೊಟ್ಟೆ. ಕೆ.ಆರ್‌.ಪೇಟೆ ಜನತೆ ಈ ಬಾರಿ ಚುನಾವಣೆಯಲ್ಲಿ ಈತನಿಗೆ ತಕ್ಕ ಪಾಠ ಕಲಿಸುತ್ತಾರೆ. ಪಕ್ಷಾಂತರಿಯಿಂದ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದರು.

ಯಾವುದೇ ಬಂಡಾಯಕ್ಕೂ ಸೊಪ್ಪು ಹಾಕಲ್ಲ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಬಂಡಾಯ ಎದುರಾದರೂ ಸೊಪ್ಪು ಹಾಕುವುದಿಲ್ಲ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ$್ಣವಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಪತ್ನಿ ಭವಾನಿಗೆ ಟಿಕೆಟ್‌ ನೀಡಬೇಕು ಇಲ್ಲವೇ ತಾವು ಹೇಳಿದವರಿಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಸೋದರ ಎಚ್‌.ಡಿ.ರೇವಣ್ಣಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

ಕಳ್ಳರನ್ನು ಕಳ್ಳ ಎನ್ನುವುದು ಅಪರಾಧವೇ: ರಣದೀಪ್‌ ಸಿಂಗ್‌ ಸುರ್ಜೇವಾಲ

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ನಾಯಕರು ನನ್ನನ್ನು ಭೇಟಿ ಮಾಡಿ ಟಿಕೆಟ್‌ಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ. ಯಾವ ಬಂಡಾಯವಿದ್ದರೂ ಅದಕ್ಕೆ ಸೊಪ್ಪು ಹಾಕಲ್ಲ. ನಾನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಸ್ಪಂದಿಸುತ್ತೇವೆ. ಯಾವ ಒತ್ತಡ ಹಾಕಿದರೂ ಇಲ್ಲ. ಕಾರ್ಯಕರ್ತರೇ ಅಂತಿಮ. ಕಾರ್ಯಕರ್ತರ ಭಾವನೆಗೆ ಸ್ಪಂದಿಸುತ್ತೇವೆ ಎಂದು ತಿಳಿಸಿದರು.

ರಾಮಸ್ವಾಮಿ ಅವರನ್ನು ನಾನು ಹೊರಗೆ ಹಾಕಿಲ್ಲ: ಪಕ್ಷ ಬಿಟ್ಟ ಶಾಸಕ ಎ.ಟಿ.ರಾಮಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುವುದಕ್ಕೆ ಹಾಸನದ ವಿಚಾರದಲ್ಲಿ ನಾನು ಯಾವುದೇ ನಿರ್ಣಯ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಅವರನ್ನು ಹೊರಗೆ ಹಾಕಿಲ್ಲ. ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಘಟನೆಗೆ ಏನಾದರೂ ಕಾರಣ ನೀಡಬೇಕಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ನಾನು ಅದಕ್ಕೆ ಸಮಜಾಯಿಷಿ ನೀಡುವುದಿಲ್ಲ. ಗುಬ್ಬಿ ಶ್ರೀನಿವಾಸ ಸಹ ಅದೇ ರೀತಿ ಹೇಳಿದರು ಅಲ್ಲವೇ ಎಂದರು.

ಚನ್ನಪಟ್ಟಣ ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಮುಖ್ಯವಲ್ಲ. ನಾನು ಈಗಾಗಲೇ ಚನ್ನಪಟ್ಟಣದಲ್ಲಿ ನಿಲ್ಲಬೇಕು ಎಂದು ಪಕ್ಷ, ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿ ಹೋಗಿ ಅರ್ಜಿ ಹಾಕಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರ ಪತನಗೊಳಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಸತೀಶ್‌ ಜಾರಕಿಹೊಳಿ

ನಂದಿನಿ ಪ್ಯಾಕ್‌ ಮೇಲೆ ಹಿಂದಿ ಹೇರಿಕೆಯ ಅಹಂ: ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋಬಯೊಟಿಕ್‌ ಮೊಸರು ಪ್ಯಾಕೆಟ್‌ ಮೇಲೆ ಹಿಂದಿಯ ‘ದಹಿ‘ ಎಂದು ಮುದ್ರಿಸಲಾಗಿದೆ. ಇದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟಪ್ರಾಧಿಕಾರವು ಕೆಎಂಎಫ್‌ಗೆ ಆದೇಶ ನೀಡಿರುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮೂಲ್‌ ಸಂಸ್ಥೆಯ ಅಡಿಯಾಳಲ್ಲ. ಕರ್ನಾಟಕ, ಭಾರತ ಗಣರಾಜ್ಯದ ಒಂದು ಭಾಗವೇ ಹೊರತು ಗುಜರಾತಿನ ವಸಾಹತುವಲ್ಲ ಎಂದೂ ಅವರು ಗುಡುಗಿದ್ದಾರೆ.

click me!