ಪೆನ್‌ ಡ್ರೈವ್‌ ಹೆಸರಿನಲ್ಲಿ ಕುಮಾರಸ್ವಾಮಿ ದಂಧೆ: ಸಚಿವ ಕೆ.ಎನ್‌. ರಾಜಣ್ಣ

By Kannadaprabha NewsFirst Published Jul 9, 2023, 4:30 AM IST
Highlights

ತಾಕತ್‌ ಇದ್ರೆ ಈಗಲೇ ಪೆನ್‌ ಡ್ರೈವ್‌ನಲ್ಲಿ ಏನಿದೆ ತೋರಿಸಲಿ. ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ಪೆನ್‌ ಡ್ರೈವ್‌ ಇಟ್ಕೊಂಡು ಅವ್ರೇನಾದ್ರೂ ದಂಧೆ ಮಾಡ್ತಾ ಇದ್ದಾರಾ ಎಂದು ಪ್ರಶ್ನಿಸಿದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ. 

ಮೈಸೂರು(ಜು.09): ಪೆನ್‌ ಡ್ರೈವ್‌ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದಂಧೆ ನಡೆಸುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಕತ್‌ ಇದ್ರೆ ಈಗಲೇ ಪೆನ್‌ ಡ್ರೈವ್‌ನಲ್ಲಿ ಏನಿದೆ ತೋರಿಸಲಿ. ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ಪೆನ್‌ ಡ್ರೈವ್‌ ಇಟ್ಕೊಂಡು ಅವ್ರೇನಾದ್ರೂ ದಂಧೆ ಮಾಡ್ತಾ ಇದ್ದಾರಾ ಎಂದು ಪ್ರಶ್ನಿಸಿದರು.

ನನಗೆ ಆ ಪೆನ್‌ಡ್ರೈವ್‌ ವಿಚಾರದಲ್ಲಿ ಯಾವ ಕುತೂಹಲವೂ ಇಲ್ಲ. ಹಳ್ಳಿ ಜಾತ್ರೆಗಳಲ್ಲಿ ಬುಟ್ಟಿಹಿಡ್ಕೊಂಡು ಹಾವಿದೆ, ಹಾವಿದೆ ಅಂತಾ ಹೇಳ್ತಾರೆ. ಬುಟ್ಟಿಯಲ್ಲಿ ಯಾವ ಹಾವೂ ಇರುವುದಿಲ್ಲ. ಪೆನ್‌ ಡ್ರೈವ್‌ ಹಿಡ್ಕೊಂಡು ಸುಮ್ಮನೆ ಓಡಾಡುತ್ತಿದ್ದಾರೆ. ಒಂದು ವೇಳೆ ಪೆನ್‌ ಡ್ರೈವ್‌ನಲ್ಲಿ ಅಂತಹ ಮಹತ್ವದ ವಿಚಾರ ಇದ್ರೇ ತಡ ಯಾಕೆ? ನಾನು ಇದನ್ನು ಬ್ಲಾಕ್‌ ಮೇಲ್‌ ಅಂತಾ ಹೇಳುವುದಿಲ್ಲ. ಮುಂದೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

Latest Videos

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ವರ್ಗಾವಣೆ ಆಗುತ್ತಿದೆ ಆದರೆ ದಂಧೆಯಲ್ಲ:

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ, ಆದರೆ ಅದು ದಂಧೆಯಲ್ಲ. ವರ್ಗಾವಣೆ ಅವರ ಸರ್ಕಾರವಿದ್ದಾಗ ಆಗಿರ್ಲಿಲ್ವಾ? ಎಲ್ಲಾ ಕಾಲಕ್ಕೂ ವರ್ಗಾವಣೆ ನಡೆಯುತ್ತೇ. ಅದನ್ನು ದಂಧೆ ಅನ್ನೋದು ತಪ್ಪು. ವೈಎಸ್‌ಟಿ ಅಂದ್ರೆ ಏನು ಅಂತಾ ನಂಗೆ ಗೊತ್ತಿಲ್ಲ. ಅವ್ರನ್ನೇ ಕೇಳಬೇಕು ಎಂದು ಅವರು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಚರ್ಚೆ ನಡೆಸಿ ಸೂಕ್ತ ತೀರ್ಮಾನ

ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮಾಂಸ ತಿನ್ನುತ್ತೇನೆ. ನೀವು ಬೇಡ ಎಂದರೂ ನಿಲ್ಲಿಸುವುದಿಲ್ಲ. ಹಿಂದಿನಿಂದಲೂ ಏನು ನಡೆದುಕೊಂಡು ಬಂದಿದೆಯೋ ಅದು ಸರಿಯಿದೆ. ಗೋ ಹತ್ಯೆ ಅನ್ನೋದು ಅತ್ಯಂತ ಸೂಕ್ಷ್ಮ ವಿಚಾರ. ಇದು ಭಾವನಾತ್ಮಕ ವಿಚಾರ ಕೂಡ. ಹಸು ಕಡಿಯಬೇಕು ಎಂದು ಹೇಳುವುದಿಲ್ಲ. ಕಡಿಯಬಾರದು ಎಂದು ಹೇಳುವುದಿಲ್ಲ. ಆದರೆ ರೈತರ ಅನುಕೂಲಕ್ಕೆ ತಕ್ಕಂತೆ ಕಾಯ್ದೆ ಮಾಡಬೇಕಿದೆ. ಈ ವಿಚಾರದಲ್ಲಿ ಹಸು ಅಥವಾ ಮತ್ತೊಂದು ಎನ್ನುವ ಪ್ರಶ್ನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

click me!